ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧದಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಶ್ರೀವಿಷ್ಣುವಿಗೆ ಅರ್ಚನೆ-ಸಮರ್ಪಣೆಯಾಗಿದೆ. ಇದರ ಫಲ ಸರ್ವರಿಗೂ ಲಭಿಸಲಿ. ನಾಡಿನಲ್ಲಿ ಸುಖ-ಶಾಂತಿ ಸಮೃದ್ಧಿಯಾಗಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದ್ದಾರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆ, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಭಜನಾ ಪರಿಷತ್ ಇವರ ಸಹಯೋಗದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಭಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು.
Also Read: ಭದ್ರಾವತಿ | ಸೇತುವೆ ಮೇಲಿಂದ ಹಳ್ಳಕ್ಕೆ ಹಾರಿ ಬಿದ್ದ ಬಸ್ | ಹಲವರು ಗಂಭೀರ | ಹೇಗಾಯ್ತು ಘಟನೆ?
ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಧರ್ಮರಾಯ, ಶ್ರೀಕೃಷ್ಣನಿಗೆ ಮುಂದೇನು ಮಾಡಬೇಕು ಮಾರ್ಗದರ್ಶನ ಕೊಡುವಂತೆ ವಿನಂತಿಸಿದಾಗ ಕ್ಷತ್ರೀಯನಾಗಿ ಹುಟ್ಟಿದರೂ ಸುಧೀರ್ಘ700 ವರ್ಷಗಳ ಕಾಲ ಬದುಕಿದ ಮತ್ತು ಅದರಲ್ಲಿ 525 ವರ್ಷಗಳನ್ನು ಅಧ್ಯಯನಕ್ಕೆ ಮೀಸಲಿಟ್ಟ ಭೀಷ್ಮಾಚಾರ್ಯರಲ್ಲಿ ಹೋಗಿ ಕೇಳು ಎಂದು ಸಲಹೆ ನೀಡುತ್ತಾರೆ. ಆಗ ಭೀಷ್ಮರು ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದು ವಿಷ್ಣು ಸಹಸ್ರನಾಮ ಎಂದು ಅರ್ಥಸಹಿತವಾಗಿ ಧರ್ಮರಾಯನಿಗೆ ಹೇಳುತ್ತಾನೆ. ಮಾನವನ ಪ್ರಯತ್ನಕ್ಕೆ ಭಗವಂತನ ಅನುಗ್ರಹವೂ ಬೇಕು ಎಂದರು.
ಹಕ್ಕಿಯೊಂದು ವಿಹರಿಸಲು ಎರಡೂ ರೆಕ್ಕೆಗಳು ಬೇಕು. ಆಗಮಾತ್ರ ಅದಕ್ಕೆ ಸ್ವಚ್ಛಂದವಾಗಿ ವಿಹರಿಸಲು ಸಾಧ್ಯ. ಅದೇ ರೀತಿ ಭಗವಂತನ ಅನುಗ್ರಹ ಬೇಕೇ ಬೇಕು. ಮಹಾವಿಷ್ಣವನ್ನು ಮನೆಯೊಳಗೆ ಇಟ್ಟರೆ ಸಾಲದು ಮನದೊಳಗೂ ಇಡಬೇಕು. ಆಗ ನಮ್ಮ ಬದುಕು ನಿತ್ಯೋತ್ಸವವಾಗುತ್ತದೆ. ನಿತ್ಯದಾನ, ಧರ್ಮ, ಸತ್ಕರ್ಮ ಆಚರಣೆ ಮಾಡಿದಾಗ ನಿತ್ಯಸಂಪತ್ತು ನಮ್ಮದಾಗುತ್ತದೆ. ಯಶಸ್ಸು, ಕೀರ್ತಿ ಲಭಿಸುತ್ತದೆ. ಹೃದಯದೊಳಗೆ ಭಗವಂತ ಬಂದು ನಿಲ್ಲುತ್ತಾನೆ. ಸಕಲ ಮಂಗಲಗಳಿಗೆ ಮನೆಯಾಗಿರುವವನು ಶ್ರೀಹರಿ. ಭಗವಂತನ ನಖದಿಂದ ಪವಿತ್ರ ಗಂಗಾನದಿ ಹುಟ್ಟಿ ಎಲ್ಲರನ್ನೂ ಪಾವನರನ್ನಾಗಿ ಮಾಡುವ ಹಾಗೆ ಭಗವಂತನ ಪಾದಸಂಪರ್ಕ ಪಡೆದ ಗೋಪಿಚಂದನ ಕೂಡ ಅಷ್ಟೇ ಪವಿತ್ರವಾಗಿದೆ. ಭಗವಂತನ ಸಂಪರ್ಕ ಪಡೆದ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರವಾಗಿದೆ. ಹಾಗೆಯೇ ಯಾರು ಭಗವಂತನನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೋ ಅವರಿಗೆ ಸದಾ ನಿತ್ಯೋತ್ಸವವಾಗಿರುತ್ತದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಬಾಳಗಾರ ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಗಂಧ ಸಂಸ್ಥೆ ಎಲ್ಲ ಸಮಯವನ್ನು ಸಮಾಜದ ಏಳ್ಗೆಗೆ ಶ್ರಮಿಸುತ್ತಿದೆ. ಈಶ್ವರಪ್ಪ ಅವರು ಮಾಜಿ ಉಪಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಭಗವಂತ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನಗಳನ್ನು ನೀಡಲಿ ಎಂದು ಹಾರೈಸಿದರು.
ಭಗವಂತ ಕೇಳಿದ್ದನ್ನೂ ಕೊಡುತ್ತಾನೆ. ಕೇಳದೆ ಇರುವ ಅನೇಕವನ್ನೂ ಕೊಡುತ್ತಾನೆ. ಇದು ಅಸರಂಭ. ಮುಂದೆ ಇಂಥಹ ಕಾರ್ಯಕ್ರಮ ಇಡೀ ಪ್ರಪಂಚಕ್ಕೆ ಪಸರಿಸಲಿ. ಭಗವಂತನ ಕೃಪೆಯಿಂದ ಅಭಿಪ್ರಾಯ ಸಾಮ್ಯ ಏರ್ಪಟಿದೆ. ಇಂದಿನ ವಿಧಾನಸಭೆ, ಲೋಕಸಭೆಗಳಲ್ಲಿ ಸೈಲ್ಸ್ ಇಲ್ಲ. ಆದರೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಸಭೆಯಲ್ಲಿ ಇಂತಹ ಸೈಲನ್ಸ್ ಇದೆ ಎಂದಾದರೆ ಇಂತಹ ಸೈಲನ್ಸ್ ವಿಶ್ವ ಸಂಸ್ಥೆಯಲ್ಲಿ ಆ ಮೂಲಕ ಇಡೀ ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು ಎನ್ನುವುದೇ ಈ ಪಾರಸಯಣದ ಉದ್ಧೇಶ ಎಂದರು.
ಭಗವಂತನ್ನು ಸ್ತುತಿಸುವವರಿಗೆ ಶ್ರೀ ವಿಷ್ಣು ಎಂದಿಗೂ ದು:ಖ ಕೊಡಲಾರ. ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಸಮಗ್ರ ಹಿಂದೂಗಳನ್ನು ಒಂದೆಡೆ ತರಲು ವಿಷ್ಣು ಸಹಸ್ರನಾಮ ಪಾರಾಯಣದ ಉದ್ಧೇಶವಾಗಿದೆ. ಜೀವನದಲ್ಲಿ ತಾಳ್ಮೆಯೇ ತಪಸ್ಸು. ಜೀವನ ಪರ್ಯಂತ ಧೈರ್ಯಗಡೆದೆ ಪಾಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು, ಮಹನೀಯರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ದು ಬಹಳ ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಅಲ್ಲಮ ಪ್ರಭು ಮೈದಾನದಲ್ಲಿ ೫೦೦೦ ಭಕ್ತರನ್ನು ಸೇರಿಸಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹಿಂದೂ ಧರ್ಮದ ಎಲ್ಲ ಸಮಾಜದ, ಜಾತಿಯವರು ಆಗಮಿಸಿ ಪಾರಾಯಣ ಪಠಣ ಮಾಡಿದ್ದಾರೆ. ಮುಸಲ್ಮಾನರಿಗೆಲ್ಲ ಭಾರತ ಆಶ್ರಯ ತಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ನ ಶಿವಮೊಗ್ಗ ಘಟಕ ಅಧ್ಯಕ್ಷರಾದ ಜೋಯ್ಸ್ ರಾಮಾಚಾರ್, ಶ್ರೀಗಂಧ ಕೋಶಾಧ್ಯಕ್ಷ ಕೆ.ಈ.ಕಾಂತೇಶ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ, ಪ್ರಮುಖರಾದ ಅಚ್ಚುತ್ರಾವ್, ಕುಮಾರ್ಶಾಸ್ತ್ರೀ, ಶಬರೀಶ್ ಕಣ್ಣನ್, ಉಮೇಶ್ ಆರಾಧ್ಯ, ಮಂಜುನಾಥ್ ಶರ್ಮ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















