ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ 2025-26ನೇ ಸಾಲಿನಲ್ಲಿ ವಿಪ್ರ ನೇರ ಸಾಲ ಯೋಜನೆಗೆ 24 ಕೋಟಿ ರೂ. ಹಾಗೂ ಸಾಂದೀಪಿನಿ ಶಿಷ್ಯ ವೇತನಕ್ಕೆ 5.50ಕೋಟಿ ರೂ. ಬಳಕೆ ಮಾಡಲಾಗಿದೆ ಎಂದು ಮಂಡಳಿಯ ಜಿಲ್ಲಾ ನಿರ್ದೇಶಕ ಪಿ.ಎಂ.ಮಾಲತೇಶ್ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪ್ರ ಸಾಲ ಯೋಜನೆ ಅತ್ಯಂತ ಜನಪ್ರಿಯತೆಗೊಂಡಿದ್ದು, ಇದರಲ್ಲಿ ರಾಜ್ಯಾದ್ಯಂತ 1,333 ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳಲ್ಲಿ 38 ಅರ್ಜಿಗಳು ತಿರಸ್ಕೃತಗೊಂಡಿವೆ. 1,295 ಅರ್ಜಿಗಳು ಅಂಗೀಕೃತಗೊಂಡಿರುತ್ತವೆ. ಈ ವರೆಗೆ 750 ಅಭ್ಯರ್ಥಿಗಳಿಗೆ ಶೇ.20ರ ಸಹಾಯಧನ ಹಾಗೂ ಶೇ. 4ರ ಬಡ್ಡಿ ದರದಲ್ಲಿ ತಲಾ 2 ಲಕ್ಷ ರೂ.ಗಳನ್ನು 33 ತಿಂಗಳ ಅವಧಿಯ ಮರುಪಾವತಿಗಾಗಿ ಅವಕಾಶ ಕಲ್ಪಿಸಲಾಗಿದೆ. 2026ರ ಮಾರ್ಚ್ನಲ್ಲಿ ಹಣ ಪಡೆದವರು ಜೂನ್ ತಿಂಗಳಿಂದ ಹಾಗೂ ಏಪ್ರಿಲ್ ನಲ್ಲಿ ಹಣ ಪಡೆದವರಿಗೆ ಜುಲೈನಿಂದ ಮರುಪಾವತಿಸುವ ಕಂತುಗಳು ಪ್ರಾರಂಭವಾಗುತ್ತವೆ ಎಂದರು.

ಬ್ರಾಹ್ಮಣರು ಮುಖ್ಯವಾಗಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದು ಅಡುಗೆ ಮಾಡುವವರು, ಬಡಿಸುವವರು, ಅಡುಗೆಗೆ ತಯಾರಿ ಮಾಡಿಕೊಡುವವರು, ಅರ್ಚಕರು ಹೀಗೆ ವಿವಿಧ ಕೆಲಸಗಳಲ್ಲಿ ನಿರತರಾದವರನ್ನು ಸರ್ಕಾರ ಅಸಂಘಟಿತ ಕಾರ್ಮಿಕರು ಎಂದ ಪರಿಗಣಿಸಿದ್ದು ಅವರೆಲ್ಲರಿಗೆ ಕಾರ್ಮಿಕ ಗುರುತಿನ ಪತ್ರ (ಲೇಬರ್ ಕಾರ್ಡ್) ನೀಡಲಾಗುವುದು. ಹವ್ಯಕ, ದೈವಜ್ಞ, ಗೌಡ ಸಾರಸ್ವತ ಹೀಗೆ ಎಲ್ಲ ಪ್ರಕಾರದ ಬ್ರಾಹ್ಮಣ ವರ್ಗದವರು ಇದಕ್ಕೆ ಅರ್ಹರಾಗಿರುತ್ತಾರೆ. ಇಲ್ಲಿಯವರೆಗೆ ಶಿವಮೊಗ್ಗದಲ್ಲಿ ಸುಮಾರು 230-40 ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ಇದನ್ನು ಪಡೆದಿರಬೇಕು.
-ಪಿ.ಎಂ.ಮಾಲತೇಶ್, ನಿರ್ದೇಶಕರು, ಕರಾಬ್ರಾಅಮಂ.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 164 ಅರ್ಜಿಗಳು ಸಲ್ಲಿಕೆಯಾಗಿದ್ದು ಈ ವರೆಗೆ 83 ಅಭ್ಯರ್ಥಿಗಳಿಗೆ ತಲಾ 2 ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗಿದೆ. ಅಭ್ಯರ್ಥಿಗಳ ಬ್ಯಾಂಕ್ ವಿವವರ, ಅಂಚೆ ಕಚೇರಿ ಖಾತೆಯ ಗರಿಷ್ಠ ವಹಿವಾಟು ಮಿತಿ 2 ಲಕ್ಷ ರೂ. ಇದ್ದುದರಿಂದ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸದಿರುವ ಕಾರಣಕ್ಕೆ ರಾಜ್ಯದಲ್ಲಿ 54 ಅಭ್ಯರ್ಥಿಗಳ ಅಕೌಂಟ್ ಗೆ ಜಮಾವಣೆಯಾದ ಹಣ ವಾಪಸ್ ಮಂಡಳಿಗೆ ಬಂದಿದೆ ಎಂದ ಅವರು ಅರ್ಜಿ ಸಲ್ಲಿಸುವವರು ಇದನ್ನು ಗಮನಿಸಬೇಕು. ಇವರೆಲ್ಲರಿಗೂ ಮೇ ಅಂತ್ಯದೊಳಗೆ ಪುನ ಅವರವರ ಬ್ಯಾಂಕ್ ಅಕೌಂಟಿಗೆ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಂದೀಪಿನಿ ಶಿಷ್ಯ ವೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ 25-26ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರತಿ ವಿದ್ಯಾರ್ಥಿಗೆ 15 ಸಾವಿರ ರೂ.ಗಳಂತೆ 5/50 ಕೋಟಿ ರೂ.ಹಣ ನೀಡಲಾಗಿದೆ. ಕೆ.ಎ.ಎಸ್., ಐ.ಎ.ಎಸ್. ಸ್ಪರ್ಧಾತ್ಮಕ ಪರಿಕ್ಷೆ ತೆಗೆದುಕೊಳ್ಳಲು ಚಾಣಕ್ಯ ತರಬೇತಿ ಯೋಜನೆಯಲ್ಲಿ ಒಂದು ಲಕ್ಷ ರೂ. ನೆರವು ನೀಡಲಾಗುತ್ತದೆ. ಆದರೆ ಈ ಯೋಜನೆ ಲಾಭ ಪಡೆಯಲು ಬಂದ ಅರ್ಜಿಗಳ ಸಂಖ್ಯೆ ತೀರಾ ವಿರಳವಾಗಿದೆ ಎಂದು ವಿಷಾಧಿಸಿದರು.
Also read: `ಬಿಎಸ್ವೈ ಅಭಿಮಾನೋತ್ಸವ’ಕ್ಕೆ ಅಭೂತಪೂರ್ವ ಬೆಂಬಲ: ಸಂಸದ ರಾಘವೇಂದ್ರ ಅಭಿನಂದನೆ
ಬರುವ ಜೂನ್ ಜುಲೈ ಮಾಹೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುವುದರಿಂದ ಆರ್ಥಿಕವಾಗಿ ಹಿಂದುಳಿದವರ ಪ್ರಮಾಣ ಪತ್ರ (ಇ.ಡಬ್ಲ್ಯೂ.ಎಸ್.) ವನ್ನು ಈಗಲೇ ಸಿದ್ಧಪಡಿಸಿಕೊಂಡು ಇರಬೇಕು. ಸಾಂದೀಪಿನ ಶಿಷ್ಯವೇತನಕ್ಕೆ ಹೆಚ್ಚಿನ ಅವಧಿ ಇರುವುದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬಾರದು. ಹೆಚ್ಚಿನ ಮಾಹಿತಿಗೆ ಅಕ್ಷಯ ಮೊ. 9620467788ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಕೆಬಿಎಮ್ಎಸ್ನ ಜಿಲ್ಲಾ ಸಂಚಾಲಕ ರಘುರಾಮ್, ಪ್ರಮುಖರಾದ ಸಂತೋಷ್ ಕುಮಾರ್, ಎನ್,ಎನ್.ಸುಂದರರಾಜ್, ಸುಮಿತ್ರಮ್ಮ, ಅಕ್ಷಯ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















