ಕಲ್ಪ ಮೀಡಿಯಾ ಹೌಸ್ | ಮೈಸೂರು |
ಧಾರ್ಮಿಕ ಆಕ್ರಮಣಗಳನ್ನು ತಡೆಯಲು ಭಾರತೀಯರು ಜಾಗೃತರಾಗಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ ಹೇಳಿದರು.
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠ ಆಯೋಜನೆ ಮಾಡಿರುವ ಅಧಿಕ ಜ್ಯೇಷ್ಠ ಮಾಸೋತ್ಸವ -33 ದಿನಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಸಂಜೆ ಅಗ್ರಹಾರದ ಕಾಶಿ ವಿಶ್ವೇಶ್ವರ ದೇವಾಲಯದ ಆವರಣದ ಬೃಹತ್ ವೇದಿಕೆಯಲ್ಲಿ ಚಾಲನೆ ನೀಡಿದ ಸಂದರ್ಭ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರೃ ಬಂದು 80 ವರ್ಷ ಕಳೆದರೂ ನಾವಿನ್ನೂ ಗುಲಾಮಿ ಮನೋಭಾವದಲ್ಲೇ ಇದ್ದೇವೆ. ಭಾರತ ಮತ್ತು ಹಿಂದೂಗಳು ಸಾವಿರಾರು ವರ್ಷಗಳಿಂದ ಪರಕೀಯರ ಪ್ರಭುತ್ವದಲ್ಲೇ ನಲುಗಿದ್ದಾರೆ. ಇತ್ತೀಚೆಗೆ ಜಾಗೃತಿ ಮೂಡುತ್ತಿದೆ. ದೇವ ನಿರ್ಮಿತ ದೇಶದಲ್ಲಿ ಮಠ ಮಾನ್ಯಗಳು ಧರ್ಮದ ಪುನರುತ್ಥಾನಕ್ಕೆ ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದರು.
ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಅಧಿಕ ಮಾಸದ ಅಂಗವಾಗಿ 33 ದಿನ ಮೈಸೂರಿನಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳಿಗೆ ಪ್ರೇರಣೆ ನೀಡಿದ್ದಾರೆ. ಗುರುಗಳ ಅನುಗ್ರಹದಿಂದ ಧಾರ್ಮಿಕ ಸೇವಾ ಕಾರ್ಯಗಳು ಸಂಪನ್ನಗೊಂಡು ಜನರಲ್ಲಿ ಭಕ್ತಿ , ಭಾವ ಹೆಚ್ಚಾಗಲಿ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸನಾತನ ಧರ್ಮ ಎಂಬುದೇ ಇಲ್ಲ ಎಂಬ ಚರ್ಚೆ ಆರಂಭವಾಗಿರುವ ಕಾಲಘಟ್ಟದಲ್ಲಿ ಭಾರತೀಯರಲ್ಲಿ ಎಚ್ಚರ ಮೂಡಬೇಕಿದೆ ಎಂದರು. ಮನದ ಕೊಳೆ ತೊಳೆಯಲು ಜ್ಯೇಷ್ಠ ಅಧಿಕ ಮಾಸ ಉತ್ತಮ ಕಾಲಘಟ್ಟವಾಗಿದೆ. ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡು ಸಾತ್ವಿಕ ಕಾರ್ಯಗಳನ್ನು ಹೆಚ್ಚಾಗಿ ಮಾಡಬೇಕು ಎಂದರು.
ಧ್ಯಾನ, ಪೂಜೆ, ಹೋಮ ಮತ್ತು ಅನ್ನದಾನಗಳು ಪುಣ್ಯ ಹೆಚ್ಚಿಸಲಿವೆ ಎಂದರು. ಧರ್ಮ ಪೀಠಗಳ ಸೇವಾ ಕಾರ್ಯಗಳಿಂದ ವೇದಾಧ್ಯಯನ ಮಾಡ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ನಮ್ಮ ಪರಂಪರೆ ಪಾಲನೆಗೆ ಸಹಕಾರಿ ಎಂದರು.
ಸ್ವಾಮೀಜಿ ಸಂದೇಶ
33 ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ, ಭಕ್ತಿ ದೃಢವಾಗಲು ಸತ್ಕರ್ಮ ಮಾಡುವುದು ಬಹಳ ಮುಖ್ಯ ಎಂದರು. ನಮ್ಮ ಪ್ರಾಚೀನ ದೇಗುಲಗಳು, ಮಠಗಳು, ಧಾರ್ಮಿಕ ಕ್ಷೇತ್ರಗಳು ದೇಶದ ಸಂಸ್ಕೃತಿಯನ್ನು ಅನಾದಿ ಕಾಲದ ವರೆಗೆ ಉಳಿಸುವ ತಾಣಗಳಾಗಿವೆ. ಅಲ್ಲಿಂದ ಪ್ರೇರಣೆ ಪಡೆದು ಧರ್ಮ ಮಾರ್ಗದಲ್ಲಿ ಸಾಗಬೇಕು ಎಂದರು.
ಭಕ್ತಿ, ಜ್ಞಾನ ಮತ್ತು ವಿರಕ್ತಿ ಮೂರ್ತಿಗಳ ಅನುಗ್ರಹದಿಂದ ಅಧಿಕ ಜ್ಯೇಷ್ಠ ಮಾಸ ಎಲ್ಲರಿಗೂ ಉತ್ತಮ ಫಲಗಳನ್ನೇ ನೀಡಲಿ ಎಂದವರು ಆಶಿಸಿದರು. ಮಠದ ದಿವಾನರಾದ ಶಶಿ ಆಚಾರ್ಯ, ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಇತರರು ಇದ್ದರು.
ಬೆಳಗ್ಗೆ ಧನ್ವಂತರಿ ಸನ್ನಿಧಿಯಲ್ಲಿ ಶ್ರೀಗಳಿಂದ ಸಂಸ್ಥಾನ ಪೂಜೆ, ಭಕ್ತರಿಗೆ ಮುದ್ರಾ ಧಾರಣೆ ನಡೆಯಿತು. ನಂತರ ಧನ್ವಂತರಿ ಹೋಮಕ್ಕೆ ಮತ್ತು ಅಖಂಡ ಪಾರಾಯಣಕ್ಕೆ ಚಾಲನೆ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















