ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ Kirloskar Ferrous Industries Limited ಆವರಣದಲ್ಲಿಜೂ.1ರಂದು ವಯೋನಿವೃತ್ತಿ ಹೊಂದಿದ ಕಾರ್ಮಿಕರಾದ ಅರ್ಜುನ್ ವಜಂತ್ರಿ ಹಾಗೂ ಎಸ್. ಎನ್. ಗುರುರಾಜ ಅವರ ಗೌರವಾರ್ಥವಾಗಿ ವಿದಾಯ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅರ್ಜುನ್ ವಜಂತ್ರಿ ಅವರು ಮೌಲ್ಡಿಂಗ್ ವಿಭಾಗದಲ್ಲಿ ಆಪರೇಟರ್ ಆಗಿ 31 ವರ್ಷ 8 ತಿಂಗಳುಗಳ ಕಾಲ ಸಂಸ್ಥೆಗೆ ಸೇವೆ ಸಲ್ಲಿಸಿದ್ದು, ಪೌಂಡ್ರಿ ವಿಭಾಗದ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಅನುಭವ ಮತ್ತು ಕಾರ್ಯನಿಷ್ಠೆಯಿಂದ ಗುರುತಿಸಿಕೊಂಡಿದ್ದರು.
ವಿಶೇಷವಾಗಿ ಕೋರ್ ಸೆಟ್ಟಿಂಗ್ ಹಾಗೂ ಕೋರ್ ಹ್ಯಾಂಡ್ಲಿಂಗ್ ಕಾರ್ಯಗಳಲ್ಲಿ ಪರಿಣತಿ ಹೊಂದಿದ್ದ ಅವರು, ಗುಣಮಟ್ಟದ ಕೋರ್ಗಳನ್ನು ಸಮಯಕ್ಕೆ ಸರಿಯಾಗಿ ಮೌಲ್ಡಿಂಗ್ ವಿಭಾಗಕ್ಕೆ ಒದಗಿಸುವ ಮೂಲಕ ಉತ್ಪಾದನಾ ಪ್ರಕ್ರಿಯೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು.
Also read: ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ
ಅದೇ ರೀತಿ, ಎಸ್. ಎನ್. ಗುರುರಾಜ ಅವರು ಯುಟಿಲಿಟಿ ವಿಭಾಗದಲ್ಲಿ 31 ವರ್ಷ 10 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದು, ಕಂಪ್ರೆಸರ್ಗಳ ನಿರ್ವಹಣೆ ಮತ್ತು ದುರಸ್ತಿಯಲ್ಲಿ ತಮ್ಮ ಪರಿಣತಿಯನ್ನು ತೋರಿದ್ದರು. ತಮ್ಮ ತಾಂತ್ರಿಕ ಜ್ಞಾನ ಹಾಗೂ ಸಮರ್ಪಿತ ಸೇವೆಯಿಂದ ವಿಭಾಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗವು ಈ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಪೌಂಡ್ರಿ ವಿಭಾಗದ ಹಿರಿಯ ಉಪಾಧ್ಯಕ್ಷ ಜಿ.ಎಸ್. ಕೃಷ್ಣಮೂರ್ತಿ, ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷ ಚಂದ್ರಶೇಖರ ಚಾರಿ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಶಿವಯ್ಯ ಸ್ವಾಮಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಂಠಿ ಅವರು ನಿವೃತ್ತ ಉದ್ಯೋಗಿಗಳ ಸೇವೆ, ಸಾಧನೆ ಹಾಗೂ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಜೆ.ಎಸ್. ಸತೀಶ್, ಕಿರಣ್ ಶೇಜೇಕರ್, ಕಾರ್ಮಿಕ ಸಂಘದ ಪದಾಧಿಕಾರಿಗಳು, ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಉಪಸ್ಥಿತರಿದ್ದು, ನಿವೃತ್ತಿ ಹೊಂದಿದ ಇಬ್ಬರು ಉದ್ಯೋಗಿಗಳಿಗೆ ಗೌರವ ಸಲ್ಲಿಸಿ ಅವರ ಮುಂದಿನ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲೆಂದು ಶುಭ ಹಾರೈಸಿದರು.
“ಕರ್ತವ್ಯದಲ್ಲಿ ತೋರಿದ ನಿಷ್ಠೆಯೇ ವ್ಯಕ್ತಿಯ ನಿಜವಾದ ಸಂಪತ್ತು; ನಿವೃತ್ತಿ ಸೇವೆಗೆ ಅಂತ್ಯವಾದರೂ, ಸಾಧನೆಗಳ ನೆನಪು ಎಂದೆಂದಿಗೂ ಜೀವಂತವಾಗಿರುತ್ತದೆ.”
ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















