ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾಷೆಯ ವೈವಿಧ್ಯತೆಯನ್ನು ಬೆಳೆಸಿದಾಗ ಮಾತ್ರ, ನಮ್ಮ ಸಂಸ್ಕೃತಿ ನಿಜವಾಗಿಯೂ ಬೆಳೆಯುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾಲೇಜಿನ ನವೀಕೃತ ಕಟ್ಟಡದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
Also read: ಜುಲೈ 17ಕ್ಕೆ ‘ದಿ ಒಡಿಸ್ಸಿ’ ಅಬ್ಬರ: ಮುಂಬೈಗೆ ಬರ್ತಿದ್ದಾರೆ ಕ್ರಿಸ್ಟೋಫರ್ ನೋಲನ್!
ಮಕ್ಕಳಿಗೆ ಶಿಕ್ಚಣದ ಜೊತೆಗೆ ಸಂಸ್ಕಾರ ಬೇಕಿದೆ. ನಮ್ಮ ಆತ್ಮಸಾಕ್ಷಿಗೆ ಸದಾ ಗೌರವ ನೀಡಬೇಕು. ಈ ಜಗತ್ತು ಎಂದಿಗೂ ಓದಲಾಗದ ಪುಸ್ತಕ. ಯಾವುದೇ ಶುಲ್ಕವಿಲ್ಲದೆ ಜೀವನದಲ್ಲಿ ಪಾಠ ಕಲಿಸುವ ಅತ್ಯುತ್ತಮ ಸಂಸ್ಥೆ ಬದುಕು. ಜೀವನಾನುಭವ ಒಬ್ಬೊಬ್ಬರಿಗೆ ಒಂದೊಂದು ಪಾಠ ಕಲಿಸುತ್ತದೆ. ಅಂತಹ ವಾಸ್ತವತೆಯ ಅರಿವಿನ ಮೂಲಕ ಬದುಕು ಮುನ್ನಡೆಸಿದಾಗ ಮಾತ್ರ ನಿಜವಾದ ಉನ್ನತಿ ಸಾಧ್ಯ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮಾತ್ರ ಉನ್ನತ ಶಿಕ್ಷಣದ ಬೆಳವಣಿಗೆಗೆ ಸಾಕಾಗುವುದಿಲ್ಲ. ಇಂದಿನ ಕಾಲದಲ್ಲಿ ಮಾಹಿತಿ ಎಲ್ಲೆಡೆ ಸುಲಭವಾಗಿ ಲಭ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು, ಕಾಲೇಜಿಗೆ ಏಕೆ ಬರಬೇಕು?, ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉಪನ್ಯಾಸಕರು ಮತ್ತು ಶಿಕ್ಷಣ ಸಂಸ್ಥೆಗಳು ಉತ್ತರಿಸಬೇಕಾಗಿದೆ.
ಇದೇ ವೇಳೆ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ 95 ಕ್ಕೂ ಹೆಚ್ಚು ಜಾತಿಯ ಹಣ್ಣಿನ ಗಿಡಗಳನ್ನು ಹೊಂದಿದ ನೂತನ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಲಾಯಿತು. ಜೊತೆಯಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ, ನೂತನವಾಗಿ ನಿರ್ಮಾಣಗೊಂಡ ಕೊಠಡಿಗಳು, ಆಧುನಿಕ ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಸಭಾಂಗಣ, ಪ್ರಾಂಶುಪಾಲರ ಕೊಠಡಿ, ನವೀಕೃತ ಗ್ರಂಥಾಲಯ ಹಾಗೂ ಕಿರು ಸಭಾಂಗಣಗಳನ್ನೂ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪಿ.ಮೈಲಾರಪ್ಪ, ಎಚ್.ಸಿ.ಶಿವಕುಮಾರ್, ಎಂ.ಎಸ್.ಅನಂತದತ್ತಾ, ಕುಲಸಚಿವರಾದ ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

