ಕಲ್ಪ ಮೀಡಿಯಾ ಹೌಸ್ | ಪುಣೆ |
ಅದ್ಧೂರಿ ವಿವಾಹಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದ ನಡುವೆಯೇ ಭಾವಿ ವಧು ತನ್ನ ಪ್ರಿಯಕರನೊಂದಿಗೆ ಸೇರಿ ಉದ್ಯಮಿ ಪುತ್ರನನ್ನು 350 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯಿಂದ ಇದು ಆಕಸ್ಮಿಕ ಸಾವು ಅಲ್ಲ, ಪೂರ್ವ ಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.
ಜೂನ್ 19ರಂದು ಲೋಹಗಢ ಕೋಟೆಯಲ್ಲಿ ಮೃತಪಟ್ಟ ಜೈಪುರ ಮೂಲದ ಕೇತನ್ ವಿಶಾಲ್ ಅಗರ್ವಾಲ್ (25) ಅವರ ಸಾವಿನ ಪ್ರಕರಣವನ್ನು ಪೊಲೀಸರು ಮರು ತನಿಖೆಗೆ ಒಳಪಡಿಸಿದಾಗ ಅಚ್ಚರಿ ಮಾಹಿತಿ ಬಹಿರಂಗವಾಯಿತು. ಪ್ರಕರಣ ಸಂಬಂಧ ಕೇತನ್ನ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇತನ್, ಪಿಂಪ್ರಿ-ಚಿಂಚ್ವಾಡ್ನ ಖ್ಯಾತ ನಿರ್ಮಾಣ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರನಾಗಿದ್ದ.
ಮಾಹಿತಿ ಪ್ರಕಾರ, ಕೇತನ್ ಮತ್ತು ಸಿಯಾ ಅವರ ವಿವಾಹ ಉದಯಪುರದಲ್ಲಿ ನಡೆಯಬೇಕಾಗಿತ್ತು. ಈ ಮದುವೆಗೆ ಜೈಪುರದಲ್ಲಿ ಸುಮಾರು 17 ಕೋಟಿ ರೂ. ವೆಚ್ಚದ ಅರಮನೆ ಬುಕ್ ಮಾಡಲಾಗಿತ್ತು. ಅತಿಥಿಗಳಿಗಾಗಿ ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯೂ ಮಾಡಲಾಗಿತ್ತು. ಆದರೆ ಸಿಯಾಳಿಗೆ ಈ ಮದುವೆ ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ಮದುವೆಯಿಂದ ತಪ್ಪಿಸಿಕೊಳ್ಳಲು ಈ ಹಿಂದೆ ಬಾಲಿ ಪ್ರವಾಸಕ್ಕೂ ಅಡ್ಡಿಪಡಿಸಲು ತನ್ನ ಪಾಸ್ಪೋರ್ಟ್ನ್ನು ತಾನೇ ಹಾನಿಗೊಳಪಡಿಸಿದ್ದಳು.
Also read: ಬೆಂಗಳೂರು: ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ — ಲಾರಿಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು!
ಪೊಲೀಸರ ಪ್ರಕಾರ, ಕೇತನ್ನನ್ನು ಕೊಲ್ಲಲು ಆರೋಪಿಗಳು ಮೂರು ಬಾರಿ ಸಂಚು ರೂಪಿಸಿದ್ದರು. ಮೇ 31ರಂದು ಮೊದಲ ಬಾರಿ ಲೋಹಗಢ ಕೋಟೆಯಲ್ಲಿ ಚಾರಣದ ವೇಳೆ ತಳ್ಳಲು ಯತ್ನ ವಿಫಲವಾಗಿತ್ತು. ಜೂನ್ 14ರಂದು ಎರಡನೇ ಪ್ರಯತ್ನವೂ ಕೈಗೂಡಲಿಲ್ಲ. ಅಂತಿಮವಾಗಿ ಜೂನ್ 19ರಂದು, ಸಿಯಾಳ ಹುಟ್ಟುಹಬ್ಬದ ದಿನ, ಫೋಟೋಶೂಟ್ ನೆಪದಲ್ಲಿ ಕೇತನ್ನ್ನು ಪ್ರಪಾತದ ಅಂಚಿಗೆ ಕರೆದು ನಿಲ್ಲಿಸಿ, ಹಿಂಬದಿಯಿಂದ ಚೇತನ್ ತಳ್ಳಿ ಕೊಲೆ ಮಾಡಲಾಗಿದೆ.
ಆರಂಭದಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎಂದು ನಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಪೊಲೀಸರು ಸಹ ಮೊದಲಿಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಸಿಯಾ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದುದರಿಂದ ಅನುಮಾನಗೊಂಡ ಪೊಲೀಸರು, ಆಕೆಯ ಕರೆ ವಿವರಗಳು (CDR), ಸಾಮಾಜಿಕ ಜಾಲತಾಣ ಚಟುವಟಿಕೆಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಕೊಲೆ ಸಂಚು ಬಯಲಾಗಿದೆ.
ಈ ಘಟನೆ ದೇಶದಾದ್ಯಂತ ಆಘಾತ ಮೂಡಿಸಿದ್ದು, ಪ್ರೇಮ ಸಂಬಂಧ ಮತ್ತು ಮದುವೆ ಒತ್ತಡದ ನಡುವೆ ನಡೆದ ಕ್ರೂರ ಅಪರಾಧವಾಗಿ ಚರ್ಚೆಗೆ ಗ್ರಾಸವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









