ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯದಿಂದ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಇತರೆ ರಾಜ್ಯಗಳಿಗೆ ಅಡಿಕೆ ಸಾಗಿಸಲಾಗುತ್ತಿದ್ದು, 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಎಫ್ಡಿಎ ಅಧಿಕಾರಿಗಳು ತಡೆ ಹಿಡಿದಿದ್ದು ಇದರಿಂದಾಗಿ ರಾಜ್ಯದಲ್ಲಿ ಅಡಿಕೆ ವ್ಯಾಪಾರವೇ ಸ್ಥಗೀತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾರಿಗಳನ್ನು ತಡೆದಿರುವುದನ್ನು ಮಹಾಮಂಡಳವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಚೋಗರು ಮಿಶ್ರಿತ ಅಡಿಕೆಯನ್ನು ರಾಸಾಯಿನಿಕ ಮಿಶ್ರಿತ ಅಡಿಕೆಯೆಂದು ಹಾಗೂ ಅಡಿಕೆ ಸುಲಿಯುವ ಯಂತ್ರದಿಂದ ಸುಲಿದ ಅಡಿಕೆ ಗುಣಮಟ್ಟವಲ್ಲದ ಎರಡನೇ ದರ್ಜೆಯ ಅಡಿಕೆಯೆಂದು ಪರಿಗಣಿಸಿ ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯದಲ್ಲಿ ಕಳುಹಿಸಿರುವುದು ಅಸಮಂಜಸ ಕ್ರಮವಾಗಿದೆ ಎಂದರು.
ಈ ಕುರಿತು ರಾಜ್ಯದ ಪ್ರತಿನಿಧಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದರ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನೂನು ಬದ್ದವಾಗಿ ಸಾಗಾಣಿಕೆ ಆಗುತ್ತಿರುವ ಅಡಿಕೆ ಲಾರಿಗಳನ್ನು ಅನಗತ್ಯವಾಗಿ ತಡೆಯದಂತೆ ಹಾಗೂ ತಡೆ ಹಿಡಿದಿರುವ ಲಾರಿಗಳನ್ನು ಬೇಷರಾತ್ತಾಗಿ ಬಿಡುಗಡೆ ಮಾಡುವಂತೆ ಮಹಾಮಂಡಳವು ಮನವಿ ಮಾಡಿದೆ ಎಂದರು.
ಕಳೆದ 60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದರೂ ಆರ್ಎಸ್ಎಸ್ ನೋಂದಣಿ ಬಗ್ಗೆ ಪ್ರಶ್ನಿಸಿಲ್ಲ. ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಸುಖಾಸುಮ್ಮನೆ ಈ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೆಚ್ಚಿನ ಮಹತ್ವ ಕೊಡಬೇಕಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್ನ 17 ಶಾಸಕರನ್ನು ಖರೀದಿಸಲಾಗಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಅವರು ಈಗ ಬಿಜೆಪಿಯಲ್ಲಿಲ್ಲ. ಬಿಜೆಪಿಯಲ್ಲಿದ್ದಾಗಲೇ ಆ ಕುರಿತು ಮಾತನಾಡಬೇಕಾಗಿತ್ತು. ಈಗ ಮಾತನಾಡಿ ಗೊಂದಲ ಸೃಷ್ಟಿಸಬಾರದು.
-ಆರಗ ಜ್ಞಾನೇಂದ್ರ
ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನಿರಂತರ ಪ್ರಯತ್ನ ಮುಂದುವರೆದಿದೆ. ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ ಮೂಲಕ ಅಡಿಕೆ ಸಾಗಿಸುವ ಲಾರಿಗಳನ್ನು ಮಹಾರಾಷ್ಟ್ರದ ಅಧಿಕಾರಿಗಳು ತಡೆಯದೆ ಇತರೆ ರಾಜ್ಯಗಳಿಗೆ ತಲುಪುವ ಅಡಿಕೆ ಲಾರಿಗಳನ್ನು ಆಯಾ ರಾಜ್ಯಗಳ ಅಧಿಕಾರಿಗಳು ಪರಿಶೀಲಿಸುವುದಕ್ಕೆ ನಮ್ಮ ಅಭ್ಯಂತರ ಯಾವುದು ಇಲ್ಲ ಎಂದರು.
ವಿದೇಶಗಳಿಂದ ಅಕ್ರಮವಾಗಿ ಅಮದಾಗುವ ಅಡಿಕೆಯನ್ನು ತಡೆಗಟ್ಟುವಂತೆ ಹಾಗೂ ಅಡಿಕೆಗೆ ಇರುವ ಕನಿಷ್ಟ ಅಮದು ಬೆಲೆಯನ್ನು 351 ರಿಂದ 450ಕ್ಕೆ ಹೆಚ್ಚಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸ್ವೀಟ್ ಸುಪಾರಿಯ ವಾರ್ಷಿಕ ನವೀಕರಣವನ್ನು ಕೈಬಿಡುವಂತೆ ಹಾಗೂ ಅಡಿಕೆ ಸಂಶೋಧನೆ ನಡೆಸುವ ಕುರಿತು ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಉತ್ತರ ಪ್ರದೇಶದ ಸರ್ಕಾರವು ಇತರೆ ರಾಜ್ಯಗಳಿಂದ ಬರುವ ಅಡಿಕೆಗೆ ಮಂಡಿ ತೆರಿಗೆ ವಿಧಿಸುತ್ತಿದ್ದು, ಈ ತೆರಿಗೆಯಿಂದ ವಿನಾಯಿತಿ ನೀಡುವಂತೆ ಅಲ್ಲಿನ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
Also read: ಪುಣೆ: 17 ಕೋಟಿ ಮದುವೆ ತಪ್ಪಿಸಲು ಭಾವಿ ವರನನ್ನೇ ಪ್ರಪಾತಕ್ಕೆ ತಳ್ಳಿ ಹತ್ಯೆ
ಅಡಿಕೆಗೆ ರಾಸಾಯನಿಕ ಬಣ್ಣ ಹಾಕಿ ಗುಣಮಟ್ಟವನ್ನು ಕೆಲವು ವ್ಯಾಪಾರಿಗಳು ಹಾಗೂ ಗೇಣಿದಾರರು ಹಾಳು ಮಾಡುತ್ತಿದ್ದಾರೆ. ಇದರಿಂದಾಗಿ ಅಡಿಕೆ ಬೆಲೆ 2 ಸಾವಿರ ರೂ ಕುಸಿತ ಕಂಡಿದೆ. ಇದರ ಬಗ್ಗೆ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು. ಮಹಾಮಂಡಳಿ ಬೆಂಬಲಕ್ಕೆ ನಿಲ್ಲಲ್ಲಿದೆ ಎಂದ ಅವರು ರಾಸಾಯಿನಿಕ ಮಿಶ್ರಣದ ಬಗ್ಗೆ ಜೂ. 26 ರಂದು ತೀರ್ಥಹಳ್ಳಿಯಲ್ಲಿ ಅಡಿಕೆ ಚೇಣಿದಾರರ ಸಭೆಯನ್ನು ಕರೆಯಲಾಗಿದೆ ಎಂದ ಅವರು, ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಮಂಡಳದ ಉಪಾಧ್ಯಕ್ಷ ಕೆ.ಎಂ.ಸೂರ್ಯನಾರಾಯಣ, ನಿರ್ದೇಶಕರಾದ ಹೆಚ್.ಎನ್.ಶಿವಶಂಕರ, ಗೋಪಾಲಕೃಷ್ಣ ವಿ. ವೈದ್ಯ, ಗಣಪತಿ ಪರಮೇಶ್ವರ ಭಟ್, ಹೆಚ್.ಆರ್.ಅಶೋಕ ನಾಯ್ಕ, ಸುಬ್ರಮಣ್ಯ ಭಟ್, ಮಹಾಮಂಡಳದ ಸಿಇಓ ಮಂಜುನಾಥ ಶರ್ಮ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








