ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರೋಟರಿ ಸಂಸ್ಥೆಯ ಪದಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಎಚ್.ಎಲ್. ರವಿ (ಪಿ.ಜಿ.ಡಿ) ಅವರು, ರೋಟರಿ ಸಂಸ್ಥೆಯ ಮುಖ್ಯ ಉದ್ದೇಶಗಳು ಮತ್ತು ಗುರಿಗಳನ್ನು ವಿವರಿಸಿದರು.
ರೋಟರಿ ಸಂಸ್ಥೆಯು “ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ” ಎಲ್ಲಾ ಸದಸ್ಯರಿಂದ ಟಿಆರ್ಎಫ್ (TRF) ಮೂಲಕ ನಿಧಿ ಸಂಗ್ರಹಿಸಿ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು. ವಿಶ್ವದ ವಿವಿಧ ರಾಷ್ಟ್ರಗಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸುಮಾರು 80 ಶೇಕಡಾ ಧನಸಹಾಯ ನೀಡಿರುವುದನ್ನು ಅವರು ಉಲ್ಲೇಖಿಸಿದರು.
ಸಾಮಾಜಿಕ ಬದ್ಧತೆಯ ಜೊತೆಗೆ ಕೌಟುಂಬಿಕ ಬದ್ಧತೆಯೂ ಸದಸ್ಯರಲ್ಲಿ ಇರಬೇಕು ಎಂದು ಹೇಳಿದ ಅವರು, ರೋಟರಿಯ ಬೆಳವಣಿಗೆ ಮತ್ತು ಸೇವಾ ಪಯಣವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ರೊ. ಶಿವಮೂರ್ತಿ ಅವರು ರೊ. ರವಿ ಕೆ.ಎಸ್ ಅವರಿಗೆ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿದರು.
Also read: ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಎಚ್ಚರಿಕೆ ಅಗತ್ಯ | ರವಿಕುಮಾರ್ ಸಲಹೆ
ಈ ಸಂದರ್ಭದಲ್ಲಿ ಡಾ. ವಿರೇಂದ್ರ ಎಂ. ವಾರ್ಷಿಕ ವರದಿ ವಾಚಿಸಿ, 2025-26 ಸಾಲಿನಲ್ಲಿ ರೋಟರಿ ಸಂಸ್ಥೆಯು 130 ಕ್ಕೂ ಹೆಚ್ಚು ಸಮುದಾಯ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. ಪ್ರಮುಖ ಕಾರ್ಯಕ್ರಮಗಳಲ್ಲಿ ರಕ್ತದಾನ ಶಿಬಿರ, ವನಮಹೋತ್ಸವ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ, ಎರಡು ಹೊಲಿಗೆ ಯಂತ್ರಗಳ ವಿತರಣೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳು ಸೇರಿವೆ ಎಂದು ಹೇಳಿದರು.
ವಿದಾಯ ಭಾಷಣದಲ್ಲಿ ರೊ. ಶಿವಮೂರ್ತಿ ಅವರು ತಮ್ಮ ಅವಧಿಯಲ್ಲಿ ಮಾಡಿದ ಕಾರ್ಯಗಳು ತೃಪ್ತಿ ತಂದಿವೆ ಎಂದು ತಿಳಿಸಿ, ಹೊಸ ಅಧ್ಯಕ್ಷರಿಗೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು. ರೋಟರಿ ಅಧ್ಯಕ್ಷರ ಹೊಣೆಗಾರಿಕೆ ಕೇವಲ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಿಗೆ ಸೀಮಿತವಲ್ಲ, ವರ್ಷಪೂರ್ತಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ರೊ. ರವಿ ಕೆ.ಎಸ್ ಅವರು ಮಾತನಾಡಿ, ಅಧ್ಯಕ್ಷ ಸ್ಥಾನವಹಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ತಮ್ಮ ಅವಧಿಯಲ್ಲಿ ಶಾಶ್ವತ ಮತ್ತು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಸದಸ್ಯರು ಮತ್ತು ಸ್ನೇಹಿತರ ಸಹಕಾರವೇ ಯಶಸ್ಸಿನ ಮೂಲ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ರೊ. ತೀರ್ಥಯ್ಯ ಕೆ.ಹೆಚ್ ಅವರು, ರೋಟರಿ ಸಂಸ್ಥೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಸಮುದಾಯದೊಂದಿಗೆ ಬೆರೆತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಾಲೆ-ಕಾಲೇಜುಗಳಿಗೆ ಸಹಕಾರ ನೀಡಲು ಅಂತರಾಷ್ಟ್ರೀಯ ನಿಧಿಗಳನ್ನು ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಜೋನಲ್ ಲೆಫ್ಟಿನೆಂಟ್ ರೊ. ರಘು ಎಂ.ಆರ್ ಅವರು ಸದಸ್ಯರ ಕಾರ್ಯವೈಖರಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಂಟು ನೂತನ ಸದಸ್ಯರನ್ನು ರೋಟರಿಗೆ ಸೇರಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ರೊ. ಶಿವಕುಮಾರ್ ಎಂ.ಬಿ ಹಾಗೂ ರೊ. ಶಿವಪ್ರಕಾಶ್ ಅವರು ರೋಟರಿ ಸಂಸ್ಥೆಗೆ 500 ಡಾಲರ್ ದೇಣಿಗೆ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮವನ್ನು ರೊ. ಶಿವಮೂರ್ತಿ ಸ್ವಾಗತಿಸಿ, ರೊ. ಮಧುಸೂದನ್ ವಂದಿಸಿ, ರೊ. ಪ್ರಶಾಂತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








