ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಮಾಜಿ ಸಚಿವ ರಾಮಚಂದ್ರ ಗೌಡರ ನಿಧನದ ಸುದ್ದಿ ತೀವ್ರ ಆಘಾತ ಮತ್ತು ದುಃಖವನ್ನು ತಂದಿದೆ. ಅವರ ಅಗಲಿಕೆಯಿಂದ ಕೇವಲ ಒಬ್ಬ ಹಿರಿಯ ಸಹೋದ್ಯೋಗಿಯನ್ನಷ್ಟೇ ಅಲ್ಲ, ಬದುಕಿನ ಅತ್ಯಮೂಲ್ಯ ಒಡನಾಡಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಅತ್ಯಂತ ಆಪ್ತ ಸ್ನೇಹಿತರು, ಹಿರಿಯ ನಾಯಕ ರಾಮಚಂದ್ರ ಗೌಡರು ಮತ್ತು ನಾನು ಕೇವಲ ರಾಜಕೀಯ ಸಹೋದ್ಯೋಗಿಗಳಲ್ಲ, ನಮ್ಮ ಸ್ನೇಹಕ್ಕೆ ದಶಕಗಳ ಇತಿಹಾಸವಿದೆ. ನಾವು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಿಂದಲೇ ಪರಸ್ಪರ ಕ್ಲಾಸ್ಮೇಟ್ಗಳಾಗಿದ್ದೆವು. ಅಂದಿನಿಂದ ಬೆಳೆದ ನಮ್ಮ ಸ್ನೇಹ ಮತ್ತು ಬಾಂಧವ್ಯ ಕೊನೆಯವರೆಗೂ ಅಷ್ಟೇ ತೀವ್ರವಾಗಿ ಮತ್ತು ಜೀವಂತವಾಗಿತ್ತು.
ನಂತರದ ದಿನಗಳಲ್ಲಿ, ರಾಷ್ಟ್ರೀಯ ವಿಚಾರಧಾರೆಯಿಂದ ಪ್ರೇರಿತರಾಗಿ ನಾವು ಜನಸಂಘದ ಕಾಲದಿಂದಲೂ ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟುವ ಕೆಲಸ ಮಾಡಿದ್ದೇವೆ. ತುರ್ತು ಪರಿಸ್ಥಿತಿಯ ದಿನಗಳ ಹೋರಾಟದಿಂದ ಹಿಡಿದು ಪಕ್ಷದ ಸಂಘಟನೆಯವರೆಗೆ ನಾವು ಸವೆಸಿದ ಹಾದಿ ಮತ್ತು ಹಂಚಿಕೊಂಡ ನೆನಪುಗಳು ಅಜರಾಮರ.
Also read: ಪೌರಕಾರ್ಮಿಕರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು: ಶಾಸಕ ಚನ್ನಬಸಪ್ಪ
1988ರಲ್ಲಿ ನಾವಿಬ್ಬರೂ ಒಂದೇ ಅವಧಿಗೆ ಒಟ್ಟಿಗೆ ಕರ್ನಾಟಕ ವಿಧಾನ ಪರಿಷತ್ತನ್ನು (ಮೇಲ್ಮನೆ) ಪ್ರವೇಶಿಸಿದೆವು. ಅಲ್ಲಿಂದ ಮುಂದೆ ಸದನದ ಒಳಗೂ ಮತ್ತು ಹೊರಗೂ ಶಾಸನಸಭೆಯ ನಡಾವಳಿಗಳಲ್ಲಿ ಜೊತೆಯಾಗಿ ಸಕ್ರಿಯವಾಗಿ ಪಾಲ್ಗೊಂಡಿದ್ದೆವು. ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅತ್ಯಂತ ಆರಂಭಿಕ ದಿನಗಳಲ್ಲಿ, ಅದರ ಮೊದಲ ಕಾರ್ಪೊರೇಟರ್ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದ ರಾಮಚಂದ್ರ ಗೌಡರು, ನಗರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ನಾಯಕರು. ತದನಂತರ ಸಚಿವರಾಗಿ, ಸಾರ್ವಜನಿಕ ಜೀವನದಲ್ಲಿ ಅವರು ನೀಡಿದ ಕೊಡುಗೆ ಅಪಾರ.
ಸಂಘಟನಾತ್ಮಕವಾಗಿ ಅವರು ಹೊಂದಿದ್ದ ಚತುರತೆ, ಶಿಸ್ತು ಹಾಗೂ ಅವರ ರಾಜಕೀಯ ಸಿದ್ಧಾಂತ ಮತ್ತು ಸದಾಶಯಗಳು ಸಾರ್ವಜನಿಕ ಜೀವನದಲ್ಲಿ ಮತ್ತು ನಮ್ಮೆಲ್ಲರ ನೆನಪಿನಲ್ಲಿ ಸದಾ ಹಸಿರಾಗಿರಲಿವೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









