ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೀರೇ ಇಲ್ಲದಿದ್ದರೂ, ಎತ್ತಿನಹೊಳೆ ಹೆಸರಿನಲ್ಲಿ, “ಎತ್ತುವಳಿಗಾಗಿ” ಇಡೀ ಹಾಸನ ಜಿಲ್ಲೆಯ ಶಿರಾಡಿ ಘಾಟಿಯ ಬೆಟ್ಟ ಗುಡ್ಡಗಳನ್ನು ಆಪೋಶನ ತೆಗೆದುಕೊಂಡಂತೆ ಇದೀಗ, ಮನಸೋ ಇಚ್ಛೆ ಕಲ್ಪಿತ ವಿದ್ಯುತ್ ಉತ್ಪಾದನೆಯ ಹೆಸರಿನಲ್ಲಿ ಶರಾವತಿಯ ಅತಿ ಸೂಕ್ಶ್ಮ ಪರಿಸರ ವಲಯವನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಬಲಿಕೊಡಬೇಡಿ ಎಂದು ರಾಜ್ಯ ಸರಕಾವನ್ನು ಖ್ಯಾತ ನರರೋಗ ತಜ್ಞ, ಸಾರ್ವಜನಿಕ ನೀತಿ ಪ್ರತಿಪಾದಕ ಹಾಗು ಬಿಜೆಪಿ ನಾಯಕರಾದ ಡಾ. ಸುಶ್ರುತ ಗೌಡ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ರಚಿಸಿದ್ದ ತಜ್ಞರ ಸಮಿತಿಯು ಈ ಯೋಜನೆಗೆ ತನ್ನ ಅಸಮ್ಮತಿಯನ್ನು ಈಗಾಗಲೇ ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ. ಆದರೆ ಕರ್ನಾಟಕದ ನವೀಕರಿಸಬಹುದಾದ ಇಂಧನ ಬಳಕೆಗೆ ಸಂಬಂಧಿಸಿದ ಹೊಸ ವರದಿಗಳ ಆಧಾರದ ಮೇಲೆ ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಮರುಜೀವ ನೀಡಲು ರಾಜ್ಯ ಸರಕಾರ ಮುಂದಾಗಿರುವುದು ಅತ್ಯಂತ ಖಂಡನಾರ್ಹ ಎಂದು ಅವರು ತಿಳಿಸಿದ್ದಾರೆ. .
“ಕಲ್ಪಿತ ಡೇಟಾ ಆಧಾರದ ಮೇಲೆ, ವಿಶ್ವದಲ್ಲೇ ಅತ್ಯಂತ ಸೂಕ್ಷ್ಮವಾದ ಪಶ್ಚಿಮ ಘಟ್ಟ ಶ್ರೇಣಿಯ ಅಮೂಲ್ಯ ಶರಾವತಿ ಕಣಿವೆಯನ್ನು ಬಲಿ ಕೊಡಲು ಹೊರಟಿರುವುದು ಇಡೀ ಮನುಕುಲಕ್ಕೆ ಎಸಗುವ ದ್ರೋಹ. ಈ ಯೋಜನೆ ಜಾರಿಯಾದರೆ ಆಗಬಹುದಾದ ಅನರ್ಥಗಳನ್ನು ಊಹಿಸಲು ಕೂಡಾ ಸಾಧ್ಯವಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ.
“ನಾವು ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತೇವೆ ಎಂಬುದರ ಆಧಾರದ ಮೇಲೆ ಮಾತ್ರ ಭವಿಷ್ಯದ ಪೀಳಿಗೆ ನಮ್ಮನ್ನು ನಿರ್ಣಯಿಸುವುದಿಲ್ಲ, ಬದಲಿಗೆ ಬದಲಾಯಿಸಲಾಗದ ಪರಿಸರ ವ್ಯವಸ್ಥೆಗಳನ್ನು ನಾವು ರಕ್ಷಿಸಿದ್ದೇವೆಯೇ ಇಲ್ಲವೇ ಎಂಬುದರ ಆಧಾರದ ಮೇಲೆ ನಿರ್ಣಯಿಸುತ್ತದೆ. ಶರಾವತಿ ಕೇವಲ ಮತ್ತೊಂದು ಯೋಜನಾ ಸ್ಥಳವಲ್ಲ — ಇದು ಭಾರತದ ನೈಸರ್ಗಿಕ ಪರಂಪರೆಯ ಭಾಗವಾಗಿದೆ. ಇದನ್ನು ರಕ್ಷಿಸಲೇಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ವರದಿ ಸ್ವಾಗತಿಸಿರುವ ಡಾ. ಗೌಡ, ತಜ್ಞರ ಸಮಿತಿಯ ನಿರ್ಧಾರವು ಈ ಯೋಜನಾ ಪ್ರದೇಶದ ಪರಿಸರ ಸೂಕ್ಷ್ಮತೆಯನ್ನು ಆಧರಿಸಿದೆ. ಏಕೆಂದರೆ ಈ ಪ್ರದೇಶವು ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ ಮತ್ತು ಅದರ ಅಧಿಸೂಚಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
“ನಾವು ನವೀಕರಿಸಬಹುದಾದ ಇಂಧನ ಅಥವಾ ಆರ್ಥಿಕ ಅಭಿವೃದ್ಧಿಯನ್ನು ವಿರೋಧಿಸುತ್ತಿಲ್ಲ. ಆದರೆ ಅದರ ಹೆಸರಿನಲ್ಲಿ ಶರಾವತಿ ಕಣಿವೆ ಪ್ರದೇಶ ನಾಶ ಎಸಗಲು ಹೊರಟಿರುವ ಶಕ್ತಿಗಳ ಬಗ್ಗೆ ನಾವು ಜಾಗರೂಕವಾಗಿರಬೇಕು,” ಎಂದು ಅವರು ತಿಳಿಸಿದ್ದಾರೆ.
“ಭಾರತದ ಭವಿಷ್ಯಕ್ಕೆ ನವೀಕರಿಸಬಹುದಾದ ಇಂಧನ ಅತ್ಯಗತ್ಯ. ಆದರೆ, ಸಂರಕ್ಷಿತ ಅರಣ್ಯಗಳು ಮತ್ತು ಜಾಗತಿಕವಾಗಿ ಮಹತ್ವದ ಜೀವವೈವಿಧ್ಯ ಪ್ರವೇಶವನ್ನು ಬಲಿಕೊಟ್ಟು, ಅದರ ವೆಚ್ಚದಲ್ಲಿ ಇಂಧನ ಭದ್ರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟಗಳು ಒಂದು ಅಮೂಲ್ಯವಾದ ಪರಿಸರ ಆಸ್ತಿಯಾಗಿದ್ದು. ಇವು ಈ ನಾಡಿನ ಪ್ರಮುಖ ನದಿಗಳ ತವರು. ಇದರ ಜೊತೆಗೆ ಹವಾಮಾನ ರಕ್ಷಣೆ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಹಾಗು ಇತರ ಪ್ರಭೇದಗಳ ಸಂರಕ್ಷಣೆ ಸೇರಿದಂತೆ ಸೂಕ್ಷ್ಮ ಪರಿಸರ ಕಾರ್ಯಗಳನ್ನು ನಿರ್ವಹಿಸುತ್ತವೆ. ಒಮ್ಮೆ ಹಾನಿಗೊಳಗಾದರೆ, ಈ ಪರಿಸರ ವ್ಯವಸ್ಥೆಗಳನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ.
Also read: ಆಚಾರ್ಯ ವೀರನಾರಾಯಣ ಪಾಂಡುರಂಗಿ ಅವರಿಗೆ ‘ಮಹಾಕವಿ ಕಾಳಿದಾಸ ಸಂಸ್ಕೃತವ್ರತಿ ರಾಷ್ಟ್ರೀಯ ಯುವ ಪ್ರಶಸ್ತಿ’
“ಸೌರ ಮತ್ತು ಪವನ ಶಕ್ತಿಯನ್ನು ಗ್ರಿಡ್ಗೆ ಸಂಯೋಜಿಸುವಲ್ಲಿ ಇರುವ ಸವಾಲುಗಳನ್ನು ವೈಜ್ಞಾನಿಕವಾಗಿ ಸೂಕ್ತವಾದ ಪರ್ಯಾಯಗಳ ಮೂಲಕ ಪರಿಹರಿಸಬೇಕು. ಉದಾಹರಣೆಗೆ: ಪ್ರಸರಣ ಮೂಲಸೌಕರ್ಯವನ್ನು ಬಲಪಡಿಸುವುದು, ಗ್ರಿಡ್ ನಿರ್ವಹಣೆಯನ್ನು ಆಧುನೀಕರಿಸುವುದು, ಬ್ಯಾಟರಿ ಸಂಗ್ರಹಣೆಯನ್ನು ಬಲಪಡಿಸುವುದು, ಬೇಡಿಕೆ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಭವಿಷ್ಯದ ಇಂಧನ ಸಂಗ್ರಹಣಾ ಯೋಜನೆಗಳಿಗಾಗಿ ಪರಿಸರಕ್ಕೆ ಪೂರಕವಾದ ಸೂಕ್ತ ಸ್ಥಳಗಳನ್ನು ಗುರುತಿಸುವುದು ಅಗತ್ಯ ಎಂದು ಅವರು ಹೇಳಿದರು.
“ನವೀಕರಿಸಬಹುದಾದ ಇಂಧನ ಸಂಯೋಜನೆಯ ಪರಿಹಾರವು ಭಾರತದ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದನ್ನು ಹಾನಿಗೊಳಿಸುವುದರೊಂದಿಗೆ ಪ್ರಾರಂಭವಾಗಬಾರದು,” ಎಂದು ಅವರು ಪ್ರತಿಪಾದಿಸಿದ್ದಾರೆ.
ವೈಜ್ಞಾನಿಕ ಸಂಸ್ಥೆಗಳಿಗೆ ಮತ್ತು ಪರಿಸರ ಕಾನೂನಿಗೆ ಗೌರವ ನೀಡಬೇಕೆಂದು ಕರೆ ನೀಡಿದ ಡಾ. ಗೌಡ, ಕರ್ನಾಟಕ ಸರ್ಕಾರವು ಎನ್ಬಿಡಬ್ಲ್ಯೂಎಲ್ (NBWL) ತಜ್ಞರ ಸಮಿತಿಯ ಸಂಶೋಧನೆಗಳನ್ನು ಅದರ ನೈಜ ಆಶಯದೊಂದಿಗೆ ಗೌರವಿಸಬೇಕು ಎಂದು ಒತ್ತಾಯಿಸಿದರು.
“ವೈಜ್ಞಾನಿಕ ಮೌಲ್ಯಮಾಪನಗಳಿಗೆ, ತಜ್ಞರ ನಿರ್ಧಾರಗಳನ್ನೂ ನಮ್ಮ ಭವಿಷ್ಯದ ದೃಷ್ಟಿಯಿಂದ ಒಪ್ಪಿಕೊಳ್ಳಬೇಕು. ಶರಾವತಿ ಕಣಿವೆಯ ಪರಿಸರ ಸಮಗ್ರತೆಗೆ ಧಕ್ಕೆ ತರುವ ಪ್ರಸ್ತಾಪಗಳನ್ನು ಶಾಶ್ವತವಾಗಿ ಕೈಬಿಡಬೇಕು ಮತ್ತು ಬದಲಿಗೆ ಇಂಧನ ಭದ್ರತೆ ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಒದಗಿಸುವ ಸಾಮರ್ಥ್ಯವಿರುವ ಸುಸ್ಥಿರ ಪರ್ಯಾಯಗಳನ್ನು ಅನುಸರಿಸಬೇಕು ಎಂದು ಡಾ. ಗೌಡ ನೀತಿ ನಿರೂಪಕರಿಗೆ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







