ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಕೇರ್ಗಳ್ಳಿಯಲ್ಲಿ ಆಯೋಜಿಸಲಾಗುತ್ತಿರುವ ‘ನಿನಾದ ಗೃಹ ಸಂಗೀತ’ ಸಂಗೀತ ಕಛೇರಿ ಸರಣಿಯ 18ನೇ ಕಾರ್ಯಕ್ರಮ ಆಗಸ್ಟ್ 16ರಂದು ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ.
ಕೇರ್ಗಳ್ಳಿಯ ರಿಷಭ್ ಸಿದ್ಧಿ ಲೇಔಟ್ನಲ್ಲಿರುವ ‘ನಿನಾದ’ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾಣೆಯ ಹಿರಿಯ ಸಂಗೀತಗಾರರಾದ ಪಂ. ಎಂ.ಪಿ. ಹೆಗಡೆ, ಪಡಿಗೆರೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿದ್ದಾರೆ.
ಅವರಿಗೆ ತಬಲಾದಲ್ಲಿ ಮೈಸೂರಿನ ಖ್ಯಾತ ವಾದಕ ಶ್ರೀ ಭೀಮಾಶಂಕರ್ ಬಿದನೂರ್ ಹಾಗೂ ಹಾರ್ಮೋನಿಯಂನಲ್ಲಿ ಹಿರಿಯ ಗುರು, ಗಾಯಕ ಮತ್ತು ವಾದಕರಾದ ಪಂ. ವೀರಭದ್ರಯ್ಯ ಹಿರೇಮಠ ಅವರು ಸಹಕರಿಸಲಿದ್ದಾರೆ. ಕೇರ್ಗಳ್ಳಿಯ ‘ನಿನಾದ ಸಂಗೀತ ಶಾಲೆ’ಯ ವಿದ್ಯಾರ್ಥಿ ಬಳಗವೂ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ.
ಪಂ. ಎಂ.ಪಿ. ಹೆಗಡೆ ಪರಿಚಯ
ಶಿರಸಿ ಸಮೀಪದ ಪಡಿಗರೆಯ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ ಪಂ. ಎಂ.ಪಿ. ಹೆಗಡೆಯವರು ತಮ್ಮ ತಂದೆಯವರಿಂದ ಸಂಗೀತದ ಆಸಕ್ತಿ ಬೆಳೆಸಿಕೊಂಡರು. ಬಳಿಕ ಆ ಭಾಗದ ಹಿರಿಯ ಸಂಗೀತ ವಿದ್ವಾಂಸರಾದ ಪಂ. ಆರ್.ಟಿ. ಹೆಗಡೆ ಶೀಗೇಹಳ್ಳಿ ಅವರ ಬಳಿ ಹಲವು ದಶಕಗಳ ಕಾಲ ಸಂಗೀತಾಭ್ಯಾಸ ಮಾಡಿದರು.
1979ರಲ್ಲಿ ಕರ್ನಾಟಕ ಸರ್ಕಾರ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅವರು, 1980ರಲ್ಲಿ ಗಂಧರ್ವ ಮಹಾ ಮಂಡಲ ನಡೆಸಿದ ಸಂಗೀತ ಅಲಂಕಾರ ಪರೀಕ್ಷೆಯಲ್ಲಿಯೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಆಕಾಶವಾಣಿಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಖ್ಯಾಲ್ ಸಂಗೀತದ ಜತೆಗೆ ಠುಮ್ರಿ ಹಾಗೂ ಟಪ್ಪಾ ಗಾಯನದಲ್ಲಿಯೂ ಪರಿಣತಿ ಪಡೆದಿದ್ದಾರೆ. ಗ್ವಾಲಿಯರ್ ಶೈಲಿಯ ಅವರ ಗಾಯನದಲ್ಲಿ ಆಲಾಪ, ಲಯಕಾರಿ, ಮೀಂಡ್, ಸರಳ-ಸಪಾಟ್ ತಾನ್ಗಳು ಹಾಗೂ ರಾಗದ ಸ್ವರೂಪವನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಬಂದಿಶ್ಗಳ ಪ್ರಸ್ತುತಿಗೆ ವಿಶೇಷ ಸ್ಥಾನವಿದೆ.
ಪಂ. ಚಂದ್ರಶೇಖರ ಪುರಾಣಿಕಮಠರ ಮಾರ್ಗದರ್ಶನ
ಪದವಿ ಶಿಕ್ಷಣ ಪೂರ್ಣಗೊಳಿಸಿ ಪ್ರಬುದ್ಧ ಗಾಯಕರಾಗಿ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಧಾರವಾಡದ ಹಿರಿಯ ಸಂಗೀತ ವಿದ್ವಾಂಸರಾದ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಸಂಪರ್ಕ ಮತ್ತು ಮಾರ್ಗದರ್ಶನ ಪಂ. ಎಂ.ಪಿ. ಹೆಗಡೆಯವರಿಗೆ ದೊರೆಯಿತು. ಈ ಮಾರ್ಗದರ್ಶನ ಅವರ ಸಂಗೀತ ಸಾಧನೆಗೆ ಮತ್ತಷ್ಟು ಮೆರುಗು ನೀಡಿತು.
ಸಂಗೀತವನ್ನೇ ಜೀವನದ ಮುಖ್ಯ ಸಾಧನೆಯಾಗಿ ಸ್ವೀಕರಿಸಿರುವ ಅವರು, ಹಲವು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
Also read>> ಬೆಂಗಳೂರು: ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ವ್ಯವಸ್ಥೆ : ಸಚಿವ ಯು.ಟಿ. ಖಾದರ್
ಶ್ರೀ ಸತ್ಯಸಾಯಿ ಆರಾಧಕರಾಗಿರುವ ಪಂ. ಹೆಗಡೆಯವರು 1981ರಲ್ಲಿ ‘ಶ್ರೀ ಸಾಯಿ ಸಂಗೀತ ವಿದ್ಯಾಲಯ’ವನ್ನು ಆರಂಭಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಕಳೆದ 45 ವರ್ಷಗಳಿಂದ ಸಂಗೀತ ಕಲೆಯ ಪ್ರಸಾರ ಮತ್ತು ತಮ್ಮ ಗುರುಪರಂಪರೆಯನ್ನು ಮುಂದುವರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ನಾಡಿನ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಪ್ರಚಾರ ಮತ್ತು ಪ್ರಸಿದ್ಧಿಯಿಂದ ದೂರ ಉಳಿದು ಸಂಗೀತ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ಪಂ. ಎಂ.ಪಿ. ಹೆಗಡೆಯವರಿಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಕಲಾವಿದ, ಗುರು ಹಾಗೂ ಸಂಗೀತಜ್ಞರಾಗಿ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ.
ತಬಲಾದಲ್ಲಿ ಭೀಮಾಶಂಕರ್ ಬಿದನೂರ್
ಕಾರ್ಯಕ್ರಮದಲ್ಲಿ ತಬಲಾ ಸಾಥ್ ನೀಡಲಿರುವ ಶ್ರೀ ಭೀಮಾಶಂಕರ್ ಬಿದನೂರ್ ಅವರು ಮೈಸೂರಿನ ಪ್ರಮುಖ ತಬಲಾ ವಾದಕರಾಗಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಶಿಕ್ಷಣ ಪಡೆದಿರುವ ಅವರು, ನಾಡಿನ ಹಲವು ಹೆಸರಾಂತ ಕಲಾವಿದರಿಗೆ ತಬಲಾ ಸಾಥ್ ನೀಡಿದ್ದಾರೆ.
ಹಾರ್ಮೋನಿಯಂನಲ್ಲಿ ಪಂ. ವೀರಭದ್ರಯ್ಯ ಹಿರೇಮಠ
ಹಾರ್ಮೋನಿಯಂನಲ್ಲಿ ಸಹಕರಿಸಲಿರುವ ಪಂ. ವೀರಭದ್ರಯ್ಯ ಹಿರೇಮಠ ಅವರು ಮೈಸೂರಿನ ಹಿರಿಯ ಸಂಗೀತ ಗುರು, ಗಾಯಕ ಹಾಗೂ ಹಾರ್ಮೋನಿಯಂ ವಾದಕರಾಗಿದ್ದಾರೆ.
ಪರಮಪೂಜ್ಯ ಪುಟ್ಟರಾಜ ಗವಾಯಿಗಳವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿದ ಅವರು, ಮೈಸೂರಿನಲ್ಲಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಾ ಕಲಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ಕಾರ್ಯಕ್ರಮದ ವಿವರ
ಕಾರ್ಯಕ್ರಮ: ‘ನಿನಾದ ಗೃಹ ಸಂಗೀತ’ – 18ನೇ ಕಾರ್ಯಕ್ರಮ
ದಿನಾಂಕ: ಆಗಸ್ಟ್ 16, ಭಾನುವಾರ
ಸಮಯ: ಸಂಜೆ 6 ಗಂಟೆ
ಸ್ಥಳ: #37, ‘ನಿನಾದ’, ರಿಷಭ್ ಸಿದ್ಧಿ ಲೇಔಟ್, ಕೇರ್ಗಳ್ಳಿ, ಮೈಸೂರು
ಸಂಪರ್ಕ: 9449676014
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸವಿಯನ್ನು ಸವಿಯುವಂತೆ ಆಯೋಜಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







