ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
1839ರಲ್ಲಿ ಫ್ರಾನ್ಸ್ನ ವಿಜ್ಞಾನಿ Louis Daguerre ಅಭಿವೃದ್ಧಿ ಪಡಿಸಿದ ಡಾಗ್ಯುರೆಟೈಪ್ (Daguerreotype) ತಂತ್ರಜ್ಞಾನವನ್ನು ಫ್ರಾನ್ಸ್ ಸರ್ಕಾರ ಸಾರ್ವಜನಿಕರಿಗೆ ಮುಕ್ತವಾಗಿ ನೀಡಿದ ದಿನವೇ ಇಂದಿನ ವಿಶ್ವ ಛಾಯಾಗ್ರಹಣ ದಿನದ ಐತಿಹಾಸಿಕ ನೆಲೆ. ಅಂದಿನಿಂದ ಇಂದಿನವರೆಗೆ ಛಾಯಾಗ್ರಹಣವು ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ; ಅದು ಇತಿಹಾಸದ ಸಾಕ್ಷಿಯಾಗಿ, ಪ್ರಕೃತಿಯ ರಾಯಭಾರಿಯಾಗಿ, ಪತ್ರಿಕೋದ್ಯಮದ ಕಣ್ಣಾಗಿ, ವಿಜ್ಞಾನದ ಸಹಯಾತ್ರಿಯಾಗಿ ಮತ್ತು ಮಾನವ ಭಾವನೆಗಳ ಭಾಷೆಯಾಗಿ ಬೆಳೆದಿದೆ. ಆದರೆ… ಕ್ಯಾಮೆರಾ ಜಗತ್ತನ್ನೇ ಸೆರೆಹಿಡಿಯುತ್ತದಾದರೂ ನಮ್ಮೊಳಗೆ ಒಂದು ಪ್ರಶ್ನೆ ಉಳಿಯುತ್ತದೆ— ಕ್ಯಾಮೆರಾದ ಹಿಂದೆ ನಿಂತಿರುವ ಮನಸ್ಸನ್ನು ಯಾರು ಸೆರೆಹಿಡಿಯುತ್ತಾರೆ?
ಹಲವು ವರ್ಷಗಳಿಂದ ದೇಶ ಸುತ್ತಿದ್ದೇನೆ. ಊರುಗಳನ್ನು ಕಂಡಿದ್ದೇನೆ. ಪರ್ವತಗಳ ಮೌನವನ್ನು ಕೇಳಿದ್ದೇನೆ. ಸಮುದ್ರದ ಅಲೆಗಳ ಭಾಷೆಯನ್ನು ಆಲಿಸಿದ್ದೇನೆ. ಸಾವಿರಾರು ಜನರ ಮುಖಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದೇನೆ. ಅವರ ಸಂತೋಷ, ನೋವು, ಕನಸು, ನಿರೀಕ್ಷೆ, ಸೋಲು, ಗೆಲುವು—ಎಲ್ಲವನ್ನೂ ಚಿತ್ರಗಳಲ್ಲಿ ಉಳಿಸಿದ್ದೇನೆ. ಜನರು ಆ ಚಿತ್ರಗಳನ್ನು ನೋಡಿ ಮೆಚ್ಚಿದರು. ಆದರೆ ಒಂದು ದಿನ ನನ್ನೊಳಗೆ ವಿಚಿತ್ರವಾದ ಹೇಳಲಾಗಾದ ದಣಿವು ಕಾಣಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯ್ತು ಅದು ದೇಹದ ದಣಿವಲ್ಲ; ಮನಸ್ಸಿನ ದಣಿವೆಂದು.
ಅಂದು ಅರ್ಥವಾಗದ ವಿಚಾರವೊಂದು ನನ್ನ ಮನಸ್ಸನ್ನ ಕೊರೆಯಲಾರಂಭಿಸಿತು. ಇಷ್ಟು ವರ್ಷ ನಾನು ಜಗತ್ತನ್ನು ನೋಡಿದ್ದೆ, ಆದರೆ ನನ್ನನ್ನು ನಾನು ನೋಡಿರಲಿಲ್ಲ. ಅಲ್ಲಿಂದ ನನ್ನ ನಿಜವಾದ ನನ್ನೊಳಗಿನ ಪ್ರಯಾಣ ಆರಂಭವಾಯಿತು. ಅದು ದೇಶ ಪ್ರದೇಶಗಳ ನಡುವಿನ ಪ್ರಯಾಣವಲ್ಲ. ನನ್ನೊಳಗಿನ ಒಳ
ಮನಸ್ಸಿನ ಪ್ರಯಾಣವಾಗಿತ್ತು. ಆ ಹುಡುಕಾಟದಲ್ಲಿ ನಾನು ಅನೇಕ ಮನೆಗಳನ್ನು ಕಂಡೆ. ಸಂಬಂಧಗಳನ್ನು ಓದಿದೆ. ಅಮ್ಮನ ಮಮತೆ, ಅಪ್ಪನ ತ್ಯಾಗ, ಅಕ್ಕನ ಅಕ್ಕರೆ, ತಮ್ಮನ ಉತ್ಸಾಹ, ತಂಗಿಯ ಮುಗ್ಧತೆ, ಹಿರಿಯರ ಅನುಭವ—ಪ್ರತಿಯೊಂದು ಸಂಬಂಧವೂ ಬದುಕಿನ ಒಂದೊಂದು ಅಧ್ಯಾಯವೆಂಬಂತೆ ಕಂಡಿತು. ಹೊರಗಿನಿಂದ ಎಲ್ಲ ಮನೆಗಳೂ ಸುಂದರವಾಗಿ ಕಾಣುತ್ತವೆ. ಆದರೆ ಪ್ರತಿಯೊಂದು ಮನೆಯ ಗೋಡೆಗಳ ಹಿಂದೆ ಹೇಳದ ನೋವು, ಮೌನದ ಕಣ್ಣೀರು, ಮಾತಾಗದ ಪ್ರೀತಿ ಮತ್ತು ಕಾಣದ ಹೋರಾಟಗಳಿರುತ್ತವೆ.
Also Read>> ಶಿವಮೊಗ್ಗದಲ್ಲಿ 3 ದಿನ ನಡೆಯಲಿದೆ ಮ್ಯಾಜಿಕ್ ಟಾಕ್ ಕಾರ್ಯಾಗಾರ | ಏನಿದರ ವಿಶೇಷ?
ಒಮ್ಮೆ ನನ್ನೊಳಗಿನಬಮನೋವಿಹಾರದಲ್ಲಿ ಅಪಾರ ಶ್ರೀಮಂತಿಕೆಯ ಮನೆಯೊಂದಕ್ಕೆ ಹೋದೆ. ಅರಮನೆಯಂತಿದ್ದ ಮನೆ. ಐಷಾರಾಮಿ ಬದುಕು. ಎಲ್ಲ ಸೌಲಭ್ಯಗಳು ಇದ್ದರೂ ಅಲ್ಲಿನ ಕೆಲ ಮನಸ್ಸುಗಳು ಖಾಲಿಯಾಗಿದ್ದವು. ಪ್ರೀತಿಗಿಂತ ಪ್ರತಿಷ್ಠೆ ದೊಡ್ಡದಾಗಿತ್ತು. ಸಂಬಂಧಗಳಿಗಿಂತ ಅಹಂಕಾರ ಎತ್ತರವಾಗಿತ್ತು. ಮೊಬೈಲ್ ಪರದೆಯಲ್ಲಿ ಸಾವಿರಾರು ಸ್ನೇಹಿತರಿದ್ದರೂ, ಮನೆಯವರೊಂದಿಗೆ ಮಾತನಾಡಲು ಸಮಯವಿರಲಿಲ್ಲ.
ಇನ್ನೊಬ್ಬಳಲ್ಲಿ ಅದ್ಭುತ ಪ್ರತಿಭೆಯಿತ್ತು. ಸಂಗೀತ, ಕಲೆ, ಕನಸು—ಎಲ್ಲವೂ ಇದ್ದವು. ಆದರೆ ಮನೆಯ ಗದ್ದಲದಲ್ಲಿ ಅವಳ ಪ್ರತಿಭೆಯ ಧ್ವನಿ ಮೌನವಾಗಿ ಮನೆಯ ಮೂಲೆ ಸೇರಿತ್ತು. ಅಲ್ಲಿಂದ ಹೊರಬಂದಾಗ ನನ್ನೊಳಗಿನ ನಾನು ಕೇಳಿದ ಪ್ರಶ್ನೆ— “ಶ್ರೀಮಂತಿಕೆ ಎಂದರೆ ಏನು?” ಹಣವೇ? ಮನೆಯೇ? ಅಧಿಕಾರವೇ? ಇಲ್ಲ… ನೆಮ್ಮದಿಯಿಂದ ನಿದ್ರೆ ಮಾಡುವ ಮನಸ್ಸೇ.

World Photography Day
ವಿಶ್ವ ಛಾಯಾಗ್ರಹಣ ದಿನವು ಒಂದರ್ಥದಲ್ಲಿ ನಮಗೆ ಈ ಪ್ರಶ್ನೆಯನ್ನು ಕೇಳುವ ದಿನವೂ ಹೌದು. ಕನ್ನಡಿಯ ಮುಂದೆ ನಿಂತಾಗ ನನ್ನೊಳಗಿನ ನಾನು ಮತ್ತೆ ಕೇಳಿತು— “ನೀನು ಸಾವಿರಾರು ಜನರ ಚಿತ್ರ ತೆಗೆದೆಯಲ್ಲ… ಒಮ್ಮೆ ನಿನ್ನ ಮನಸ್ಸಿನ ಚಿತ್ರ ತೆಗೆದಿದ್ದೀಯಾ?” “ನೀನು ಎಷ್ಟೋ ಜನರ ನಗುವನ್ನು ಸೆರೆಹಿಡಿದೆಯಲ್ಲ… ನಿನ್ನ ನಗುವಿನ ಹಿಂದೆ ಅಡಗಿರುವ ನೋವನ್ನು ನೋಡಿದ್ದೀಯಾ?” “ಜಗತ್ತಿನ ಸೌಂದರ್ಯವನ್ನು ಹುಡುಕಿದ್ದೀಯಲ್ಲ… ನಿನ್ನೊಳಗಿನ ಸೌಂದರ್ಯವನ್ನು ಯಾವಾಗ ಕಂಡುಕೊಳ್ಳುತ್ತೀಯಾ?” ಈ ಪ್ರಶ್ನೆಗಳು ಉತ್ತರ ಕೇಳಲಿಲ್ಲ. ಆದರೆ ಬದುಕಿನ ಅರ್ಥವನ್ನು ಕಲಿಸಿದವು. ಆ ದಿನದಿಂದ ನನ್ನ ಕ್ಯಾಮೆರಾ ಕೇವಲ ಮುಖಗಳನ್ನು ನೋಡುವುದಿಲ್ಲ. ಮನಸ್ಸುಗಳನ್ನು ಓದಲು ಪ್ರಯತ್ನಿಸುತ್ತದೆ.
ಕೇವಲ ಬೆಳಕು-ನೆರಳನ್ನು ಹಿಡಿಯುವುದಿಲ್ಲ. ಜೀವನದ ಅರ್ಥವನ್ನು ಹುಡುಕುತ್ತದೆ. ಏಕೆಂದರೆ ಒಂದು ದಿನ ನಾವು ಈ ಜಗತ್ತನ್ನು ಬಿಟ್ಟು ಹೋಗುತ್ತೇವೆ. ನಮ್ಮ ಜೊತೆಗೆ ಬರುವುದು ಹಣವಲ್ಲ, ಹೆಸರಲ್ಲ, ಹುದ್ದೆಯಲ್ಲ. ನಾವು ಯಾರ ಹೃದಯದಲ್ಲಿ ಉಳಿದಿದ್ದೇವೋ, ಅದೇ ನಮ್ಮ ನಿಜವಾದ ಚಿತ್ರ. ಆದ್ದರಿಂದ ವಿಶ್ವ ಛಾಯಾಗ್ರಹಣ ದಿನವು ಕೇವಲ ಒಂದು ಆಚರಣೆಯಲ್ಲ. ಅದು ಪ್ರತಿಯೊಬ್ಬ ಛಾಯಾಗ್ರಾಹಕನಿಗೂ ಒಂದು ಆತ್ಮಾವಲೋಕನ. ಕೇವಲ ಕ್ಯಾಮೆರಾದ ಕಣ್ಣು ತೆರೆಯುವ ದಿನವಲ್ಲ. ಮನಸ್ಸಿನ ಕಣ್ಣು ತೆರೆಸುವ ದಿನ. ಪ್ರತಿಯೊಂದು ಫೋಟೋ ಒಂದು ಕಥೆ ಹೇಳುತ್ತದೆ. ಆದರೆ ಅತ್ಯುತ್ತಮ ಛಾಯಾಗ್ರಾಹಕ ಎಂದರೆ ಜಗತ್ತಿನ ಸೌಂದರ್ಯವನ್ನು ಮಾತ್ರವಲ್ಲ, ಮನುಷ್ಯನೊಳಗಿನ ಬೆಳಕನ್ನೂ ಕಾಣಬಲ್ಲವನು. ಅದೇ ಛಾಯಾಗ್ರಹಣದ ನಿಜವಾದ ಅರ್ಥ. ಅದೇ ನನ್ನ ಕಲ್ಪನೆಯಲ್ಲಿ ವಿಶ್ವ ಛಾಯಾಗ್ರಹಣ ದಿನದ ಸಂದೇಶ.
– ಆದಿತ್ಯ ಪ್ರಸಾದ್ ಎಂ.
ಛಾಯಾಗ್ರಾಹಕ | ಹವ್ಯಾಸಿ ಬರಹಗಾರ | ಪ್ರಕೃತಿಯಲ್ಲಿ ಬದುಕಿನ ಕಥೆ ಹುಡುಕುವ ಪಯಣಿಗ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




