ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವಿಶೇಷ ವರದಿ : ರಾಕೇಶ್ ಸೋಮಿನಕೊಪ್ಪ |
ಶಿವಮೊಗ್ಗ (Shivamogga) ನಗರದ ವಾರ್ಡ್ ನಂ. 01ರ ಸೋಮಿನಕೊಪ್ಪದ ಕೊನೆಯ ಬಸ್ ನಿಲ್ದಾಣ (Bus Shelter) ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದ್ದು, ಪ್ರತಿನಿತ್ಯ ಬಸ್ಗಾಗಿ ಕಾಯುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಬಸ್ ನಿಲ್ದಾಣದ ಸುತ್ತಮುತ್ತ ಗಿಡ-ಗಂಟೆಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಇಲ್ಲದೆ ಕಸದ ರಾಶಿ ಹಾಗೂ ತಿಪ್ಪೆಗುಂಡಿಯಂತಾಗಿದೆ. ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿರುವ ಪರಿಣಾಮ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗಿಡಗಂಟೆಗಳ ನಡುವೆ ನಾಯಿಗಳ ವಾಸ್ತವ್ಯ
ಬಸ್ ನಿಲ್ದಾಣದ ಸುತ್ತಲೂ ಬೆಳೆದು ನಿಂತಿರುವ ಗಿಡಗಂಟೆಗಳ ನಡುವೆ ನಾಯಿಗಳು ವಾಸ್ತವ್ಯ ಹೂಡಿದ್ದು, ನಿಲ್ದಾಣಕ್ಕೆ ಆಗಮಿಸುವ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಈ ಪರಿಸ್ಥಿತಿಯಿಂದ ಮುಜುಗರ ಹಾಗೂ ಭಯದಿಂದ ಬಸ್ಗಾಗಿ ಕಾಯುವಂತಾಗಿದೆ.
ಗಿಡಗಂಟೆಗಳನ್ನು ತೆರವುಗೊಳಿಸಿ, ಆವರಣವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.
Bus Shelter : ಆಸನವಿದ್ದೂ ಕೂರಲು ಆಗಲ್ಲ
ಈ ಪಾಳು ಬಿದ್ದ ಬಸ್ ಶೆಲ್ಟರ್’ನಲ್ಲಿ ಕೂರಲು ಆಸನ ಅಥವಾ ಕಟ್ಟೆಯಿದ್ದರೂ ಪ್ರಯಾಣಿಕರಿಗೆ ಕೂರಲು ಆಗದ ಸ್ಥಿತಿ ಎದುರಾಗಿದೆ. ಕಾರಣ, ಒಳಕ್ಕೆ ತೆರಳಲು ದಾರಿಯೇ ಸರಿಯಾಗಿಲ್ಲ.
Also Read>> ನೇತ್ರದಾನದಿಂದ ಇಬ್ಬರ ಬದುಕಿಗೆ ಬೆಳಕು: ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ
ನಿಲ್ದಾಣದ ಮುಂಭಾಗದಲ್ಲಿ ಸಂಫೂರ್ಣವಾಗಿ ಗಿಡಗಂಟೆಗಳು ಬೆಳೆದಿವೆ. ಅಲ್ಲದೇ, ಮುಂಭಾಗ ಪೂರ್ಣವಾಗಿ ಗಲೀಜಿನಿಂದ ತುಂಬಿಕೊಂಡಿದ್ದು, ಶೆಲ್ಟರ್ ಒಳಗೆ ಹೋಗಲು ಆಗದ ಸ್ಥಿತಿಯಿದೆ. ಒಳಕ್ಕೆ ಹೋದರೂ ಕೂರುವಂತಹ ಸ್ಥಿತಿ ಅಲ್ಲಿಲ್ಲ ಎನ್ನುವುದು ಶೋಚನೀಯ ಸಂಗತಿ.
ಈ ಪರಿಣಾಮವಾಗಿ, ಬಸ್ ಬರುವವರೆಗೂ ಪ್ರಯಾಣಿಕರು ನಿಂತುಕೊಂಡೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ಧರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ.
Shivamogga : ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?
ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಇಲ್ಲದಿರುವುದು ಹಾಗೂ ಗಿಡಗಂಟೆಗಳು ಬೆಳೆದು ನಿಂತಿರುವುದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ.
ವಾರ್ಡ್ನ ಸ್ವಚ್ಛತೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು. ಗಿಡಗಂಟೆಗಳನ್ನು ತೆರವುಗೊಳಿಸುವುದರ ಜೊತೆಗೆ ಕಸದ ರಾಶಿಯನ್ನು ತೆರವು ಮಾಡಿ, ಬಸ್ ನಿಲ್ದಾಣದ ಸುತ್ತಮುತ್ತ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಸ್ ನಿಲ್ದಾಣವನ್ನು ಸುಸ್ಥಿತಿಗೆ ತರಲು ಆಗ್ರಹ
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಮಿನಕೊಪ್ಪದ ಕೊನೆಯ ಬಸ್ ನಿಲ್ದಾಣವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಪ್ರಯಾಣಿಕರು ಕುಳಿತುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ನಿಲ್ದಾಣದ ಸುತ್ತಲಿನ ಗಿಡಗಂಟೆ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಸ್ಥಳೀಯರು ಹಾಗೂ ಬಸ್ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕರ ನಿತ್ಯದ ಓಡಾಟಕ್ಕೆ ಪ್ರಮುಖವಾಗಿರುವ ಬಸ್ ನಿಲ್ದಾಣವೊಂದು ಈ ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಎಷ್ಟು ಸರಿ? ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಸೋಮಿನಕೊಪ್ಪ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








