ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
(Bengaluru) ನಗರದ ಎಚ್ಎಸ್ಆರ್ ಲೇಔಟ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗವಾಗಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ (Srinivasa Kalyana) ನಡೆಯಿತು.
ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಎಚ್ಎಸ್ಆರ್ ಬಡಾವಣೆ ಸಾಂಸ್ಕೃತಿಕ ಅಕಾಡೆಮಿಯ 17ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಶ್ರೀನಿವಾಸ ಉತ್ಸವ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂದೇವಿ–ಶ್ರೀದೇವಿ ಸಹಿತ ಶ್ರೀನಿವಾಸ ದೇವರ ಕಲ್ಯಾಣೋತ್ಸವ ಸಾಂಪ್ರದಾಯಿಕ ವೈಭವದಿಂದ ನೆರವೇರಿತು.
ಡಾ. ತಾಯಲೂರು ವಾದಿರಾಜ ಅವರ ನೇತೃತ್ವದ ತಂಡದಿಂದ ವೇದಮಂತ್ರಗಳ ಘೋಷ, ದಾಸ ಸಾಹಿತ್ಯದ ಕೀರ್ತನೆಗಳು ಹಾಗೂ ಅರ್ಥಪೂರ್ಣ ವ್ಯಾಖ್ಯಾನದೊಂದಿಗೆ ಕಲ್ಯಾಣೋತ್ಸವ ನಡೆಯಿತು. ಹರಿದಾಸ ಸಾಹಿತ್ಯ ಗಾಯಕ ಪಂಡಿತ್ ಸಂತೋಷ್ ಗದ್ದನಕೇರೆ (ಬಾಗಲಕೋಟೆ), ವಿದುಷಿ ಶುಭ ಸಂತೋಷ್ ಹಾಗೂ ಅಪೂರ್ವ ಲಕ್ಷ್ಮಿ ಅವರು ಶ್ರೀನಿವಾಸ ಕಲ್ಯಾಣದ ವಿವಿಧ ಪ್ರಸಂಗಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು. ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ. ಗೋಪಾಲಾಚಾರ್ ಅವರು ಶ್ರೀನಿವಾಸ ದೇವರ ಮಹಿಮೆಯನ್ನು ವ್ಯಾಖ್ಯಾನದ ಮೂಲಕ ಪರಿಚಯಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ತಾಳ್ಲಪಾಕ ಅನ್ನಮಾಚಾರ್ಯರ ಕೃತಿಗಳ ಗಾಯನ ನಡೆಯಿತು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಕೋಲಾಟ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಗೌರವಾಧ್ಯಕ್ಷ ಎ.ಎನ್. ಎಲ್ಲಪ್ಪ ರೆಡ್ಡಿ, ಅಧ್ಯಕ್ಷ ಪ್ರೊ. ಪಿ. ಸದಾಶಿವ ರೆಡ್ಡಿ, ಕಾರ್ಯದರ್ಶಿ ಕೆ. ವಾಸುದೇವ, ಸಲಹೆಗಾರ ಕೆ.ಟಿ. ರಾಮರಾಜು, ವಿ. ಭದ್ರಾ ರೆಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Also read>> Indian Railways Boosts Nepal Border Connectivity With ₹730 Crore Bahraich Rail Project
Bengaluru : ದಾಸ ಸಾಹಿತ್ಯ ಪ್ರಚಾರಕ್ಕೆ ಬಳಗದ ಸೇವೆ
‘ಬಾರೋ ಮನೆಗೆ ಗೋವಿಂದ’ ಎಂಬ ಧ್ಯೇಯದೊಂದಿಗೆ 2012ರಲ್ಲಿ ಆರಂಭಗೊಂಡ ಶ್ರೀ ಶ್ರೀನಿವಾಸ ಉತ್ಸವ ಬಳಗವು ದಾಸ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಚಾರದಲ್ಲಿ ತೊಡಗಿದೆ. ಪುರಂದರದಾಸರ ಆರಾಧನೆ ಸಂದರ್ಭದಲ್ಲಿ ದಾಸವಾಣಿ, ಹರಿದಾಸ ಗೋಷ್ಠಿ, ಭಜನೆ, ಉಪನ್ಯಾಸ ಹಾಗೂ ‘ಹರಿದಾಸ ಅನುಗ್ರಹ’ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ತಿರುಮಲೆಯ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಊಂಜಲೋತ್ಸವದ ವೈಭವವನ್ನು ದಾಸರ ಪದಗಳು ಹಾಗೂ ದೇವರನಾಮಗಳೊಂದಿಗೆ ಸಂಯೋಜಿಸಿ ದೇಶದ ವಿವಿಧೆಡೆ ಪ್ರಸ್ತುತಪಡಿಸುತ್ತಿರುವುದು ಬಳಗದ ಪ್ರಮುಖ ಸೇವೆಯಾಗಿದೆ.
ಬೆಂಗಳೂರಿನ ಉತ್ತರಾದಿ ಮಠದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ 19 ಅಡಿ ಎತ್ತರದ ಏಕಶಿಲಾ ಪುರಂದರದಾಸರ ಪ್ರತಿಮೆಯನ್ನು 2020ರಲ್ಲಿ ಪ್ರತಿಷ್ಠಾಪಿಸಿರುವುದು ಬಳಗದ ಸಾಂಸ್ಕೃತಿಕ ಸೇವೆಯ ಹೆಗ್ಗುರುತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









