ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀರಂಗಂ (SriRangam) ಕ್ಷೇತ್ರದ ತ್ರಯೀ ವಿದ್ಯಾಗುರುಕುಲದ ಸಂಸ್ಥಾಪಕ, ವಿದ್ವಾನ್ ಶ್ರೀ ವಿಜಯೀಂದ್ರ ಭಾರತೀ ಘನಪಾಠಿಗಳು, (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಪ್ರತಿಷ್ಠಿತ ಋಗುದ್ಗಾರವಾಗೀಶ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಅವರ ಶಿಷ್ಯರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಮ್ಮ 47ನೇ ಚಾತುರ್ಮಾಸ್ಯ ವ್ರತವನ್ನು ಬಾರಕೂರಿನ ಭಂಡಾರಕೇರಿ ಮಠದಲ್ಲಿ ನಡೆಸುತ್ತಿದ್ದಾರೆ.
ಈ ಚಾತುರ್ಮಾಸ್ಯದಲ್ಲಿ ಶ್ರೀಗಳವರು ಋಗ್ವೇದವನ್ನು ಕಂಠಸ್ಥ ಮಾಡಿದ 16 ವಿದ್ವಾಂಸರಿಗೆ ಸಮ್ಮಾನ ಮಾಡಲಿದ್ದಾರೆ. ಸೆಪ್ಟೆಂಬರ್ 3ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.
ಕಿರುಪರಿಚಯ : ಶ್ರೀ ವಿಜಯೀಂದ್ರ ಭಾರತೀ ಘನಪಾಠಿಗಳು
ವಿ.ವಿಜಯೀಂದ್ರಾಚಾರ್ಯರು ವಿಜಯೀಂದ್ರಭಾರತೀ ಎಂದೇ ಪ್ರಸಿದ್ಧ. ಬಾಲ್ಯದಿಂದಲೂ ಇವರ ಉಚ್ಚಾರಣೆಯಲ್ಲಿದ್ದ ಸ್ಪಷ್ಟತೆ, ನಿರ್ದುಷ್ಟತೆ, ಶ್ರಾವ್ಯತೆ ಮೊದಲಾದ ಗುಣಗಳನ್ನು ಗಮನಿಸಿ ವಿಜಯೀಂದ್ರಭಾರತೀ ಎಂದು ಗುರುಗಳು ನೀಡಿದ ಹೆಸರು. ವಿ. ಶಿರುಗುಮಣಿ ಪರಶುರಾಮಾಚಾರ್ಯರು ಹಾಗೂ ವಿ. ರಾಧಾಕೃಷ್ಣ ಘನಪಾಠಿಗಳಲ್ಲಿ ಋಗ್ವೇದದ ಸಂಹಿತೆ, ಬ್ರಾಹ್ಮಣ, ಉಪನಿಷತ್, ಪ್ರಾತಿಶಾಖ್ಯ ಇವುಗಳನ್ನು 15 ವರ್ಷಗಳ ಕಾಲ ಅಧ್ಯಯನ ಮಾಡಿರುವರು. ಶ್ರೀರಂಗಕ್ಷೇತ್ರದಲ್ಲಿ ತ್ರಯೀ ಗುರುಕುಲವನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೋಷಿಸುತ್ತಿರುವರು.
Also Read>> ಎಚ್ಎಸ್ಆರ್ ಲೇಔಟ್ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ
ನೂರಾರು ಮಂದಿ ವಿದ್ಯಾರ್ಥಿಗಳಿಗೆ ವೇದ ಪಾಠವನ್ನು ಮಾಡಿ ಅವರನ್ನು ಪಂಡಿತರನ್ನಾಗಿಸಿರುವರು. ಇವರಲ್ಲಿ 25 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಘನಾಂತ ಅಧ್ಯಯನವನ್ನು ಮಾಡಿರುವರು. ಇಂದು ಇವರ ಗುರುಕುಲ ಮತ್ತಷ್ಟು ವಿಸ್ತರಿಸುತ್ತಿದೆ. ಚೆನ್ನೈ, ಶ್ರೀರಂಗಪಟ್ಟಣ, ಮೊದಲಾದ ಸ್ಥಳಗಳಲ್ಲಿ ಶಾಖೆಗಳನ್ನು ತ್ರಯೀ ಗುರುಕುಲವು ಹೊಂದಿದೆ. ವಿ.ವಿಜಯೀಂದ್ರಭಾರತಿಯವರು ವಿ.ದೇವದತ್ತ ಪಾಟೀಲರಲ್ಲಿ ನ್ಯಾಯಶಾಸ್ತ್ರದ ಅಧ್ಯಯನವನ್ನು ಮಾಡಿದ್ದಾರೆ.
ವಿ.ಮಧುಸೂದನಾಚಾರ್ಯರಲ್ಲಿ ನ್ಯಾಯಸುಧಾ ಅಧ್ಯಯನವನ್ನೂ ಮಾಡುತ್ತಿದ್ದಾರೆ. ಅನೇಕ ಮಠಗಳಿಂದ, ಸಂಘ-ಸಂಸ್ಥೆಗಳಿಂದ ವೇದರತ್ನಾಕರ, ವೇದವಿಶಾರದ, ವೇದರತ್ನಮ್ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Udupi : ಪುರಸ್ಕಾರಕ್ಕೆ ಪಾತ್ರರಾದ ಇನ್ನಿತರ ವಿದ್ವಾಂಸರು
ಶ್ರೀ ರಾಮಕೃಷ್ಣ ಘನಪಾಠಿ, ಶ್ರೀ ವಾಸುದೇವ ಘನಪಾಠೀ, ಶ್ರೀ ಪರೀಕ್ಷಿತ ಕ್ರಮಪಾಠೀ, ಶ್ರೀ ಆನಂದತೀರ್ಥ ಕ್ರಮಪಾಠೀ, ಶ್ರೀ ರಾಘವ ಘನಪಾಠೀ, ಶ್ರೀ ಶ್ರೀನಾಥ ಘನಪಾಠೀ, ಶ್ರೀ ಅನಿರುದ್ಧ ಘನಪಾಠಿ, ಶ್ರೀ ನಾರಾಯಣ ಘನಪಾಠೀ, ಶ್ರೀ ಹರಿಕೃಷ್ಣ ಘನಪಾಠೀ, ಶ್ರೀ ಕೇಶವ ಘನಪಾಠಿ, ಶ್ರೀ ಗೋಪೀನಾಥ ಘನಪಾಠೀ, ಶ್ರೀ ಹರಿವಂಶ ಕ್ರಮಪಾಠೀ, ಶ್ರೀ ಕಿಶೋರಶರ್ಮಾ, ಶ್ರೀ ಲಕ್ಷ್ಮೀನರಸಿಂಹಶರ್ಮಾ, ಶ್ರೀ ಅನಂತಶರ್ಮಾ ಬ್ರಹ್ಮಾವರದ ವೇದ ವಿದ್ವಾಂಸ ಹೃಷಿಕೇಶ ಬಾಯರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










