ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು (Mysuru) ನಗರದ ತೊಣಚಿಕೊಪ್ಪಲು ಬಡಾವಣೆಯ (Rayara Aradhane) ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನೂರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದ ಕಲ್ಪವೃಕ್ಷ ಸಭಾಂಗಣದಲ್ಲಿ ದಾಸವಾಣಿ ಕಛೇರಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರನ್ನು ಗೌರವಿಸಿ ಮಾತನಾಡಿದ ಖ್ಯಾತ ಪಿಟೀಲು ವಿದ್ವಾಂಸ ಮೈಸೂರು ಮಂಜುನಾಥ್, ರಾಯರ ಸನ್ನಿಧಿಯಲ್ಲಿ ಸೇವೆ ಸಲ್ಲಿಸುವುದು ಕಲಾವಿದರ ಕಲಾ ಪ್ರತಿಭೆಯ ವಿಕಸನಕ್ಕೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದು ಹೇಳಿದರು.
ಪ್ರತಿವರ್ಷ ಸಾವಿರಾರು ಇಂಜಿನಿಯರ್ಗಳು ಹಾಗೂ ವೈದ್ಯರು ಹೊರಬರುತ್ತಿದ್ದರೂ, ಪೂರ್ಣ ಪ್ರಮಾಣದ ಕಲಾವಿದರು ರೂಪುಗೊಳ್ಳುವುದು ಕಡಿಮೆ ಎಂದು ಅವರು ಅಭಿಪ್ರಾಯಪಟ್ಟರು.
ಯಾವುದೇ ತಂತ್ರಜ್ಞಾನ ಅಥವಾ ವೃತ್ತಿಪರ ಶಿಕ್ಷಣವನ್ನು ಕಲಿಯುವುದಕ್ಕಿಂತ ಕಲೆಯನ್ನು ಕರಗತ ಮಾಡಿಕೊಳ್ಳುವುದು ಹೆಚ್ಚು ಕಷ್ಟಕರ. ಇದಕ್ಕೆ ಹಲವು ವರ್ಷಗಳ ನಿರಂತರ ತಾಲೀಮು, ಪರಿಶ್ರಮ ಹಾಗೂ ಗುರುಕೃಪೆ ಅಗತ್ಯವಿದೆ ಎಂದು ತಿಳಿಸಿದರು.
ಉದಯೋನ್ಮುಖ ಕಲಾವಿದರಾದ ಎ.ಆರ್. ಕೌಸಲ್ಯಾ ರಘುರಾಂ ಮತ್ತು ಎ.ಆರ್. ಅಪ್ರಮೇಯ ಅವರ ಗಾಯನ ಪ್ರತಿಭೆಯನ್ನು ಶ್ಲಾಘಿಸಿದ ಮೈಸೂರು ಮಂಜುನಾಥ್, ಇಬ್ಬರಿಗೂ ಉತ್ತಮ ಭವಿಷ್ಯವಿದ್ದು, ಅವರ ಸಂಗೀತ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
Mysuru : ಯುವ ಕಲಾವಿದರಿಂದ ಮನಮೋಹಕ ದಾಸವಾಣಿ ಕಛೇರಿ
ದಾಸವಾಣಿ ಕಛೇರಿಯಲ್ಲಿ ಉದಯೋನ್ಮುಖ ಪ್ರತಿಭೆಗಳಾದ ಎ.ಆರ್. ಕೌಸಲ್ಯಾ ಮತ್ತು ಎ.ಆರ್. ಅಪ್ರಮೇಯ ಅವರು ‘ಶರಣು ಸಿದ್ಧಿ ವಿನಾಯಕ, ಶರಣು ವಿದ್ಯಾ ಪ್ರದಾಯಕ’ ಕೃತಿಯ ಮೂಲಕ ಗಾಯನ ಆರಂಭಿಸಿದರು.
Also Read>> ಮೈಸೂರು | ಆ. 30ರಂದು ರಾಯರ ಮಠದಲ್ಲಿ ಭಾನುವಾರ ಕೌಸಲ್ಯಾ- ಅಪ್ರಮೇಯ ಕಛೇರಿ
ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತಾದ ‘ತೇರಾ ನೇರಿ ಮೆರೆದು ಬರುವ ಭೂಸುರ ವಂದ್ಯಾ ಯಾರಕ್ಕಾ’, ‘ತುಂಗಾ ತೀರ ವಿರಾಜಂ’ ಸೇರಿದಂತೆ ವಿವಿಧ ಕೃತಿಗಳನ್ನು ಪ್ರಸ್ತುತಪಡಿಸಿ ಸಭಿಕರನ್ನು ರಂಜಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ದಾಸವಾಣಿ ಕಛೇರಿ ಸಂಗೀತಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಗಾಯನಕ್ಕೆ ಪಕ್ಕವಾದ್ಯದಲ್ಲಿ ಪಂಡಿತ್ ಪರಮೇಶ್ವರ ಹೆಗಡೆ (ತಬಲಾ), ವಿದ್ವಾನ್ ಗಣೇಶ ಭಟ್ (ಕೀಬೋರ್ಡ್) ಹಾಗೂ ವಿದ್ವಾನ್ ಶಾಂತಮೂರ್ತಿ (ರಿದಂ ಪ್ಯಾಡ್) ಅವರು ಸಾಥ್ ನೀಡಿದರು.

ಸಾಂಸ್ಕೃತಿಕ ಸೇವೆಗೆ ಮೈಸೂರು ಮಂಜುನಾಥ್ ಮೆಚ್ಚುಗೆ
ಟಿಕೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಹಲವು ವರ್ಷಗಳಿಂದ ಧಾರ್ಮಿಕ ಸೇವೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದು ಮೈಸೂರು ಮಂಜುನಾಥ್ ಹೇಳಿದರು.
ವಿಶೇಷವಾಗಿ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಸಂಗೀತ ಪರಂಪರೆಯ ಬೆಳವಣಿಗೆಗೆ ಮಠ ಹಾಗೂ ಟ್ರಸ್ಟ್ ನೀಡುತ್ತಿರುವ ಪ್ರೋತ್ಸಾಹ ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಾಸವಾಣಿ ಕಛೇರಿಯ ಕಲಾವಿದರನ್ನು ಖ್ಯಾತ ವಿದ್ವಾಂಸ ಮೈಸೂರು ಮಂಜುನಾಥ್ ಅವರು ಗೌರವಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಜಯರಾಂ, ಟ್ರಸ್ಟಿಗಳಾದ ಶಿವಶಂಕರ್ ಮತ್ತು ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










