ಕಲ್ಪ ಮೀಡಿಯಾ ಹೌಸ್ | ಬಾರಕೂರು/ಉಡುಪಿ |
ಋಗ್ವೇದವು (Rigveda) ಎಲ್ಲ ಶಾಸ್ತ್ರಗಳ ತಾಯಿಯಾಗಿದೆ ಎಂದು (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಬಾರಕೂರಿನ ಶ್ರೀ ಮಠದಲ್ಲಿ 47 ನೇ ಚಾತುರ್ಮಾಸ್ಯದ ಸಂದರ್ಭ ಋಗ್ವೇದ ಅಧ್ಯಯನ ಮಾಡಿದ 17 ವಿದ್ವಾಂಸರಿಗೆ ಸ್ಮರಣಿಕೆ ಹಾಗೂ ಸಂಭಾವನೆ ಸಹಿತ ಗೌರವ ಪ್ರದಾನ ಮಾಡಿ ಅವರು ಅನುಗ್ರಹ ಸಂದೇಶ ನೀಡಿದರು.
ಋಗ್ವೇದವು ಸಕಲ ವೇದಗಳಲ್ಲಿ ಅಗ್ರ ಸ್ಥಾನ ಪಡೆದಿದೆ. ಇಲ್ಲಿ ಹೇಳದೇ ಇರುವ ವಿಚಾರಗಳೇ ಇಲ್ಲ. ಇದನ್ನು ಋಷಿ, ಮುನಿಗಳೂ ಸಾಕ್ಷೀಕರಿಸಿದ್ದಾರೆಂದರು. ಋಗ್ವೇದವನ್ನು ಕಂಠಸ್ಥ ಮಾಡಿದ ವಿದ್ವಾಂಸರು ಇಂದು ವಿರಳವಾಗುತ್ತಿದ್ದಾರೆ.
ಪದ, ಕ್ರಮ, ಜಟಾ, ಘನ ಸೇರಿದಂತೆ ಯಾವ ರೀತಿಯಲ್ಲಾದರೂ ಗ್ರಂಥ ನಿರಪೇಕ್ಷವಾಗಿ ಋಗ್ವೇದ ಹೇಳಲು ಸಮರ್ಥರಾಗಿರುವ ದೇಶದ ವಿವಿಧ ಭಾಗದ 17 ವಿದ್ವಾಂಸರು 9 ದಿನಗಳ ಕಾಲ ಶ್ರೀ ಮಠದಲ್ಲಿ ಪಾರಾಯಣವನ್ನು ಮಾಡಿರುವುದು ಒಂದು ದಾಖಲೆಯೇ ಆಗಿದೆ ಎಂದರು. 
ವೇದಗಳ ಸಂರಕ್ಷಣೆ ಎಂದರೆ ವೇದವನ್ನು ಕರಗತ ಮಾಡಿಕೊಂಡ ಪಂಡಿತರ ಸಂರಕ್ಷಣೆಯೇ ಆಗಿದೆ. ಎಲ್ಲಿ ವಿದ್ವಾಂಸರಿಗೆ ಗೌರವ, ಮನ್ನಣೆಗಳು ಪ್ರಾಪ್ತವಾಗುವುದೋ ಅಲ್ಲಿ ಸಕಲ ಶಾಸ್ತ್ರಗಳು ಅನುರಣಿಸುತ್ತವೆ. ಚಾತುರ್ಮಾಸ್ಯ ಸಂದರ್ಭ 4 ವೇದಗಳ ಪಾರಂಗತರಾದವರನ್ನು ಹುಡುಕಿ ಕರೆತಂದು, ಅವರಿಂದ ಪಾರಾಯಣ ಮಾಡಿಸಿ, ಗೌರವಾದರ ನೀಡುವ ಉದ್ದೇಶಕ್ಕೆ ಉತ್ತೇಜನ ದೊರಕಿರುವುದು ಪರಂಪರೆಗೆ ದೊರೆತ ಸುಕೃತವಾಗಿದೆ ಎಂದರು.
Udupi : ಬಿರುದು ಪ್ರದಾನ
ಶ್ರೀರಂಗಂನ ತ್ರಯೀ ವಿದ್ಯಾಗುರುಕುಲದ ಸಂಸ್ಥಾಪಕ, ಪಂಡಿತ ವಿಜಯೇಂದ್ರ ಭಾರತೀ ಘನಪಾಠಿ ಅವರಿಗೆ ಋಗುದ್ಗಾರ ವಾಗೀಶ ಎಂಬ ಬಿರುದು ಸಹಿತ ಪ್ರಶಸ್ತಿಯನ್ನು ಶ್ರೀ ವಿದ್ಯೇಶ ತೀರ್ಥರು ಪ್ರದಾನ ಮಾಡಿದರು.
ಸನ್ಮಾನಕ್ಕೆ ಉತ್ತರಿಸಿದ ಪಂಡಿತ ವಿಜಯೇಂದ್ರ ಭಾರತೀ ಘನಪಾಠಿ, 2008 ರಲ್ಲಿ ಪ್ರಾರಂಭವಾದ ನಮ್ಮ ಗುರುಕುಲಕ್ಕೆ ಶ್ರೀ ವಿದ್ಯೇಶತೀರ್ಥರು ಆಗಮಿಸಿ ಸಮರ್ಥ ಮಾರ್ಗದರ್ಶನ ನೀಡಿದ್ದ ಫಲವಾಗಿ ಇಂದು ದೇಶದ ವಿವಿಧೆಡೆ ನಮ್ಮ ತ್ರಯೀ ವಿದ್ಯಾಗುರುಕುಲದ ಶಾಖೆಗಳು ಆರಂಭವಾಗಿವೆ. ನೂರಾರು ವಿದ್ಯಾರ್ಥಿಗಳು ವೇದಾಧ್ಯಯನ ಮಾಡಲು ಪ್ರೇರಣೆ ದೊರಕಿದೆ. ಇಂಥಾ ಗುರುಗಳ ಕೃಪೆಯೇ ನಮಗೆ ದಾರಿದೀಪವಾಗಿದೆ ಎಂದರು. 5 ವಿದ್ವಾಂಸರಿಗೆ ಋಗುದ್ಘೋಷ ದೇಶಿಕ, 11 ವಿದ್ವಾಂಸರಿಗೆ ಋಗುದ್ಘೋಷ ಮಹಾವ್ರತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೊಸ ಪರ್ವವನ್ನೇ ನಿರ್ಮಾಣ ಮಾಡಿದೆ
ಬ್ರಹ್ಮಾವರದ ಪ್ರಸಿದ್ಧ ವೇದಮೂರ್ತಿ ಹೃಷೀಕೇಶ ಬಾಯರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಶ್ರೀ ವಿದ್ಯೇಶ ತೀರ್ಥರು ಬಹಳ ಅಪರೂಪದ ಮತ್ತು ಮಹೋನ್ನತವಾದ ಕಾರ್ಯವನ್ನು ಚಾತುರ್ಮಾಸ್ಯ ಸಂದರ್ಭ ಮಾಡುತ್ತಿದ್ದಾರೆ. ವೇದ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆ ಚಾತುರ್ಮಾಸ್ಯ ಸಂದರ್ಭದಲ್ಲಿ ಹೊಸ ಪರ್ವವನ್ನೇ ನಿರ್ಮಾಣ ಮಾಡಿದೆ ಎಂದರು.
ಶ್ರೀ ವಿದ್ಯಾಮಾನ್ಯ ತೀರ್ಥರು ಪೀಠದಲ್ಲಿದ್ದಾಗ ನಾನು ಶ್ರೀಮಠದ ಸಂಪರ್ಕ ಹೊಂದಿದ್ದೆ. ಮಹಾಗುರುಗಳ ಆಶಯವನ್ನು ವಿದ್ಯೇಶ ತೀರ್ಥರು ಸಾಕಾರ ಗೊಳಿಸುತ್ತಿದ್ದಾರೆಂದರು.
ವಿದ್ವಾಂಸರಾದ ರಾಮಕೃಷ್ಣ ಘನಪಾಠಿ, ವಾಸುದೇವ ಘನಪಾಠಿ, ಪರೀಕ್ಷಿತ ಘನಪಾಠಿ, ಆನಂದತೀರ್ಥ, ರಾಘವ, ಶ್ರೀನಾಥ, ಅನಿರುದ್ಧ , ನರಸಿಂಹ ಶರ್ಮಾ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









