ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರ ಕನ್ನಡ) |
ವೇಗನ್ ಸಿದ್ಧಾಂತದಲ್ಲಿ ಹಾಲು ಮತ್ತು ತುಪ್ಪವನ್ನು ಹಿಂಸೆಯ ವ್ಯಾಪ್ತಿಗೆ ಸೇರಿಸಲಾಗಿದ್ದರೂ, ಗೋವಿನ ಉತ್ಪನ್ನ (Cow Product) ಗಳನ್ನು ಈ ವ್ಯಾಪ್ತಿಯಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕಣ (Gokarna) ಅಭಿಪ್ರಾಯಪಟ್ಟರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆ. 5ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಅವರು, ಆಹಾರ ಪದ್ಧತಿ, ಅಹಿಂಸೆ ಹಾಗೂ ಕರ್ಮ ಸಿದ್ಧಾಂತದ ನಡುವಿನ ಸಂಬಂಧವನ್ನು ವಿವರಿಸಿದರು.
ಗೋವಿನ ಹಾಲಿನಲ್ಲಿ ಪ್ರಾಣಿ ಹಿಂಸೆ ಇಲ್ಲ
ವೇಗನ್ ಸಿದ್ಧಾಂತದ ಅಹಿಂಸಾತ್ಮಕ ಆಶಯವನ್ನು ಒಪ್ಪಿಕೊಳ್ಳಬಹುದಾದರೂ, ಗೋವಿನ ಹಾಲು ಮತ್ತು ತುಪ್ಪವನ್ನು ಪ್ರಾಣಿ ಹಿಂಸೆಯೊಂದಿಗೆ ಸಮೀಕರಿಸುವುದು ಸರಿಯಲ್ಲ ಎಂದು ಶ್ರೀಗಳು ಹೇಳಿದರು.
ಗೋವಿನಲ್ಲಿ ಉತ್ಪತ್ತಿಯಾಗುವ ಹಾಲು ಸಾಮಾನ್ಯವಾಗಿ ಕರುವಿನ ಅಗತ್ಯಕ್ಕಿಂತ ಹೆಚ್ಚಿರುತ್ತದೆ. ಹಾಲು ಕರೆಯುವ ಸಂದರ್ಭದಲ್ಲಿ ಕರುವಿಗೆ ಅಗತ್ಯವಿರುವ ಹಾಲನ್ನು ಬಿಟ್ಟು, ಉಳಿದ ಹಾಲನ್ನು ಮಾತ್ರ ಹಿಂಡುವ ಪದ್ಧತಿ ಭಾರತದೆಲ್ಲೆಡೆ ಪ್ರಚಲಿತದಲ್ಲಿದೆ. ಹೀಗಾಗಿ ಹಾಲು ಮತ್ತು ಅದರಿಂದ ತಯಾರಾಗುವ ತುಪ್ಪದ ಹಿಂದೆ ಪ್ರಾಣಿ ಹಿಂಸೆ ಇದೆ ಎಂದು ಹೇಳಲಾಗದು ಎಂದು ಅವರು ಸ್ಪಷ್ಟಪಡಿಸಿದರು.
ಹಾಲು, ತುಪ್ಪ, ಅಕ್ಕಿ, ನೀರು ‘ಜಾತಿ ಸಾತ್ಮ್ಯ’ ಆಹಾರ
ಮನುಷ್ಯ ಜಾತಿಯ ಎಲ್ಲರಿಗೂ ಸಾಮಾನ್ಯವಾಗಿ ಹೊಂದಿಕೊಳ್ಳುವ ಆಹಾರ ಪದಾರ್ಥಗಳಾಗಿ ನೀರು, ತುಪ್ಪ, ಹಾಲು ಮತ್ತು ಅಕ್ಕಿಯನ್ನು ಆಯುರ್ವೇದ ಗುರುತಿಸಿದೆ. ಇವುಗಳನ್ನು ‘ಜಾತಿ ಸಾತ್ಮ್ಯ’ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ ಎಂದು ರಾಘವೇಶ್ವರ ಶ್ರೀಗಳು ವಿವರಿಸಿದರು.
ಪ್ರಕೃತಿಯ ಜೀವಿಗಳಿಗೆ ಒಗ್ಗುವಂತಹ ಈ ಆಹಾರ ಪದಾರ್ಥಗಳನ್ನು ಆಯುರ್ವೇದ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ಮ ಸಿದ್ಧಾಂತದ ಪಾತ್ರವೂ ಇದೆ. ಈ ನಾಲ್ಕು ಪದಾರ್ಥಗಳಲ್ಲಿ ಪ್ರಾಣಿ ಹಿಂಸೆಯ ಪಾಲು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಪವಾಗಿದೆ ಎಂದು ಅವರು ಹೇಳಿದರು.
Also read>> ಋಗ್ವೇದವು ಎಲ್ಲ ಶಾಸ್ತ್ರಗಳ ತಾಯಿಯಾಗಿದೆ | ವಿದ್ಯೇಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ
ಆಹಾರವೇ ಪಾಪ ಸೇರುವ ಪ್ರಮುಖ ದ್ವಾರ
ಆಹಾರವು ಮನುಷ್ಯನ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ, ಪಾಪಗಳು ನಮ್ಮನ್ನು ಬಂದು ಸೇರುವ ಪ್ರಮುಖ ದ್ವಾರವೂ ಆಗಿದೆ. ಆದ್ದರಿಂದ ಆಹಾರದಿಂದ ದೋಷಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಶಾಸ್ತ್ರಗಳು ಸೂಚಿಸಿವೆ ಎಂದು ಶ್ರೀಗಳು ಹೇಳಿದರು.
ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಾಗಲೂ ಕೆಲವು ಜೀವಿಗಳು ಆಕಸ್ಮಿಕವಾಗಿ ಸಾಯಬಹುದು. ಸಸ್ಯಾಹಾರವನ್ನು ತಯಾರಿಸುವ ಸಂದರ್ಭದಲ್ಲಿಯೂ ಸೂಕ್ಷ್ಮ ಜೀವಿಗಳು ಸೇರಿದಂತೆ ಕೆಲವು ಜೀವಿಗಳಿಗೆ ಹಿಂಸೆಯಾಗುವ ಸಾಧ್ಯತೆಯಿದೆ. ಈ ವಾಸ್ತವವನ್ನು ಭಾರತೀಯ ಪರಂಪರೆ ಗುರುತಿಸಿದೆ ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಗೃಹಸ್ಥರಿಗೆ ಶಾಸ್ತ್ರಗಳು ‘ವೈಶ್ವದೇವ’ ಆಚರಣೆಯನ್ನು ಸೂಚಿಸಿವೆ. ಅಡುಗೆ ಮಾಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಸಂಭವಿಸುವ ಜೀವಹಿಂಸೆಗೆ ಪ್ರಾಯಶ್ಚಿತ್ತದ ರೂಪದಲ್ಲಿ ವೈಶ್ವದೇವವನ್ನು ಪರಿಗಣಿಸಲಾಗಿದೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.
‘ಸಾಧ್ಯವಾದಷ್ಟು ಅಹಿಂಸೆಯಿಂದ ಬದುಕಬೇಕು’
ಕೆಲವು ವರ್ಷಗಳ ಹಿಂದೆ ಗೋಕರ್ಣದ ಹನುಮಜ್ಜನ್ಮಭೂಮಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ಶ್ರೀಗಳು ಪ್ರವಚನದಲ್ಲಿ ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ವಿದೇಶಿ ದಂಪತಿಗಳಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಮಾಂಸಾಹಾರ ಸೇವಿಸುತ್ತಾರೆ. ಅದನ್ನು ತ್ಯಜಿಸುವಂತೆ ಅವರಿಗೆ ತಿಳಿಸಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದ್ದರು.
ಆ ವೇಳೆ ಆ ವ್ಯಕ್ತಿ, “ಸಸ್ಯಾಹಾರ ಸೇವಿಸುವಾಗಲೂ ಗಿಡ-ಮರಗಳಿಗೆ ಹಿಂಸೆಯಾಗುತ್ತದೆ. ಅದೂ ಹಿಂಸೆಯಲ್ಲವೇ?” ಎಂದು ಪ್ರಶ್ನಿಸಿದ್ದನ್ನು ಶ್ರೀಗಳು ಪ್ರಸ್ತಾಪಿಸಿದರು.
ಭಾರತೀಯ ಪರಂಪರೆಯು ಅಹಿಂಸೆಯಿಂದ ಬದುಕಬೇಕು; ಅದು ಸಾಧ್ಯವಾಗದಿದ್ದರೆ ಸಾಧ್ಯವಾದಷ್ಟು ಅಲ್ಪ ಹಿಂಸೆಯಿಂದ ಬದುಕಬೇಕು ಎಂಬ ಮಾರ್ಗವನ್ನು ತೋರಿಸಿದೆ ಎಂದು ಅವರು ಹೇಳಿದರು.
ಮಾಂಸಾಹಾರದಲ್ಲಿಯೂ ಕೆಲವು ಗುಣಗಳಿವೆ ಎಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ಅದನ್ನು ಕುರುಡಾಗಿ ತಿರಸ್ಕರಿಸುವುದಲ್ಲ. ಆದರೆ ಮಾಂಸಾಹಾರದಲ್ಲಿ ಹಿಂಸೆಯ ಪ್ರಮಾಣ ಹೆಚ್ಚಿರುವುದರಿಂದ ಅದನ್ನು ಸಾಮಾನ್ಯವಾಗಿ ಸೂಚಿಸಿಲ್ಲ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಗುರುಭಿಕ್ಷಾಸೇವೆ ಸಮರ್ಪಣೆ
ಧರ್ಮಸಭೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಹವ್ಯಕ ಮಂಡಲದ ಸರ್ವಧಾರಿ, ಜಯಪ್ರಕಾಶ, ಸೋಮೇಶ್ವರ ಹಾಗೂ ಕೋರಮಂಗಲ ವಲಯಗಳ ಪರವಾಗಿ ಎ. ರಾಮ ಭಟ್ಟ ಕುಟುಂಬದವರು ಗುರುಭಿಕ್ಷಾಸೇವೆಯನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಮೋಹನ ಭಾಸ್ಕರ ಹೆಗಡೆ, ಜಿ.ಜಿ. ಹೆಗಡೆ, ಎನ್.ಜಿ. ಭಾಗ್ವತ್, ಅನಿತಾ ಭಟ್ ಹಾಗೂ ಅರ್ಚನಾ ಕುರುವೇರಿ ಉಪಸ್ಥಿತರಿದ್ದರು. ದಿನಪ್ರಧಾನರಾಗಿ ಬೇರ್ಕಡವು ಶ್ಯಾಮ ಭಟ್ ದಂಪತಿಗಳು ಪಾಲ್ಗೊಂಡಿದ್ದರು.
Gokarna : ಗೋಕರ್ಣದಲ್ಲಿ ಕೃಷ್ಣಾಷ್ಟಮಿ ಸಂಭ್ರಮ
ಇದೇ ಸಂದರ್ಭದಲ್ಲಿ ಗೋಕರ್ಣದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ಮಕ್ಕಳಿಗಾಗಿ ಮೊಸರು ಕಡೆಯುವುದು, ಹಗ್ಗ ಜಗ್ಗಾಟ, ಬಾಳೆಗೊನೆ ಸ್ಪರ್ಧೆ, ಗೋವುಗಳೊಂದಿಗೆ ಮಕ್ಕಳ ಕಾರ್ಯಕ್ರಮ, ಶ್ರೀಕೃಷ್ಣ ರೂಪಕ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಹಾಗೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.
ರಾತ್ರಿ 12:09ಕ್ಕೆ ಶ್ರೀಕೃಷ್ಣ ಜನ್ಮೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಬಾಲಕೃಷ್ಣನಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಉಪಸ್ಥಿತರಿದ್ದ ಮಾತೆಯರು, ಮಕ್ಕಳು ಹಾಗೂ ಭಕ್ತರು ಬಾಲಕೃಷ್ಣನ ತೊಟ್ಟಿಲನ್ನು ತೂಗಿ ಕೃಷ್ಣ ಜನ್ಮೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








