ಕಲ್ಪ ಮೀಡಿಯಾ ಹೌಸ್ | ಹಾಸನ |
ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ (Hasana) ಪ್ರತಿಷ್ಠಿತ ಹೆಚ್ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ಸೆ.16ರಂದು ‘ಕಾವ್ಯ ಪರ್ವ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಕಾರ್ಕಳದ ಪುಸ್ತಕ ಮನೆ ವತಿಯಿಂದ ಕನ್ನಡದ ಪ್ರಖ್ಯಾತ ಹಾಸ್ಯಕವಿ ಹಾಗೂ ನಾಟಕಕಾರ ಎಚ್. ಡುಂಡಿರಾಜ್ ಅವರ 100ನೇ ಪುಸ್ತಕ ಬಿಡುಗಡೆ (Book Release) ಹಾಗೂ 70ನೇ ವರ್ಷದ ಅಭಿನಂದನಾ ಕಾರ್ಯಕ್ರಮ ಮತ್ತು ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರ ಪುಸ್ತಕ ಬಿಡುಗಡೆ ಹಾಗೂ 80ನೇ ವರ್ಷದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಎಚ್. ಡುಂಡಿರಾಜ್ ಅವರ ‘ಕಾವ್ಯ ಡುಂಡಿಮ’ ಹಾಗೂ ಬಿ.ಆರ್. ಲಕ್ಷ್ಮಣರಾವ್ ಅವರ ‘ಸಾವೇ ಬೀಗಬೇಡ’ ಮತ್ತು ‘ಓಶೋ ರಜನೀಶ್ ನಿಜರೂಪ’ ಕೃತಿಗಳು ಲೋಕಾರ್ಪಣೆಗೊಂಡವು.
ಕನ್ನಡ ಸಾಹಿತ್ಯದ ದಿಗ್ಗಜರಿಗೆ ಗೌರವ
ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ನಾಡಿನ ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.
ಹೂವಿನಲ್ಲಿ ದುಂಬಿಗಳಿರುವಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಎಚ್. ಡುಂಡಿರಾಜ್ ಹಾಗೂ ಕನ್ನಡದ ಪ್ರೇಮಕವಿ ಎಂದೇ ಖ್ಯಾತರಾದ ಬಿ.ಆರ್. ಲಕ್ಷ್ಮಣರಾವ್ ಅವರಂತಹ ಹಿರಿಯ ಸಾಹಿತಿಗಳು ಸಾಹಿತ್ಯದ ಸೊಬಗನ್ನು ಹೆಚ್ಚಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಇಬ್ಬರು ಸಾಹಿತ್ಯ ದಿಗ್ಗಜರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಕೃತಿಗಳ ಪರಿಚಯ
ಸಾಹಿತಿ, ವಿಮರ್ಶಕ, ಲೇಖಕ ಹಾಗೂ ಅಧ್ಯಾಪಕ ಡಾ. ಎಚ್.ಎಸ್. ಸತ್ಯನಾರಾಯಣ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು. ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪರಂಪರೆಯನ್ನು ಮುಂದುವರಿಸಿರುವ ಇಂದಿನ ಪ್ರೇಮಕವಿಯಾಗಿ ಬಿ.ಆರ್. ಲಕ್ಷ್ಮಣರಾವ್ ಗುರುತಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಎಚ್. ಡುಂಡಿರಾಜ್ ಅವರ ಹಲವು ಹನಿಗವನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರ ಸಾಹಿತ್ಯದ ವೈಶಿಷ್ಟ್ಯ ಹಾಗೂ ಕೃತಿಗಳ ಕುರಿತು ಮಾತನಾಡಿದರು.
‘ಕನ್ನಡವನ್ನು ಶ್ರೀಮಂತಗೊಳಿಸುವ ಉದ್ದೇಶದಿಂದ ಬೇರೆ ಭಾಷೆ ಕಲಿತೆ’
ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ, ನಮ್ಮ ನಾಡಿನಲ್ಲಿ ಇಂಗ್ಲಿಷ್ ಭಾಷೆಯಾಗಿ ಬಳಸುವುದಕ್ಕಿಂತ ಪ್ರತಿಷ್ಠೆಯ ಸಂಕೇತವಾಗಿ ಬೆಳೆಯುತ್ತಿರುವುದು ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಉದ್ದೇಶದಿಂದ ತಾವು ಬೇರೆ ಬೇರೆ ಭಾಷೆಗಳನ್ನು ಕಲಿತಿರುವುದಾಗಿ ತಿಳಿಸಿದರು.
ತಮ್ಮ ಕೃತಿಗಳನ್ನು ಪ್ರಕಟಿಸಿರುವ ಪುಸ್ತಕ ಮನೆಗೆ ಅಭಿನಂದನೆ ಸಲ್ಲಿಸಿದ ಅವರು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇಂತಹ ಪ್ರಯತ್ನಗಳು ಅಗತ್ಯವೆಂದು ಹೇಳಿದರು.
Also Read>> ಹುಬ್ಬಳ್ಳಿ ರೈಲು ಪ್ರಯಾಣಿಕರಿಗೆ ಎಚ್ಚರಿಕೆ | ಟಿಕೆಟ್ ತಪಾಸಣೆಯಲ್ಲಿ 212 ಪ್ರಕರಣ, ₹1.37 ಲಕ್ಷ ದಂಡ
‘ಕಾವ್ಯ ಡುಂಡಿಮ’ ನನ್ನ 100ನೇ ಕೃತಿ ಎಂಬುದು ಸಂತಸದ ಸಂಗತಿ
ಕನ್ನಡದ ಪ್ರಖ್ಯಾತ ಹಾಸ್ಯಕವಿ ಹಾಗೂ ನಾಟಕಕಾರ ಎಚ್. ಡುಂಡಿರಾಜ್ ಮಾತನಾಡಿ, ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿರುವ 100ನೇ ಪುಸ್ತಕ ತಮ್ಮ ‘ಕಾವ್ಯ ಡುಂಡಿಮ’ ಕೃತಿಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಪುಸ್ತಕ ಮನೆಗೆ ಅಭಿನಂದನೆ ಸಲ್ಲಿಸಿದ ಅವರು, ತಮ್ಮ ಹಲವು ಹಾಸ್ಯ ಚುಟುಕುಗಳನ್ನು ವಾಚಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು. ತಮ್ಮ ಕಾವ್ಯಗಳು ದೇಶ-ವಿದೇಶಗಳಲ್ಲಿ ಸ್ನೇಹ-ಬಾಂಧವ್ಯ ಬೆಸೆಯಲು ಕಾರಣವಾಗಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಷ್ಟೇ ಸೀಮಿತವಾಗದೆ, ಸಾಹಿತ್ಯ ಓದುವ ಹವ್ಯಾಸವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Hasana: ಸಾಹಿತ್ಯ ಮತ್ತು ಸಂಗೀತದ ಸಂಗಮ
ಹಾಸನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ಎಚ್.ಎಲ್. ಮಲ್ಲೇಶ್ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನ ಹೆಸರಾಂತ ಗಾಯಕರಾದ ಪಂಚಮ್ ಹಳಿಬಂಡಿ ಹಾಗೂ ಚಿನ್ಮಯಿ ಚಂದ್ರಶೇಖರ್ ಅವರು ಸಾಹಿತಿಗಳ ರಚನೆಗಳಲ್ಲಿ ಮೂಡಿಬಂದ ಕವನಗಳನ್ನು ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಮೆರುಗು ನೀಡಿದರು.
ಅವಿನಾಶ್ ಕಾಮತ್ ಅವರು ಸಾಹಿತ್ಯ ದಿಗ್ಗಜರಾದ ಎಚ್. ಡುಂಡಿರಾಜ್ ಹಾಗೂ ಬಿ.ಆರ್. ಲಕ್ಷ್ಮಣರಾವ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು, ಶಿಕ್ಷಕರಿಂದ ಉತ್ತಮ ಸ್ಪಂದನೆ
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಎ. ಹಾಗೂ ಉಪ ಪ್ರಾಂಶುಪಾಲ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಮೇಶ್ ಎಂ. ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ‘ಕಾವ್ಯ ಪರ್ವ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದರು. ಹಿರಿಯ ಸಾಹಿತಿಗಳ ಕೃತಿ ಬಿಡುಗಡೆ, ಅಭಿನಂದನೆ, ಕಾವ್ಯ ವಾಚನ, ಗಾಯನ ಹಾಗೂ ಸಂವಾದದ ಮೂಲಕ ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಅರ್ಥಪೂರ್ಣ ಅನುಭವ ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









