ಶಿವಮೊಗ್ಗ: ಹೆಣಕ್ಕಾಗಿ ಇದ್ದ ಸ್ಮಶಾನ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಅಡಿಕೆ ಮರ ಬೆಳೆಸಿದರೆ ಹೆಣವನ್ನ ಎಲ್ಲಿ ಹೂಳಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿ ಕಾಡುತ್ತಿದೆ.
ಹೀಗೊಂದು ಪ್ರಕರಣ ಶಿವಮೊಗ್ಗ ಗ್ರಾಮಾಂತರ ಸೋಗಾನೆ ಬಳಿ ಹಾರೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸೇಠು (65) ಎಂಬುವರು ವಯೋಸಹಜ ಕಾರಣದಿಂದ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಶವವನ್ನ ಹೂಳಲು ಗ್ರಾಮದ ಸ್ಮಶಾನ ಜಾಗಕ್ಕೆ ತರಲಾಗಿತ್ತು.
ಆದರೆ ಹೂಳದೆ ಶವವನ್ನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವಾಪಾಸು ತೆಗೆದುಕೊಂಡು ಹೋಗಿದ್ದಾರೆ. ಯಾಕೆ ಅಂದರೆ ನಿಜಕ್ಕೂ ಶಾಕ್ ಆಗಲೇ ಬೇಕು! ಸ್ಮಶಾನ ಜಾಗದ ಒಂದು ಎಕ್ಕರೆಯನ್ನ ಸ್ಮಶಾನ ಜಾಗದ ಪಕ್ಕದ ಅಡಿಕೆ ತೋಟದ ಮಾಲೀಕ ವೆಂಕಟೇಶ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವೆಂಕಟೇಶ್ ಒಂದು ಎಕರೆ ಜಾಗದಲ್ಲಿ ಮುಕ್ಕಾಲು ಎಕರೆ ಅಡಿಕೆ ಮರ ಬೆಳೆಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಿಟ್ಟಿಗೆದ್ದ ಗ್ರಾಮಸ್ಥರು ವೆಂಕಟೇಶ್ ರವರ ತೋಟದ ಅಡಿಕೆ ಮರಗಳನ್ನು ಕಡಿದು ಇಂದು ಬೆಳಿಗ್ಗೆ ಶವಸಂಸ್ಕಾರ ಮಾಡಿ ಬಂದಿದ್ದಾರೆ.
Discussion about this post