ಶಿವಮೊಗ್ಗ: ಗಂಗಾ ಸ್ನಾನ, ತುಂಗಾ ಪಾನ ಎಂಬ ನಾನ್ನುಡಿ ಹಿಂದಿನಿಂದಲೂ ಇದೆ. ಅಂದರೆ, ಮಲೆನಾಡಿನ ತುಂಗೆ ಕುಡಿಯಲು ಅಷ್ಟು ಶುದ್ಧ ಹಾಗೂ ರುಚಿ ಎಂಬುದು ಇದರ ಅರ್ಥ.
ಆದರೆ, ಇಂತಹ ಪವಿತ್ರ ತುಂಗಾ ನದಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆಯೇ ಎಂಬ ಅನುಮಾನ ಮತ್ತೂರು ಹಾಗೂ ಹೊಸಹಳ್ಳಿ ಭಾಗದಲ್ಲಿ ಮೂಡಿರುವುದು, ಆತಂಕಕ್ಕೆ ಕಾರಣವಾಗಿದೆ.
ಹೊಸಹಳ್ಳಿ ಭಾಗದ ತುಂಗಾ ನದಿಯ ನೀರಿನ ಬಣ್ಣ ಬದಲಾಗಿದ್ದು, ನೂರಾರು ಮೀನುಗಳ ಸತ್ತ ತೇಲುತ್ತಿವೆ. ಸಣ್ಣ ಗಾತ್ರದ ಮೀನಿನಿಂದ ಹಿಡಿದು, ಬೃಹತ್ ಗಾತ್ರದ ಮೀನುಗಳವರೆಗೂ ನೂರಾರು ಸಂಖ್ಯೆಯಲ್ಲಿ ಸತ್ತು, ಕೊಳೆತ ವಾಸನೆ ಹರಡಿದೆ.
ಈ ಕುರಿತಂತೆ ಅಧಿಕಾರಿಗಳು ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ ಎನ್ನಲಾಗಿದ್ದು, ಇದರ ವರದಿ ಎರಡು ದಿನದಲ್ಲಿ ಸಿಗಲಿದೆ ಎಂದು ತಿಳಿದುಬಂದಿದೆ. ಒಂದು ಮೂಲಗಳ ಮಾಹಿತಿಯಂತೆ ಸುಮಾರು ಮೂರು ನಾಲ್ಕು ದಿನಗಳ ಹಿಂದೆಯೇ ನದಿ ನೀರಿಗೆ ವಿಷ ಬೆರೆಸಲಾಗಿದೆ ಎಂದು ಅನುಮಾನಿಸಲಾಗಿದೆ.
ಹೀಗೆ, ನೂರಾರು ಸಂಖ್ಯೆಯಲ್ಲಿ ಮೀನುಗಳು ಸತ್ತಿರುವುದು ಏಕೆ? ಯಾರಾದರೂ ವಿಷ ಬೆರೆಸಿದ್ದಾರೆಯೇ? ಅಥವಾ ನೀರು ಕಲುಷಿತಗೊಂಡಿದೆಯೇ ಎಂಬ ಹಲವು ಪ್ರಶ್ನೆಗಳನ್ನು ಘಟನೆ ಹುಟ್ಟುಹಾಕಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಯಾವುದೇ ನಾಗರಿಕರು ನದಿ ನೀರು ಸೇವಿಸದಂತೆ ಹಾಗೂ ತಮ್ಮ ಪ್ರಾಣಿಗಳನ್ನು ನದಿ ಬಳಿ ಬಿಡದಂತೆ ಮನವಿ ಮಾಡಲಾಗಿದ್ದು, ಸದ್ಯ ಗ್ರಾಮಪಂಚಾಯ್ತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಒದಗಿಸುವುದಾಗಿ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಅಥವಾ ಜಿಲ್ಲಾಡಳಿತ ಅಧಿಕೃತ ಮಾಹಿತಿ ಹೊರಡಿಸಿಲ್ಲವಾದರೂ, ಮತ್ತೂರು ಹಾಗೂ ಹೊಸಹಳ್ಳಿ ಭಾಗದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಹೀಗಾಗಿ, ಜಿಲ್ಲಾಡಳಿತ ಈ ಕುರಿತಂತೆ ತತಕ್ಷಣವೇ ಗಮನ ಹರಿಸಿ, ಅನುಮಾನಗಳಿಗೆ ತೆರೆ ಎಳೆಯಬೇಕಿದೆ.
(ಚಿತ್ರ-ವರದಿ: ಸುಮುಖ, ಶಿವಮೊಗ್ಗ)
Discussion about this post