ಶಿವಮೊಗ್ಗ: ರಂಗಭೂಮಿ ಒಂದು ಶಕ್ತಿಯುತವಾದಂತಹ ಸಮೂಹ ಇದು ಸಿನಿಮಾ ಮತ್ತು ಇನ್ನಿತರೆ ಮಾಧ್ಯಮಗಳಿಗಿಂತ ವಿಭಿನ್ನವಾದಂತಹ ಜೀವಂತ ಲೋಕ ರಂಗಭೂಮಿ ಎಂದು ಪುರುಷೋತ್ತಮ್ ತಲವಾಟ ಹೇಳಿದರು.
ಅವರು ಶಿವಮೊಗ್ಗದ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ಚಿಣ್ಣರೊಂದಿಗೆ ರಂಗಾಯಣ ಬೇಸಿಗೆ ಶಿಬಿರದ ಸಮಾರೋಪ ಹಾಗೂ ರಂಗ ನಿರ್ದೇಶಕಿ ಎಸ್ ಮಾಲತಿ ಅವರಿಗೆ ರಂಗನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಮನಸ್ಸು ಮಣ್ಣಿನಂತಹದು ಅದನ್ನು ಒಳ್ಳೆಯ ಆಕೃತಿಗಳನ್ನಾಗಿಸುವ ಕಾರ್ಯವನ್ನು ರಂಗಭೂಮಿ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಎಲ್ಲಾ ಮಕ್ಕಳು ಸಹ ಬುದ್ದಿವಂತರು, ಎಲ್ಲರಲ್ಲೂ ಸಹ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅವರನ್ನು ಇನ್ನೊಬ್ಬರಿಗೆ ಹೋಲಿಸಿ ಮುಗ್ಧ ಮನಸ್ಸುಗಳಿಗೆ ಘಾಸಿಗೊಳಿಸಬಾರದು. ಅವರ ಆಸಕ್ತ ವಿಷಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಅವರು ಹೇಳಿದರು.
ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲವ ಜಿ.ಆರ್ ಮಾತನಾಡಿ ಇಂದು ಜಗತ್ತಿನಲ್ಲಿ ಎಲ್ಲಾ ವಿಷಯಗಳು ವ್ಯವಹಾರಗಳಾಗಿ ಬದಲಾಗಿವೆ. ಶಿಕ್ಷಣ ಸಹ ಮಾರಾಟ ಮಾಡುವಂತಹ ಸರಕಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಹುಟ್ಟುವಾಗ ವಿಶ್ವ ಮಾನವರಾಗುವ ನಾವು ಬೆಳೆಯುತ್ತ ಅಲ್ಪಮಾನವರಾಗಿ ಬದಲಾಗುತ್ತೇವೆ. ಮತ್ತೆ ವಿಶ್ವ ಮಾನವರನ್ನಾಗಿ ಮಾಡುವ ಕಾರ್ಯವನ್ನು ರಂಗಭೂಮಿ ಮಾಡುತ್ತದೆ ಎಂದು ಅವರು ಹೇಳಿದರು.
ಇಂದಿನ ಶಿಕ್ಷಣ ಅಹಂಕಾರದ ಮೂಲವಾಗಿದೆಯೆ ಹೊರತು ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲವಾಗಿಲ್ಲ. ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯ ರಂಗಭೂಮಿಯಿಂದಾಗುತ್ತದೆ ಎಂದು ಅವರು ಹೇಳಿದರು.
ರಂಗಾಯಣದ ನಿರ್ದೇಶಕ ಡಾ. ಎಂ. ಗಣೇಶ್ ಮಾತನಾಡಿ ರಂಗಭೂಮಿ ಮತ್ತು ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಎಸ್. ಮಾಲತಿ. ಇಂದಿನ ದಿನ ಅವರಿಗೆ ಸಲ್ಲಿಸಲಾಗುತ್ತಿರುವ ರಂಗನಮನ ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.
ರಂಗಕರ್ಮಿ ಮಾಲತಿಯವರಿಗೆ ಬಿ.ವಿ ಕಾರಂತ ಪ್ರಶಸ್ತಿ ನೀಡಲು ಒತ್ತಾಯ
ಇತ್ತೀಚೆಗೆ ನಿಧನರಾದ ರಂಗಕರ್ಮಿ ಎಸ್. ಮಾಲತಿಯವರಿಗೆ ಪ್ರತಿಷ್ಠಿತ ಪ್ರಶಸ್ತಿಯಾದ ಬಿ.ವಿ. ಕಾರಂತ ಪ್ರಶಸ್ತಿಯನ್ನು ನೀಡಬೇಕೇಂದು ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕ ಎಂ. ಗಣೇಶ ಒತ್ತಾಯಿಸಿದರು.
ಈ ಸಮಾರಂಭದಲ್ಲಿ ಚಿಂತಕರಾದ ಕೆ. ಶರೀಫಾ, ಎಂ. ರಾಘವೇಂದ್ರ, ರಂಗಾಯಣ ಆಡಳಿತಾಧಿಕಾರಿಯವರಾದ ಶಫಿ ಸಾದುದ್ದೀನ್, ಶಿಬಿರದ ನಿರ್ದೇಶಕರಾದ ಚಂದ್ರು ತಿಪಟೂರು, ಆರ್. ಗಿರೀಶ್ ಹಾಜರಿದ್ದರು.
Discussion about this post