ನಂದಿತಾ ಎನ್ನುವ ಕರಾವಳಿ ಹುಡುಗಿ ಕರಾಟೆ ಕ್ಷೇತ್ರದಲ್ಲಿ ಮಾಡಿದ ಕಮಲ್ ನೀವು ತಿಳಿಯಲೇಬೇಕು.
ಮಂಗಳೂರಿನ ಸುರತ್ಕಲ್ ನಿವಾಸಿಗಳಾದ ವಿಠಲ್ ದಾಸ್ ಭಂಡಾರ್ಕರ್ ಹಾಗೂ ಕವಿತಾ ದಂಪತಿಗಳ ಮಗಳಾದ ನಂದಿತಾ ಅವರು ಕರಾಟೆ ಕ್ರೀಡೆಯಲ್ಲಿ ಮಂಗಳೂರಿನ ಹೆಸರು ಪ್ರಕಾಶಿಸುವಂತೆ ಮಾಡಿದ್ದಾರೆ.
ಬಾಲ್ಯದಲ್ಲಿ ನಂದಿತಾ ಎಲ್ಲಾ ಹುಡುಗಿಯರಂತೆ ಕೇವಲ ಶಾಲೆ ಮತ್ತು ಮನೆ ಅಂತಾನೆ ಇದ್ದವರು. ನಂದಿತಾರ ತಂಗಿ ಕರಾಟೆ ತರಬೇತಿಗೆ ಹೋಗುವುದನ್ನು ನೋಡಿ ನಾನು ಕರಾಟೆ ಕಲಿಯಬೇಕು ಎಂದು ಆಸೆ ಪಡುತ್ತಾರೆ. ಪ್ರಾರಂಭದಲ್ಲಿ ತಂದೆಯವರು ಮಗಳನ್ನು ಕರಾಟೆಗೆ ಕಳುಹಿಸಲು ಒಪ್ಪಲಿಲ್ಲ. ಆದರೆ ನಂದಿತಾ ಅವರ ಆಸಕ್ತಿಯನ್ನು ಕಂಡು ಮನಸ್ಸಿಲ್ಲದ ಮನಸ್ಸಿನಿಂದ ಮಗಳಿಗೆ ಒಪ್ಪಿಗೆಯನ್ನು ನೀಡಿದ ದಿನೇಶ್ ಆಚಾರ್ಯ ಹಳೆಯಂಗಡಿ ಅವರ ಬಳಿ ಕರಾಟೆ ತರಬೇತಿಗೆ ಸೇರಿಸಿದರು.
ನಂದಿತಾ ತನ್ನೊಳಗೆ ಒಂದು ಅದ್ಬುತವಾದ ಕ್ರೀಡಾ ಶಕ್ತಿ ಇದೆ ಎಂದು ತಿಳಿದ ನಂತರ ಪ್ರತಿನಿತ್ಯ ಶ್ರದ್ದೆ ಭಕ್ತಿಯಿಂದ ಕರಾಟೆಯನ್ನು ಕಲಿಯಲು ಆರಂಭಿಸುತ್ತಾರೆ.
ಯಾವ ದಿನ ನಂದಿತಾ ಕರಾಟೆ ತರಬೇತಿಗೆ ಸೇರಿಕೊಂಡರೋ ಆ ದಿನವೇ ನಂದಿತಾ ಅವರ ಬದುಕಿನ ಪಥ ಬದಲಾಯಿತು. ಕಷ್ಟಪಟ್ಟು ದಿನನಿತ್ಯ ಅಭ್ಯಾಸ ಮಾಡಿ ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ಏನು ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಕರಾಟೆಯನ್ನು ಕರಗತ ಮಾಡಿಕೊಂಡರು.
ನಂದಿತಾ ಅವರು ಕರಾಟೆ ಎನ್ನುವ ಕ್ರೀಡಾ ಜಗತ್ತಿಗೆ ಕಾಲಿಟ್ಟು ಐದು ವರ್ಷವಾಗುತ್ತಿದೆ. ಈ ಐದು ವರ್ಷದಲ್ಲಿ ನಂದಿತಾ ಅವರು ಮಾಡಿದ ಸಾಧನೆ ಅಪಾರವಾದದ್ದು.
ಹೋಬಳಿ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟ ಈಗ ಅಂತಾರಾಷ್ಟ್ರೀಯ ಮಟ್ಟದವರೆಗೂ ನಂದಿತಾ ಅವರ ಕೀರ್ತಿ ಪಸರಿಸಿದೆ. ಸಾಧನೆ ಮಾಡಲು ಸ್ತ್ರೀ ಪುರುಷ ಎನ್ನುವ ಭೇದವಿಲ್ಲ. ಸಾಧನೆ ಮಾಡಲು ಬೇಕಿರುವುದು ಕೇವಲ ಇಚ್ಚಾಶಕ್ತಿ ಎನ್ನುವುದು ನಂದಿತಾ ಅವರ ಸಾಧನೆಯನ್ನು ನೋಡಿದಾಗ ನಮಗೆ ತಿಳಿಯುತ್ತದೆ. ಪ್ರಸ್ತುತ ನಂದಿತಾ ಅವರು ಸುರತ್ಕಲ್’ನ ಗೋವಿಂದಸ ಕಾಲೇಜ್’ನಲ್ಲಿ ಬಿಸಿಎ ಓದುತ್ತಿದ್ದಾರೆ.
ವಿಝಗ್, ಬೆಂಗಳೂರು, ಹೈದರಾಬಾದ್, ಬಳ್ಳಾರಿ, ಅಂಧ್ರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇದುವರೆಗೆ ನಂದಿತಾ ಅವರು 24 ಚಿನ್ನದ ಪದಕ, 15 ಬೆಳ್ಳಿಯ ಪದಕ, 3 ಕಂಚಿನ ಪದಕವನ್ನು ಪಡೆದಿದ್ದಾರೆ.
ಈ ಬಾರಿ ಜೂನ್ ತಿಂಗಳಲ್ಲಿ ನಡೆಯುವ 45 ರಿಂದ 50 ಕೆಜಿ ಒಳಗಿನ 18 ವರ್ಷಕಿಂತ ಮೇಲ್ಪಟ್ಟ ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ನಂದಿತಾ ಅವರು ಆಯ್ಕೆ ಆಗಿದ್ದಾರೆ. ಕರಾವಳಿಯ ಕೀರ್ತಿ ವಿದೇಶಗಳಲ್ಲೂ ಮಿನುಗಲಿ, ಭಾರತ ಮಾತೆಯ ಮುಡಿಗೆ ಕರಾಟೆಯಲ್ಲಿ ಬಂಗಾರದ ಪಾದಕವನ್ನು ಗೆದ್ದು ತಂದು ಹೊಸ ಇತಿಹಾಸ ಬರೆಯಿರಿ.
ಹೆಣ್ಣು ಮಕ್ಕಳು ಕರಾಟೆಯನ್ನು ಕೇವಲ ಕ್ರೀಡೆ ಎನ್ನುವ ಉದ್ದೇಶಕ್ಕೆ ಕಲಿಯುವುದರ ಬದಲು ತಮ್ಮ ಆತ್ಮ ರಕ್ಷಣೆಗಾಗಿ ಕಲಿಯಬಹುದಾಗಿದೆ. ಗುರಿ ಸರಿಯಾಗಿದ್ದರೆ ಜೀವನದಲ್ಲಿ ಹೆಣ್ಣು ಗಂಡು ಎನ್ನುವ ಭೇದವಿಲ್ಲದೆ ಸಾಧನೆಯ ಶಿಖರವನ್ನು ಏರಬಹುದು ಎನ್ನುವುದಕ್ಕೆ ನಂದಿತಾ ಎನ್ನುವ ಕರಾವಳಿಯ ಕುವರಿ ಉತ್ತಮ ಉದಾಹರಣೆ.
ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳಿವೆ. ಆದರೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹದ ಕೊರತೆಯಿಂದ ಎಲೆಯ ಮರೆಯ ಕಾಯಿಯಂತೆ ಉಳಿದು ಬಿಡುತ್ತವೆ. ಪ್ರತಿಭೆಯನ್ನು ಗುರುತಿಸಿ ಬೆಂಬಲಿಸುವ ಮಹಾತ್ಕಾರ್ಯ ನಮ್ಮಿಂದ ಆಗಬೇಕಿದೆ.
ಹೆಣ್ಣು ಅಬಲೆ ಅಲ್ಲ ಸಬಲೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣುಮಕ್ಕಳ ಶಿಕ್ಷಣ, ಕ್ರೀಡೆ ಯಾವುದೇ ಪ್ರತಿಭೆಯಿರಲಿ ಅದಕ್ಕೆ ಸೂಕ್ತ ಬೆಂಬಲವನ್ನು ನೀಡುವುದಕ್ಕೆ ಯೋಜನೆಯನ್ನು ರೂಪಿಸಿದೆ. ಅಂತಹ ಅಗತ್ಯತೆಗಳನ್ನು ಒದಗಿಸುವ ಕೆಲಸ ಸಮಾಜದ ಬಂಧುಗಳಿಂದ ಆಗಬೇಕಿದೆ.
ನಂದಿತಾ ಅವರೇ, ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದ ನೀವು ಭವ್ಯ ಭಾರತದ ಪ್ರತಿನಿಧಿಯಾಗಿ ಭಾಗವಹಿಸುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಗಾರವನ್ನು ಗೆದ್ದುಬನ್ನಿ. ಕರಾವಳಿಯ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ನಿಮ್ಮಿಂದ ಸೇರಲಿ.
ಲೇಖನ: ಗೌರಿ ಆವರ್ಸೆ
ಚಿತ್ರಕೃಪೆ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post