ಕಳೆದ 5 ದಿನಗಳಿಂದ ಕೆಲಸದ ನಿಮಿತ್ತ ದೆಹೆಲಿಯಲ್ಲಿದ್ದೇನೆ. ಇಲ್ಲಿಗೆ ಬಂದ ದಿನದಿಂದ ನನ್ನೂರಿನಲ್ಲಿ ಮಹಾ ಮಳೆ!!! ಅಮ್ಮನಿಗೆ ಫೋನಾಯಿಸಿದಾಗಲೆಲ್ಲ ಬರೀ ನೀರಿನದೇ ಚರ್ಚೆ. ತುಂಗೆ ತುಂಬಿ ಹರಿಯುತ್ತಿದ್ದಾಳೆ, ಮಂಟಪ ಮುಳುಗಿದೆ, ಕೆಲವು ಕೆಳ ಪ್ರದೇಶಗಳಿಗೆ ನೀರು ನುಗ್ಗಿದೆ ….ಇನ್ನೂ ಏನೇನೋ.
ಇಲ್ಲಿನ ಹೋಟೆಲ್ಲಿನ್ನಲ್ಲಿ ಕಷ್ಟುಪಟ್ಟು ಹುಡುಕಿದ ಒಂದೆರಡು ಕನ್ನಡ ಚಾನಲ್ಗಳನ್ನು ನೋಡಿದ ನಂತರ ಸುಮ್ಮನೆ ಇರಲಾಗದ-ಏನೂ ಮಾಡಲಾಗದ ಚಡಪಡಿಕೆ…..ಯಾವ ಯಾವ ನೆಲದಲ್ಲಿ ನೀರೆಂದರೆ ಜನ ಪ್ರಾಣ ಬಿಡುತ್ತಿದ್ದರೋ ಅಲ್ಲೇ ಆ ಜನರು ನೀರಿನಿಂದಲೇ ಪ್ರಾಣ ಬಿಡುವಂತಾಗಿದೆ!!! ಎಂದೂ ಹೆಸರು ಸಹಾ ಕೇಳದ ಯಾವುದೋ ಹೊಸ ನದಿಗಳೆಲ್ಲ ತುಂಬಿ ಹರಿಯುತ್ತಿದೆ!! ನೀರಿಗಾಗಿ ಆ ಬಯಲುಸೀಮೆ ಜನರು ವರ್ಷಾನುಗಟ್ಟಲೆ ಮಾಡಿದ ತಪ್ಪಸ್ಸನ್ನು ಮೆಚ್ಚಿ ಒಮ್ಮೆಲೆ ಆಕಾಶದ ನಲ್ಲಿಯನ್ನು ತಿರುಗಿಸಿ ಆ ದೇವರು ನೀರು ಬಿಟ್ಟಂತಾಗಿದೆ.!
ಅಲ್ಲಿ ಕೆಲವು ಜಾಗಗಳಲ್ಲಿ ಮಳೆ ಇಲ್ಲವೇ ಇಲ್ಲ! ಆದರೆ ಪ್ರವಾಹವಿದೆ…. ಎಲ್ಲೋ ಹನಿಯಾಗಿ ಬಿದ್ದ ನೀರು ಇಲ್ಲಿ ಬಂದು ಈ ಜನರನ್ನು ಒದ್ದೆ ಮಾಡಿದೆ!!!! ಎಂದೂ ಕಂಡು ಕೇಳಿರದ ಹೊಸ ರೌದ್ರಾನುಭವಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ನೀರಿನ ನಾಮಾವಷೇವೂ ಇಲ್ಲದ ಕೆರೆ-ಕೊಳ್ಳಗಳು ಕೋಡಿ ಬಿದ್ದಿವೆ….. ಬಯಸಿ ಬಯಸಿ ಬರೆ ಎಳೆದುಕೊಂಡಂತಾಗಿದೆ.
ಬಾಗಲಕೋಟೆ, ಬೆಳಗಾಮ್, ಬೀದರ್, ಬಿಜಾಪುರದ ಕಥೆ ಇದಾದರೆ…..ಮಳೆ ಸಹಜವಾಗಿಯೇ ಹೆಚ್ಚಿರುವ ಮಲೆನಾಡಿನಲ್ಲೂ ಅದೇ ಕುಂಭದ್ರೋಣದ ಅವಸ್ಥೆ!!!! ವರ್ಷಾನು ವರ್ಷ ಮಳೆ ಇಲ್ಲದೇ ಪರಿತಪಿಸುವ ಹಾಸನದ ಬಯಲುಸೀಮೆ ಭಾಗಗಳಾದ ಬೆಳವಾಡಿ, ಅರಸೀಕೆರೆ, ಹಾರನಹಳ್ಳಿಗಳಲ್ಲಿ ಮಳೆ ಇಲ್ಲದೇ ಜನ ಆಕಾಶದತ್ತ ಮುಖಮಾಡಿ ಕಾಯುತ್ತಿದ್ದಾರೆ….. ಇತ್ತ ಬಳ್ಳಾರಿ-ಕೊಪ್ಪಳ ಭಾಗದಲ್ಲೂ ಬರದ ಕರಿ ನೆರಳು. ಇದರ ಮಧ್ಯೆ ಅಲ್ಲಿ ಮೈಸೂರು ಕೊಡಗು ಮುಳು ಮುಳುಗಿ ಎಳುತ್ತಿವೆ….ಉತ್ತರ ಕನ್ನಡ-ದಕ್ಷಿಣ ಕನ್ನಡವಂತೂ ಅಕ್ಷರಷಃ ಕೊಚ್ಚಿ ಹೋಗಿವೆ!!!!!
ಇದೇನು ವಿಪರ್ಯಸ ಒಂದು ರಾಜ್ಯದಲ್ಲಿ ಒಂದೇ ಸಮಯದಲ್ಲಿ ಬರ ಮತ್ತು ನೆರೆ ಒಟ್ಟೊಟ್ಟಿಗೆ!!!!! ಒಮ್ಮೆ ಅತಿವೃಷ್ಠಿ ಒಮ್ಮೆ ಅನಾವೃಷ್ಠಿ ನೋಡಿದ್ದ ನಮಗೆ ಈ ಎರಡೂ ವಿಪರೀತಗಳೂ ಕೈ ಕೈ ಹಿಡಿದು ಜೊತೆಯಾಗಿ ಬಂದಿರುವುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!!!
ಒಮ್ಮೆ ಯೋಚಿಸಿ ನೋಡಿ…. ಏಕೆ ಹೀಗೆ ?!! ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಂಡವೇ? ಇದ್ದರೂ ಇರಬಹುದು!!! ಗೊತ್ತಿಲ್ಲ …..ಕವಿ ಜಿ.ಎಸ್.ಎಸ್ ಈ ನಿರ್ವಾತ ಸ್ಥಿತಿಯನ್ನು ಈ ರೀತಿ ಬಣ್ಣಿಸುತ್ತಾರೆ. “ನಾಗರಿಕತೆಯಲ್ಲಿ ನಾವು ಮುಂದುವರಿದಂತೆ ನಮಗೂ ನಿಸರ್ಗಕ್ಕೂ ನಡುವಣ ಅಂತರ ಹೆಚ್ಚಾಗುತ್ತಿದೆ. ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಮ್ಮ ಕಣ್ಣೆದುರಿಗೆ ನಾವು ಪರಿಸರ ನಾಶದ ಮಹಾದುರಂತಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವಧಾತುವಾದ ಹಸಿರು ಕಣ್ಮರೆಯಾಗುತ್ತಿದೆ; ಯಂತ್ರೋದ್ಯಮಗಳ ಆಧಿಕ್ಯದಿಂದ ನಮ್ಮ ನದೀಜಲಗಳು ಕಲ್ಮಶಗೊಳ್ಳುತ್ತಿವೆ; ಉಸಿರಾಡುವ ಗಾಳಿ, ತಿನ್ನುವ ಅನ್ನ – ಎಲ್ಲವೂ ಮಲಿನಗೊಳ್ಳುತ್ತಿವೆ. ನಗರೀಕರಣದ, ಯಾಂತ್ರೀಕರಣದ ಭರಾಟೆಗಳಲ್ಲಿ ನಾವು ಸುತ್ತಣ ನಿಸರ್ಗದ ಯಾವ ಚೆಲುವನ್ನೂ ಕಾಣಲಾರದ ಪ್ರಾಯೋಜನಿಕ ಬುದ್ಧಿಯ ಬಂದಿಗಳಾಗಿದ್ದೇವೆ. ಯಾವುದೂ ತನ್ನ ಮೊದಲಿನ ಶುದ್ಧ ರೂಪದಲ್ಲಿ ದೊರೆಯಲಾಗದ ಒಂದು ‘ಮಾಲಿನ್ಯ ಯುಗ’ವನ್ನು ನಾವು ಪ್ರವೇಶಿಸುತ್ತಿದ್ದೇವೆ. ಈ ಮಾಲಿನ್ಯ ಕೇವಲ ಹೊರಗಿನದು ಮಾತ್ರವಲ್ಲ, ಒಳಗಿನದೂ ಕೂಡ!”……. ಎಷ್ಟು ನಿಜ ಅಲ್ವಾ?!
ಎರಡು ತಿಂಗಳ ಹಿಂದೆ ಮುಂಗಾರು ಆರಂಭವಾದಾಗ ಬರಬೇಕಾದ ಮಳೆ ಬಂದಿರಲಿಲ್ಲ…..ಧರ್ಮಸ್ಥಳದಂತಹ ನಿತ್ಯ ಹರಿದ್ವರ್ಣದ ಜಾಗದಲ್ಲಿ ನೀರು ಇರಲಿಲ್ಲ.. ಬಿಸಿಲ ಝಳ ತಾಳದೇ ಮಲೆನಾಡಿನ ಅಡಿಕೆ ಮರಗಳು ಒಣಗಿ ಹೋಗಿದ್ಹವು. ಮಲೆನಾಡಿನ ಜೀವ ನದಿಗಳಾದ ತುಂಗಾ, ಭಧ್ರ, ಶರಾವತಿಯ ಆಣೆಕಟ್ಟಿನ ಹಿನ್ನೀರು ಬತ್ತಿ ನೆಲ ಕಾಣುವ ಹಂತಕ್ಕೆ ಬಂದು ತಲುಪಿದ್ದವು!!! ಮುಂದಿನ ದಿನಗಳು ಹೇಗೋ ಅನ್ನುವಷ್ಟರಲ್ಲಿ ಈಗ ಈ ಮಳೆ. ಬರೀ ಮಳೆಯಲ್ಲಿ ಮಹಾಮಾರಿಯ ಮಳೆ!!
ಪ್ರತಿ ನೈಸರ್ಗಿಕ ಪ್ರಕೋಪವು ನಮಗೆ ಸುತ್ತಿ ಬಳಸಿ ಹೇಳುವುದೊಂದೆ…. ಹೇ ಮನುಜ ಪ್ರಕೃತಿಯ ಮುಂದೆ ನಿನ್ನ ಅಸ್ತಿತ್ವಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ…. ನೆಲ- ನೀರು, ಗಾಳಿ, ಪರಿಸರಕ್ಕೆ ಕೊಡಬೇಕಾದ ಮರ್ಯದೆಯನ್ನು ನೀನು ಕೊಡುತ್ತಿಲ್ಲ… ಇಗೋ ಇದು ನನ್ನ ಎಚ್ಚರಿಕೆಯ ಕರೆಗಂಟೆ!!
ಮನುಷ್ಯನೆಂಬ ಅತಿ ಕ್ಷುದ್ರ ಜೀವಿ ನಿರಂತರವಾಗಿ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ. ಅವಳು ಅಸಹಾಯಕಳಾಗಿ ರೋಧಿಸುತ್ತಿದ್ದಾಳೆ. ಕಣ್ಣೀರು ಕೋಡಿಯಾಗಿದೆ…. ಕೋಡಿಯಿಂದ ಕಟ್ಟೆಯೊಡೆದಿದೆ……. ಕಟ್ಟೆಯೊಡೆದು ಕೊಚ್ಚಿ ಹೋಗಿದೆ!! ಆಧುನಿಕರಾದ ನಾವು ಚಂದ್ರ-ಮಂಗಳ ಗ್ರಹಗಳನ್ನು ತಲುಪಬಹುದು ಆದರೆ ಸುರಿವ ಮಳೆಯನ್ನು ನಿಲ್ಲಿಸಲಾರೆವು….. ಪ್ರಾರ್ಥನೆಯೊಂದೆ ನಮಗಿರುವ ದಾರಿ…
“ಬೆಟ್ಟವೂ ನಿನ್ನದೇ ಬಯಲೂ ನಿನ್ನದೇ….ಹಬ್ಬಿ ನಗಲಿ ಪ್ರೀತಿ ನೆರಳೋ-ಬಿಸಿಲೋ ಎಲ್ಲವೂ ನಿನ್ನದೇ….ಇರಲಿ ಏಕರೀತಿ”
ಮುಳುಗದಿರಲಿ_ಬದುಕು
ಲೇಖನ: ವಿನಯ್ ಶಿವಮೊಗ್ಗ
















