ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ರಿಪಬ್ಲಿಕ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ಸಂಪಾದಕ ಅರ್ನಾಬ್ ರಂಜನ್ ಗೋಸ್ವಾಮಿ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಯೂರ ದರ್ಶನ್ ಉಳ್ಳಿ ದೂರು ದಾಖಲಿಸಿದ್ದಾರೆ.
ಈ ಕುರಿತಂತೆ ಇಂದು ದೂರು ಸಲ್ಲಿಸಿರುವ ಅವರು, ಮಹಾರಾಷ್ಟ್ರದ ಫಾಲ್ಕರ್’ನಲ್ಲಿ ನಡೆದ ಗುಂಪು ಹತ್ಯೆಯ ಕುರಿತು ಅರ್ನಾಬ್ ಗೋಸ್ವಾಮಿ ಅವರು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಅವಹೇಳನಕಾರಿ, ಕೋಮು ಪ್ರಚೋದಕ ಹಾಗೂ ಮಾನಹಾನಿಯ ಹೇಳಿಕೆಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅರ್ನಾಬ್ ರಂಜನ್ ಗೋಸ್ವಾಮಿ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶೇ.80ರಷ್ಟು ಹಿಂದೂಗಳಿರುವ ಭಾರತದಲ್ಲಿ ಫಾಲ್ಕರ್ ಗುಂಪು ಹತ್ಯೆಯ ಕುರಿತು ಶ್ರೀಮತಿ ಸೋನಿಯಾ ಗಾಂಧಿಯವರು ಮೌನ ವಹಿಸಿದ್ದಾರೆ. ಆದರೆ, ಯಾರಾದರೂ ಮೌಲ್ವಿ ಅಥವಾ ಪಾದ್ರಿಯ ಹತ್ಯೆ ಅಥವಾ ಹಲ್ಲೆಯಾಗಿದ್ದರೆ, ದೇಶದ ತುಂಬಾ ಬೊಬ್ಬಿಡುತ್ತಿದ್ದರು. ಆದರೆ ಈಗ ಇಟಾಲಿಯನ್ ಸೋನಿಯಾ ಗಾಂಧಿ ಮತ್ತವರ ಪಕ್ಷದವರು ತಮ್ಮ ಸರ್ಕಾರವು ಆ ರಾಜ್ಯದಲ್ಲಿ ಆಡಳಿತದಲ್ಲಿದೆ ಎಂಬ ಕಾರಣಕ್ಕೆ ಮೌನವಹಿಸಿದ್ದಾರೆ. ನಾನು ಸರ್ಕಾರವನ್ನು ರಚಿಸಿದ ರಾಜ್ಯದಲ್ಲೇ ಹಿಂದೂಗಳನ್ನು ಕೊಲ್ಲುತ್ತಿದ್ದೇನೆ ಎಂದು ಸೋನಿಯಾ ಗಾಂಧಿಯವರು ಇಟಾಲಿಯನ್ ಸರ್ಕಾರಕ್ಕೆ ವರದಿಕಳುಹಿಸಿ, ಅಲ್ಲಿಂದ ಪ್ರಶಂಸೆಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ ಎಂದು ದೂರಿದ್ದಾರೆ.
ಗೋಸ್ವಾಮಿ ಅವರು ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ವಿರುದ್ಧ ಅನಗತ್ಯ ಮತ್ತು ಆಧಾರರಹಿತ ಹೇಳಿಕೆ ನೀಡಿದ್ದಾರೆ ಮತ್ತು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನು ವಿನಾಕಾರಣ ದೂಷಿಸಿದ್ದಾರೆ. ಇವರ ಈ ಹೇಳಿಕೆಯು ದೇಶದ ಇತರ ಪಕ್ಷಗಳು ಹಾಗೂ ನಾಗರೀಕರು ವಿಶೇಷವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಕೋಮು ಹಿಂಸಾಚಾರವನ್ನು ಸೃಷ್ಟಿಸಲು ಯತ್ನಿಸಿದಂತಿದೆ ಎಂದು ಆರೋಪಿಸಲಾಗಿದೆ.
ಅರ್ನಾಬ್ ಗೋಸ್ವಾಮಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 117, 120 ಬಿ, 153, 153 ಎ, 295 ಎ, 298, 500, 504, 505 ಹಾಗೂ 506 ಮತ್ತು 1860 ಆರ್/ಡಬ್ಲ್ಯು ಸೆ. 66 ಎ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಅಡಿಯಲ್ಲಿ ಅಪರಾಧವೆಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಸ್ವಾಮಿ ಅವರ ವಿರುದ್ಧ ಎಫ್‘ಐಆರ್ ದಾಖಲಿಸಿ, ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ರಾಜು, ಎ. ದಯಾನಂದ್ ಸೇರಿದಂತೆ ಹಲವರು ಇದ್ದರು.
Get in Touch With Us info@kalpa.news Whatsapp: 9481252093
Discussion about this post