ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಫುಟ್’ಪಾತ್ ಮೇಲೆ ನಾಲ್ಕು ಚಕ್ರದ ವಾಹನಗಳು, ಒಂದು ಮರದ ಗಾಡಿ, ಅದರ ಮೇಲೆ ಹೂವು, ಫುಟ್ಪಾತ್ ಉದ್ದಕ್ಕೂ ದ್ವಿಚಕ್ರ ವಾಹನ ನಿಲುಗಡೆ, ಕಸದ ರಾಶಿ, ಮಾರ್ಗದ ತುಂಬಾ ಹೊಂಡ, ಗುಂಡಿ. ಇದು ಬನಶಂಕರಿ 3ನೆಯ ಹಂತದ ಜನತಾ ಬಜಾರ್’ನ ರಿಂಗ್ ರಸ್ತೆಯಲ್ಲಿ ಕಾಣಬರುವ ಭೀಕರ ದೃಶ್ಯ.
ಜನನಿಬಿಡ ಪ್ರದೇಶವಾದ ಇಲ್ಲಿ ಪ್ರತಿನಿತ್ಯ ಸಾವಿರಾರು ಪಾದಚಾರಿಗಳು ಓಡಾಡುತ್ತಾರೆ. ಆದರೆ, ಇಲ್ಲಿನ ಫುಟ್’ಪಾಟ್ ಅಲ್ಲಲ್ಲಿ ಕುಸಿದುಹೋಗಿದ್ದು, ಇಲ್ಲಿರುವ ಕೆಲವು ಕಚೇರಿಗಳ ಸಿಬ್ಬಂದಿ ಹಾಗೂ ಅಲ್ಲಿಗೆ ಬರುವವರಿಗೆ ಫುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುವುದು ಅಭ್ಯಾಸವಾಗಿ ಹೋಗಿದೆ.
ಇನ್ನು ಇಲ್ಲಿರುವ ಬೆಂಗಳೂರು ಒನ್ ಕಚೇರಿ ಮುಂಭಾಗದಲ್ಲಿರುವ ವಿದ್ಯುತ್ ಕಂಬದ ಬುಡದಲ್ಲಿ ಇರುವ ಒಂದು ಕಬ್ಬಿಣದ ತುಂಡು ಅಪಾಯಕ್ಕೆ ಎಡೆಮಾಡಿಕೊಡುವಂತಿದೆ. ಓಡಾಡುವಾಗ ಕಾಲಿಗೆ ತಗುಲಿ ಎಷ್ಟು ಜನ ಪೆಟ್ಟು ಬಿದ್ದು ನೋವು ತಿಂದಿದ್ದಾರೆ.
ಇದರೊಟ್ಟಿಗೆ ಅಯೋಧ್ಯಾ ಉಪಚಾರ್ ಹೊಟೇಲ್ ಬಳಿಯಿರುವ ಪಾದಚಾರಿ ಮಾರ್ಗದಲ್ಲೂ ಸಹ ಹೊಂಡ-ಗುಂಡಿಗಳು ಹಾಗೂ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡುವುದು ಕಾಣುತ್ತದೆ.
ಇನ್ನು ಹಾಗೆಯೇ ಸ್ವಲ್ಪ ಮುಂದು ಬಂದರೆ ಪುಟ್ ಪಾತ್ ಮೇಲೆ ದೊಡ್ಡ ಕಾರು ಪಾರ್ಕಿಂಗ್, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಫುಟ್ ಪಾತ್ ಕಸ ಹಾಕಲು, ದ್ವಿಚಕ್ರ ವಾಹನ ನಿಲ್ಲಿಸಲು ನಾಲ್ಕು ಚಕ್ರ ವಾಹನ ನಿಲ್ಲಿಸಲು ಹಾಗೂ ಕಸ ಹಾಕುವ ಸ್ಥಳವಾಗಿದೆ.
ಆದರೆ, ಇದನ್ನೆಲ್ಲಾ ನೋಡಿಯೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಇದರ ಬಗ್ಗೆ ವಾರ್ಡ್ ನಂಬರ್ 163 ರ ಬಿಬಿಎಂಪಿ ಕಾರ್ಪೊರೇಟರ್ ಎಂ. ವೆಂಕಟೇಶ್ ಸಂಗಾತಿ ಮತ್ತು ಕ್ಷೇತ್ರದ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಹಾಗೂ ಸಂಬಂಧಿಸಿದ ಪೊಲೀಸರು ಗಮನಹರಿಸಿ ಫುಟ್ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಓಡಾಡಲು ಅನುವು ಮಾಡಿಕೊಡಬೇಕಿದೆ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093
Discussion about this post