ನವದೆಹಲಿ, ಸೆ.3: ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಅವರಿಗೆ ಇತ್ತೀಚೆಗಷ್ಟೆ ಕಂಚಿನ ಪದಕದಿಂದ ಬೆಳ್ಳಿ ಪದಕ ಸಿಗಲಿದೆ ಎಂಬ ಸುದ್ದಿ ಕೇಳಿ ಭಾರತೀಯ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈಗ ಅವರಿಗೆ ಚಿನ್ನದ ಪದಕ ಸಿಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಲಂಡನ್ ಒಲಿಂಪಿಕ್ ನಲ್ಲಿ ಪುರುಷರ 60 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಅಜಬರ್ಜಿನಿನ ತೊಕ್ರಾಲ್ ಅಸ್ಕರೋವ್ ಸಹ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ, ಈ ಬಗ್ಗೆ ವಾಡಾ ವಿಶ್ವಕುಸ್ತಿ ಸಂಸ್ಥೆಗೆ ಅಧಿಕೃತ ಮಾಹಿತಿ ನೀಡಬೇಕಿದೆ. 2012ರಲ್ಲಿ ಪಡೆಯಲಾಗಿರುವ ಯೋಗೇಶ್ವರ್ ದತ್ ಮಾದರಿಯನ್ನು ವಾಡಾ ಮರು ಪರೀಕ್ಷೆ ನಡೆಸಬೇಕಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಸಿಕ್ಕಿಬೀಳದಿದ್ದರೆ ಹರಿಯಾಣದ ದತ್ ಚಿನ್ನ ಗೆದ್ದ ಭಾರತೀಯ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.















