No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Thursday, August 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಹೇಳೋದು ನ್ಯಾಯ, ತಿನ್ನೋದು ಬದನೆಕಾಯಿ: ನಾರಿಮನ್‌ಗೆ ನಿವೃತ್ತಿ ಎಂದು?

kalpa News by kalpa News
September 10, 2016
in ಸಚಿನ್ ಪಾರ್ಶ್ವನಾಥ್
0
Share on FacebookShare on TwitterShare on WhatsApp
ಕರ್ನಾಟಕದಲ್ಲಿ ಮತ್ತೆ ಕಾವೇರಿದ ಸ್ಥಿತಿ. ಕಳೆದ ವರ್ಷ ಹೆಚ್ಚುಕಡಿಮೆ ಇದೇ ಸಮಯಕ್ಕೆ ಪ್ರವಾಹದಲ್ಲಿ ಮುಳುಗೇಳುತ್ತಿದ್ದ ತಮಿಳುನಾಡು ಈ ಬಾರಿ ಕಾವೇರಿ ನೀರಿಗಾಗಿ ಕ್ಯಾತೆ ತೆಗೆದಿದೆ. ಆ ಮೂಲಕ, ಎರಡು ವರ್ಷ ಮುಚ್ಚಿದ್ದ ಕಾವೇರಿ ವಿವಾದದ ಖಾತೆಯನ್ನು ಮರಳಿ ತೆರೆದಂತಾಗಿದೆ. ಈ ಜೀವನದಿಯ ಹೆಸರಿನಲ್ಲಿ ನಡೆದ ಹೋರಾಟಗಳ ಇತಿಹಾಸ ಕೆದಕುತ್ತ ಹೋದರೆ ನೂರು ವರ್ಷಗಳ ಹಿಂದಕ್ಕೆ ಹೋಗಿ ನಿಲ್ಲುತ್ತೇವೆ. ಮೈಸೂರೆಂಬುದು ಒಡೆಯರ ಸೊತ್ತಾಗಿದ್ದಾಗಲೂ, ಮದರಾಸು ಸಂಸ್ಥಾನ ಪರಂಗಿಗಳ ಕೈಯಲ್ಲಿದ್ದಾಗಲೂ ಕಾವೇರಿಯ ಒಡೆತನಕ್ಕಾಗಿ ಹೋರಾಟಗಳು ನಡೆದದ್ದುಂಟು. ಅಲ್ಲಿಂದ ಇಲ್ಲಿಯವರೆಗೆ ಹಲವು ದಶಕಗಳು ಉರುಳಿದರೂ ಹಲವು ಸರಕಾರಗಳು ಬಂದುಹೋದರೂ ಕಾವೇರಿಯೂ ಆಕೆಯ ಸಮಸ್ಯೆಯೂ ಜೀವಂತ. ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳಿಗೆ ಈ ಸಮಸ್ಯೆಯ ಕುರಿತಾಗಿ ಸುರಿದ ದುಡ್ಡು, ಕಾವೇರಿಯ ಒಡಲಲ್ಲಿ ಹರಿದು ಕಡಲು ಸೇರಿದ ನೀರಿನಂತೆ, ಲೆಕ್ಕಕ್ಕೆ ಸಿಗುವಂಥಾದ್ದಲ್ಲ. ಇದೀಗ ಹೊಚ್ಚಹೊಸದಾಗಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕದ ವಿರುದ್ಧ ತೀರ್ಪು ಬಂದಾಗಿನಿಂದ ಕನ್ನಡಿಗರು ಕುಪಿತರಾಗಿದ್ದಾರೆ. ಕೆಲವರು ತಮಿಳುನಾಡಿನ ಮುಖ್ಯಮಂತ್ರಿಗಳನ್ನು ವಾಚಾಮಗೋಚರ ಬೈಯುತ್ತಿದ್ದಾರೆ. ಇನ್ನು ಕೆಲವರು ಕರ್ನಾಟಕವೇ ಗಟ್ಟಿಯಾಗಿ ನಿಂತು ವಾದ ಮಂಡಿಸಿಲ್ಲ ಎನ್ನುತ್ತಿದ್ದಾರೆ. ಮತ್ತೊಂದಷ್ಟು ಜನ, ಕರ್ನಾಟಕದ ಪರವಾಗಿ ವಾದ ಮಾಡಿದ ನ್ಯಾಯವಾದಿಗಳದ್ದೇ ತಪ್ಪು; ಸಮಸ್ಯೆಯನ್ನು ಸರಿಯಾಗಿ ನ್ಯಾಯಾಂಗದ ಮುಂದೆ ವಿವರಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾದರು; ಇಂತಹ ಅಸಮರ್ಥ ನ್ಯಾಯವಾದಿಗಳನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಲ್ಲಿ ನಮ್ಮ ಸರಕಾರ ಮತ್ತು ನ್ಯಾಯವಾದಿಗಳನ್ನು ಕೊರಳಪಟ್ಟಿ ಹಿಡಿದು ಕೇಳುವುದು ಸರಿಯೆನ್ನಿಸಿದರೂ ತೀರ್ಪು ವಿರುದ್ಧವಾಯಿತೆಂಬ ಕಾರಣಕ್ಕೆ ತಮಿಳುನಾಡು ಸರಕಾರವನ್ನು ದೂರಿ ಪ್ರಯೋಜನವಿಲ್ಲ. ಯಾವುದೇ ಸರಕಾರ ತನ್ನ ರಾಜ್ಯದ ಹಿತ ಕಾಪಾಡುವ ಕೆಲಸವನ್ನೇ ಮಾಡುತ್ತದೆ; ಮಾಡಬೇಕು ಕೂಡ. ಹಾಗಾಗಿ ತಮಿಳುನಾಡಿನ ಪರವಾಗಿ ಸಂಪೂರ್ಣ ಶ್ರದ್ಧೆ ಪ್ರಾಮಾಣಿಕತೆಗಳಿಂದ ದುಡಿದಿರುವ ತಮಿಳು ಸರಕಾರ ಮತ್ತು ನ್ಯಾಯವಾದಿಗಳನ್ನು ನಾವು ಗೌರವದಿಂದಲೇ ನೋಡಬೇಕಾಗುತ್ತದೆ. ನಾವು ಪರೀಕ್ಷೆಯಲ್ಲಿ ಫೇಲಾದೆವೆಂದ ಮಾತ್ರಕ್ಕೆ ರ‌್ಯಾಂಕ್ ಪಡೆದ ಬುದ್ಧಿವಂತನನ್ನು ಅಡ್ಡ ಕೆಡವಿ ಬಡಿದಾಡುವುದು ಎಷ್ಟು ಸರಿ? ಇರಲಿ, ಕಾವೇರಿ ಸಮಸ್ಯೆಯ ಬಗ್ಗೆ ಮಾತಾಡಲು ಹಲವು ಪಂಡಿತರಿದ್ದಾರೆ. ಈ ಸಮಸ್ಯೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಯ ಕೆಲವೊಂದು ವಿಚಿತ್ರ ಮತ್ತು ಅಸಂಗತೆಗಳನ್ನು ವಿಶ್ಲೇಷಿಸುವುದಷ್ಟೇ ನನ್ನ ಈ ಲೇಖನದ ಉದ್ದೇಶ.
ಈ ವ್ಯಕ್ತಿಗೆ ಎಂದು ನಿವೃತ್ತಿ?
ಮೊದಲನೆಯದಾಗಿ ಕಾವೇರಿಯ ಪರವಾಗಿ ಹೋರಾಡಲು ನಾವು ಸಮರ್ಥ ವಕೀಲರನ್ನು ನೇಮಿಸಿಕೊಂಡಿದ್ದೇವೆಯೇ ಎಂಬುದು ಪ್ರಶ್ನೆ. ಎರಡು ಪ್ರಮುಖ ನದಿ ನೀರು ಹಂಚಿಕೆ ಸಮಸ್ಯೆಗಳ ವಿಷಯದಲ್ಲಿ ಸದ್ಯ ಕರ್ನಾಟಕದ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಫಾಲಿ ನಾರಿಮನ್, ದೇಶ ಕಂಡ ಗೌರವಾನ್ವಿತ ನ್ಯಾಯವಾದಿಗಳೇನೋ ಹೌದು. ಆದರೆ ಅವರಿಗೆ ತುಂಬು 88 ವರ್ಷ. ಉಳಿದ ಸಂಸ್ಥೆಗಳಲ್ಲಿ ನಿವೃತ್ತಿಯ ವಯಸ್ಸನ್ನು 60 ಇಲ್ಲವೇ 58ಕ್ಕಿಳಿಸಿ ಹೊಸ ರಕ್ತಕ್ಕೆ ಅವಕಾಶ ಮಾಡಿಕೊಡುವ ನಾವು ನ್ಯಾಯಾಂಗದ ವಿಚಾರದಲ್ಲಿ ಮಾತ್ರ ನಿವೃತ್ತಿಯ ವಿಚಾರವನ್ನೇ ಮರೆತುಬಿಟ್ಟಿದ್ದೇವೆ. (ನಿವೃತ್ತಿಯಲ್ಲದ ಇನ್ನೊಂದು ಕ್ಷೇತ್ರ ರಾಜಕೀಯ!) ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಿ.ಎನ್. ರಾಮಸ್ವಾಮಿ ಶಾಸ್ತ್ರಿಗಳು ವಕೀಲಿವೃತ್ತಿ ಮಾಡುತ್ತಿದ್ದರು. ಇವರು ಕನ್ನಡದ ಇಬ್ಬರು ಸ್ಟಾರ್ ನಟರಾಗಿದ್ದ ಸಿ.ಆರ್. ಸಿಂಹ ಮತ್ತು ಪ್ರಣಯರಾಜ ಶ್ರೀನಾಥ್‌ರ ತೀರ್ಥರೂಪರು. 75 ವರ್ಷ ವಕೀಲಿಕೆ ಮಾಡಿದ ಶಾಸ್ತ್ರಿಗಳು 2011ರಲ್ಲಿ ನೂರು ವರ್ಷ ತುಂಬಿದಾಗಲೂ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದರು! ಅವರ ಹಿರಿತನಕ್ಕೆ ಗೌರವ ಸಲ್ಲಿಸೋಣ. ಆದರೆ ಓರ್ವ ವ್ಯಕ್ತಿ, ದಾಖಲೆ ಮಾಡುವುದಕ್ಕಾಗಿಯೇ ಅಷ್ಟೊಂದು ವರ್ಷಗಳ ಕಾಲ ನ್ಯಾಯಾಲಯದ ಭಾಗವಾಗಿರುವುದು ಸರಿಯೇ ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು. ನಮ್ಮ ದೇಶದಲ್ಲಿ ಕೆಲವು ಕೇಸುಗಳು ಪರಿಹಾರವಾಗಲು ದಶಕಗಳನ್ನಲ್ಲ, ಶತಮಾನಗಳನ್ನು ತೆಗೆದುಕೊಳ್ಳುತ್ತವೆ ಎನ್ನುವುದು ನಿಜವಾದರೂ ಆ ಕೇಸಿನುದ್ದಕ್ಕೂ ಒಬ್ಬರೇ ನ್ಯಾಯವಾದಿಗಳು ಹೋರಾಡುತ್ತ ಬರಬೇಕೆನ್ನುವುದು ಎಷ್ಟು ಸರಿ? ವಯೋಸಹಜ ಸಮಸ್ಯೆಗಳು ನ್ಯಾಯವಾದಿಗಳಿಗೂ ಇರುತ್ತವೆ ತಾನೆ?
ವಿರೋಧ ಪಕ್ಷದ ನಾಯಕರಾಗಿದ್ದಾಗ “87 ವರ್ಷದ ನಾರಿಮನ್‌ರನ್ನು ಈ ಪ್ರಕರಣದಿಂದ ಕೈಬಿಡಿ. ಬೇರೆ ದಕ್ಷ ನ್ಯಾಯವಾದಿಗಳನ್ನು ನೇಮಿಸಿಕೊಂಡು ವ್ಯಾಜ್ಯ ಮುಂದುವರಿಸಿ” ಎಂದು ಸರಕಾರಕ್ಕೆ ಚಾಟಿ ಬೀಸಿದ್ದ ಸಿದ್ದರಾಮಯ್ಯ, ಈಗ ಸ್ವತಃ ತಾನೇ ಮುಖ್ಯಮಂತ್ರಿ ಖುರ್ಚಿಯಲ್ಲಿ ಕೂತು ನಾರಿಮನ್‌ರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವುದು ಇನ್ನೊಂದು ವ್ಯಂಗ್ಯ. ನಮ್ಮ ರಾಜ್ಯಕ್ಕೆ ನಿಜವಾಗಿಯೂ ವಕೀಲರ ಕೊರತೆ ಇದೆಯೇ ಎಂಬ ಪ್ರಶ್ನೆ ಕನ್ನಡಿಗರಿಗೆ ಮೂಡುವಂತಾಗಿದೆ. ಫಾಲಿ ನಾರಿಮನ್, ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ. ಅಲ್ಲಿ 22 ವರ್ಷ ಸೇವೆ ಸಲ್ಲಿಸಿದ ಬಳಿಕ ಅವರನ್ನು ಸೀನಿಯರ್ ಅಡ್ವೊಕೇಟ್ ಎಂದು 1971ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಿಸಲಾಯಿತು. ಅಂದಿನಿಂದ, ಅಂದರೆ 45 ವರ್ಷಗಳಿಂದ ಅವರು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ! 1991ರಿಂದಲೂ ಅವರು ದೇಶದ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷರು. ಅಂದರೆ ಕಳೆದ 25 ವರ್ಷಗಳಿಂದ ಆ ಪ್ರಮುಖ ಹುದ್ದೆಯನ್ನು ಒಂದೇ ವ್ಯಕ್ತಿ ಅನುಭವಿಸುತ್ತಿದ್ದಾರೆ! ನಮ್ಮ ದೇಶದಲ್ಲಿ ಅಜಮಾಸು 12 ಲಕ್ಷ ವಕೀಲರಿದ್ದಾರೆ. ಪ್ರತಿ ವರ್ಷ 60ರಿಂದ 65,000 ಜನ ವಕೀಲ ಪದವಿ ಪಡೆದು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ಹೀಗಿರುವಾಗ ದೇಶದ ಅತ್ಯಂತ ಪ್ರಮುಖ ನ್ಯಾಯವಾದಿಗಳ ಒಕ್ಕೂಟಕ್ಕೆ ಒಬ್ಬರೇ ವ್ಯಕ್ತಿ ಬೆಳ್ಳಿಹಬ್ಬ ಆಚರಿಸಿಕೊಳ್ಳುವಷ್ಟು ದೀರ್ಘಾವಧಿಗೆ ಅಧ್ಯಕ್ಷರಾಗಿ ಗೂಟ ಬಡಿದು ಕೂರುವುದು ಯಾವ ನ್ಯಾಯ?
ವಕೀಲಿಕೆಯಲ್ಲಿ ನೈತಿಕತೆ ಬೇಕಿಲ್ಲವೆ?
ನಮ್ಮ ದೇಶದಲ್ಲಿ ನೀವು ಭಯೋತ್ಪಾದಕರಾಗಿದ್ದರೂ ನಿಮ್ಮನ್ನು ಸಮರ್ಥಿಸಿಕೊಳ್ಳಲು ನ್ಯಾಯವಾದಿಗಳನ್ನು ನೇಮಿಸಿಕೊಳ್ಳುವ ವ್ಯವಸ್ಥೆ ಇದೆ. ಕಳ್ಳ, ಸುಳ್ಳ, ಕೊಲೆಗಾರರಿಗೂ ಅವರ ವಾದವನ್ನು ಮುಂದಿಡಲು ಅವಕಾಶ ಕೊಡಬೇಕೆಂಬ ಉದಾರ ಸಂವಿಧಾನ ನಮ್ಮದು ಅಲ್ಲವೆ? ಅದಕ್ಕೊಂದು ಜ್ವಲಂತ ದೃಷ್ಟಾಂತ ಇದು: 1984ರ ಡಿಸೆಂಬರ್ 2-3ರ ನಡುರಾತ್ರಿ ನಡೆದುಹೋದ ಭೋಪಾಲ್ ಗ್ಯಾಸ್ ದುರಂತದಲ್ಲಿ ಮಡಿದವರು 15,000 ಜನ; ಸಾಯುವವರೆಗೆ ಹೊರಬೇಕಾದ ಸಮಸ್ಯೆಗಳನ್ನು ಅಂಟಿಸಿಕೊಂಡ ಸಂತ್ರಸ್ತರು 5 ಲಕ್ಷಕ್ಕೂ ಹೆಚ್ಚು. ಈ ದುರಂತ ನಡೆದು ಕೆಲವೇ ಗಂಟೆಗಳಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಮುಖ್ಯಸ್ಥ ವಾರನ್ ಆಂಡರ್‌ಸನ್ ದೇಶ ಬಿಟ್ಟು ಪಲಾಯನ ಮಾಡಿದ್ದ. ಆತನಿಗೆ ಸ್ವತಃ ವಿಮಾನದ ವ್ಯವಸ್ಥೆ ಮಾಡಿಕೊಟ್ಟದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಎಂಬುದು ಅಚ್ಚರಿಯಾದರೂ ಸತ್ಯ! ಆದರೆ ಮುಂದೆ ಈ ದುರಂತದ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಸು ಹಾಕಿದಾಗ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಪರವಾಗಿ ವಾದ ಮಂಡಿಸಲು ಮುಂದೆ ಬಂದವರು ಇದೇ ಫಾಲಿ ನಾರಿಮನ್! ಮೂವತ್ತು ವರ್ಷಗಳ ನಂತರ ಅವರು ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತ ಒಂದು ಸಂದರ್ಶನದಲ್ಲಿ ಹೇಳಿದ್ದು: “ಹೌದು, ಅದೊಂದು ದೊಡ್ಡ ತಪ್ಪು. ಪ್ರಸಿದ್ಧಿ ಪಡೆಯಲು ಈ ಪ್ರಕರಣವನ್ನು ಬಳಸಿಕೊಳ್ಳಬಹುದೆಂದು ಹಿಂದೆಮುಂದೆ ಯೋಚಿಸದೆ ಯೂನಿಯನ್ ಕಾರ್ಬೈಡ್ ಪರವಾಗಿ ವಾದ ಮಂಡಿಸಿದೆ. ಈಗ ಆ ಕೆಲಸಕ್ಕೆ ಪಶ್ಚಾತ್ತಾಪವಾಗುತ್ತದೆ”. ಆ ಪ್ರಕರಣ ಹಲವು ತಿಂಗಳ ಕಾಲ ನಡೆದು ಕೊನೆಗೆ ಕೋರ್ಟಿನ ಹೊರಗೆ ಇತ್ಯರ್ಥವಾಗುವ ಮೂಲಕ ಕೊನೆಗೊಂಡಿತ್ತು. ಯೂನಿಯನ್ ಕಾರ್ಬೈಡ್, ಸಂತ್ರಸ್ತರಿಗೆ 470 ಮಿಲಿಯ ಡಾಲರುಗಳ ಪರಿಹಾರ ಕೊಡುವ ವಾಗ್ದಾನ ಮಾಡಿತು. ಆದರೆ ಅದಾಗಿ ದಶಕಗಳೇ ಕಳೆದರೂ ಪರಿಹಾರದ ಹಣ ಸಂತ್ರಸ್ತರಿಗೆ ಪೂರ್ತಿಯಾಗಿ ಸಿಕ್ಕಲಿಲ್ಲ. ಹಾಗೆಂದು ಅದರ ಮೇಲೆ ಮತ್ತೆ ಸರ್ವೋಚ್ಚ ನ್ಯಾಯಾಲಯವು ಚಾಟಿ ಬೀಸುವ ಅವಕಾಶವೂ ಇರಲಿಲ್ಲ. ಯಾಕೆಂದರೆ, ಕಂಪೆನಿ ಪರಿಹಾರ ಕೊಡುತ್ತೇನೆಂದಿದ್ದು ನ್ಯಾಯಾಲಯದ ಹೊರಗೆ ವಿನಾ ಒಳಗೆ ಕಟಕಟೆಯಲ್ಲಿ ನಿಂತು ಅಲ್ಲವಲ್ಲ! ಹೀಗೆ ಸ್ವಾತಂತ್ರ್ಯಾನಂತರ ದೇಶ ಕಂಡ ಬಹುದೊಡ್ಡ ದುರಂತದಲ್ಲಿ ಯಾರಿಗೂ ಶಿಕ್ಷೆಯಾಗದೆ, ಯಾರಿಗೂ ಪರಿಹಾರವೂ ಸಿಗದೆ, ಇಡೀ ಪ್ರಕರಣವೇ ಹಳ್ಳ ಹಿಡಿಯಲು ಕಾರಣರಾದವರ ಪಟ್ಟಿಯಲ್ಲಿ ನಾರಿಮನ್ ಇದ್ದರು. “ಕೋರ್ಟಿನಲ್ಲಿ ಪ್ರಕರಣ ಮುಂದುವರಿಸದೆ ಅದನ್ನು ಕೋರ್ಟಿನ ಹೊರಗೆ ಪಂಚಾಯಿತಿ ಮೂಲಕ ಮುಗಿಸಿಹಾಕಿದ್ದು ತಪ್ಪು” ಎಂದು ನಾರಿಮನ್ ಮೂರು ದಶಕಗಳ ನಂತರವಷ್ಟೇ ಒಪ್ಪಿಕೊಂಡರು. ಯೂನಿಯನ್ ಕಾರ್ಬೈಡ್‌ನಿಂದ ನಾರಿಮನ್‌ರಿಗೆ ಸಂದಾಯವಾಗಿದ್ದ ಫೀಸ್ ಎಷ್ಟು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.
ಇದು ನಿಜವಾಗಿಯೂ ಯೋಚಿಸುವಂಥ ವಿಷಯ. ನಮ್ಮಲ್ಲಿ ಯಾವ ಕ್ರಿಮಿನಲ್‌ಗಳನ್ನೂ ಸಮರ್ಥಿಸಿಕೊಂಡು ವಾದ ಮಾಡುವ ವಕೀಲರಿರುತ್ತಾರೆ. ಮುಂಬೈ ದಾಳಿಯಲ್ಲಿ ನೂರಾರು ಅಮಾಯಕರನ್ನು ಕೊಂದುಹಾಕಿದ ಕಸಬ್‌ನಿಗೂ ನ್ಯಾಯವಾದಿಗಳನ್ನು ಒದಗಿಸಿಕೊಟ್ಟ ದೇಶ ನಮ್ಮದು! ಅಗತ್ಯ ಬಿದ್ದರೆ ದೇಶಕ್ಕೆ ಕಂಟಕ ತಂದ ಭಯೋತ್ಪಾದಕರ ಪರವಾಗಿ ವಾದ ಮಾಡುತ್ತೇನೆ ಎನ್ನುತ್ತಾನೆ ಬ್ಯಾರಿಸ್ಟರ್ ಓವೈಸಿ! ಮುಂದೊಂದು ದಿನ ದಾವೂದ್ ಇಬ್ರಾಹಿಂನನ್ನು ಜೀವಂತ ಸೆರೆಹಿಡಿದು ತಂದರೂ ಆತನ ಬಿಡುಗಡೆಗಾಗಿ; ಅಥವಾ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಲಿಕ್ಕಾಗಿ ವಾದ ಮಾಡಲು ಕ್ಯೂ ನಿಲ್ಲುವಷ್ಟು ಜನರಿದ್ದಾರೆ ನಮ್ಮಲ್ಲಿ! ಇಂತಿಂಥಾ ವಿಷಯಗಳಲ್ಲಿ ನ್ಯಾಯಾಂಗ ಯಾವ ಪ್ರತಿವಾದಿಯನ್ನೂ ನೇಮಿಸದೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಕಾನೂನು ಈ ದೇಶದಲ್ಲಿ ಎಂದು ಬಂದೀತು?
ಹೊಡೆದ ಲಕ್ಷಗಳೆಷ್ಟು! ದೋಚಿದ ಕೋಟಿಗಳೆಷ್ಟು!
ಯಾವುದೇ ವೃತ್ತಿಯಲ್ಲಿ ಕೆಲಸಕ್ಕೆ ಇಂತಿಷ್ಟು ಎಂಬ ಸಾಮಾನ್ಯ ದರವೊಂದು ನಿಗದಿಯಾಗಿರುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಿದರೆ ದುಡ್ಡು ಕೊಡಬೇಕಾದವನು ಕ್ರಮ ಜರುಗಿಸಬಹುದು. ಉದಾಹರಣೆಗೆ ಮೆಜೆಸ್ಟಿಕ್ಕಿನಿಂದ ಕಾರ್ಪೊರೇಶನ್ನಿಗೆ ಹೊರಟ ಆಟೋ ರಿಕ್ಷದಲ್ಲಿ ಮೀಟರ್ 30 ರುಪಾಯಿ ತೋರಿಸಿದಾಗ ಆಟೋ ಡ್ರೈವರ್ 10 ರುಪಾಯಿ ಸೇರಿಸಿಕೊಡಲು ಕೇಳಿದರೆ ಅಲ್ಲೊಂದು ದೊಡ್ಡ ಮಹಾಭಾರತವೇ ನಡೆದುಹೋಗುತ್ತದೆ. ಅಂಗಡಿಯಲ್ಲಿ ಹದಿನೆಂಟು ರುಪಾಯಿ ಎಂಆರ್‌ಪಿ ಇರುವ ಉಪ್ಪಿನ ಪ್ಯಾಕೆಟ್ಟಿಗೆ ವರ್ತಕ 20 ರುಪಾಯಿ ಪಡೆದ ಎನ್ನಿ; ಆ ಎರಡು ರುಪಾಯಿಗೇ ಗ್ರಾಹಕ ಅಷ್ಟಶತೋತ್ತರ ನಾಮಾವಳಿ ಹೇಳಲು ನಿಂತುಬಿಡಬಹುದು. ಅನ್ಯಾಯವಾಗಿ ಕೊಡಬೇಕಾದ ಒಂದೊಂದು ರುಪಾಯಿಗೂ ಹೃದಯ ಹಿಂಡಿದಂತಾಡುವ ನಾವು ಹಿಂದೆಮುಂದೆ ಯೋಚಿಸದೆ ದುಡ್ಡು ಚೆಲ್ಲುವ ಕ್ಷೇತ್ರವಿದ್ದರೆ ಅದು ನ್ಯಾಯವ್ಯವಸ್ಥೆ ಮಾತ್ರ! ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದನಂತೆ. ಬಹುಶಃ ಈಗಿನ ಕಾಲದಲ್ಲಿದ್ದರೆ ಕೋರ್ಟಿಗೆ ದುಡ್ಡು ಸುರಿಯದವರ ಮನೆಯಿಂದ ಸಾಸಿವೆ ತರಲು ಹೇಳುತ್ತಿದ್ದನೋ ಏನೋ! ಮಿಕ್ಕಿದ್ದೆಲ್ಲ ಬಿಡಿ; ಕಾವೇರಿ ನೀರಿನ ಸಮಸ್ಯೆಗೆ ಕರ್ನಾಟಕ ರಾಜ್ಯವೊಂದೇ ಸುರಿದ ದುಡ್ಡು ಹಲವು ಕೋಟಿಗಳು! 2007ರಲ್ಲಿ ಕೃಷ್ಣ ಜೋಷಿ ಎಂಬವರು ಆರ್‌ಟಿಐ ಮೂಲಕ ಪಡೆದ ಮಾಹಿತಿಯ ಪ್ರಕಾರ, ಅದುವರೆಗೆ ಕರ್ನಾಟಕ 23.44 ಕೋಟಿ ರುಪಾಯಿಗಳನ್ನು ಕಾವೇರಿ ಪರವಾಗಿ ವಾದಿಸಿದ ವಕೀಲರ ಕಿಸೆಗಳಿಗೆ ಹಾಕಿತ್ತು. ಅನಿಲ್ ದಿವಾನ್ ಎಂಬ ಒಬ್ಬರೇ ವಕೀಲರು ಕಾವೇರಿ ಪ್ರಕರಣದಲ್ಲಿ ಕರ್ನಾಟಕದಿಂದ ಪಡೆದ ಶುಲ್ಕ 9.66 ಕೋಟಿ ರುಪಾಯಿಗಳು! ಫಾಲಿ ನಾರಿಮನ್‌ರಿಗೆ ಅದುವರೆಗೆ ಸಂದಾಯವಾಗಿದ್ದು 2.08 ಕೋಟಿ ರುಪಾಯಿಗಳು. ಉಳಿದಂತೆ ಮೋಹನ್ ಕಾತರಿಕಿ 2.75 ಕೋ.ರು., ಎಸ್.ಎಸ್. ಜವಳಿ 3.77 ಕೋ.ರು., ಶಂಭು ಪ್ರಸಾದ್ ಸಿಂಗ್ 2.41 ಕೋ.ರು. ಪಡೆದಿದ್ದಾರೆ. ಇವರಿಷ್ಟೇ ಅಲ್ಲದೆ 1990ರಿಂದ 2007ರವರೆಗೆ ಹತ್ತು ಮಂದಿ ಅಡ್ವೊಕೇಟ್ ಜನರಲ್‌ಗಳಿಗೆ ಸರಕಾರ 1.34 ಕೋಟಿ ರುಪಾಯಿ ಸುರಿದಿತ್ತು. ಬೃಜೇಶ್ ಕಾಳಪ್ಪರಂತಹ ವ್ಯಕ್ತಿಗಳಿಗೆ ಕೂಡ ಕಾವೇರಿ, 31.42 ಲಕ್ಷ ರುಪಾಯಿಗಳನ್ನು ಒದಗಿಸಿ ಧನ್ಯಳಾಗಿದ್ದಳು!
ಇದು ನಿಜವಾಗಿಯೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಒಂದು ಬಹುದೊಡ್ಡ ದೋಷವನ್ನು ಎತ್ತಿ ತೋರಿಸುತ್ತಿದೆ. ಯಾಕೆ ನಾವು ವಕೀಲರಿಗೆ ಇಷ್ಟೊಂದು ದೊಡ್ಡ ಮೊತ್ತದ ಶುಲ್ಕವನ್ನು ಸುರಿಯಬೇಕಾಗಿದೆ? ವರ್ಷಕ್ಕೆ ಐದು ಲಕ್ಷ ವೇತನ ಪಡೆಯುವ ಸರಕಾರೀ ಅಧಿಕಾರಿಯೊಬ್ಬ ಹತ್ತು ವರ್ಷ ದುಡಿದು ನಲವತ್ತು ಲಕ್ಷದ ಮನೆ ಖರೀದಿಸಿದೊಡನೆ ದಾಳಿ ನಡೆಸುವ ಲೋಕಾಯುಕ್ತದಂಥ ಸಂಸ್ಥೆಗಳು ಇದುವರೆಗೆ ಈ ದೇಶದ ಯಾವುದೇ ನ್ಯಾಯವಾದಿ ತನ್ನ ಅರ್ಹತೆಗಿಂತ ಅಧಿಕ ಮೊತ್ತದ ಆಸ್ತಿ ಮಾಡಿದ್ದಾನೆಂದು ದಾಳಿ ಮಾಡಿದ ಉದಾಹರಣೆ ಇದೆಯಾ? ತನ್ನ ಎಷ್ಟೇ ಆಸ್ತಿಪಾಸ್ತಿಯನ್ನೂ ವೃತ್ತಿಗಳಿಕೆ ಎಂದು ತೋರಿಸುವ ಅನುಕೂಲ ವಕೀಲರಿಗಿದೆ. ವಕೀಲರಿಗೆ ಕೊಡುವ ಶುಲ್ಕದ ವಿಷಯದಲ್ಲಿ ಈ ದೇಶದಲ್ಲಿ ಯಾವುದೇ ಕಾನೂನು, ನಿರ್ದೇಶನಗಳು ಇಲ್ಲ. ಕೆಲವೊಮ್ಮೆಯಂತೂ ತಾವು ವಾದ ಮಾಡಿದ್ದಕ್ಕೆ ಶುಲ್ಕ ಪಡೆಯುವುದಲ್ಲದೆ ಕೇಸು ಗೆದ್ದ ಬಳಿಕ ಸಿಗುವ ಹಣಕಾಸು ಲಾಭದಲ್ಲಿ ಇಷ್ಟು ಶೇಕಡಾ ಬೇಕು ಎಂದು ನೇರವಾಗಿ ಡಿಮ್ಯಾಂಡ್ ಮಾಡುವ ವಕೀಲರೂ ಇದ್ದಾರೆ. ಇದು ನಮ್ಮ ದೇಶದ ಸಮಸ್ಯೆ ಎನ್ನುವ ಹಾಗಿಲ್ಲ; ಅಮೆರಿಕಾದಲ್ಲಿ ಒಂದೊಂದು ವಿಚ್ಛೇದನದಲ್ಲೂ ಇಷ್ಟಿಷ್ಟು ಮಿಲಿಯ ಡಾಲರುಗಳನ್ನು ಕಮೀಷನ್ ರೂಪದಲ್ಲಿ ಪಡೆಯುವ ಮನೆಮುರುಕ ವಕೀಲರ ದೊಡ್ಡ ಬಳಗವೇ ಇದೆ! ಮ್ಯಾರೇಜ್ ಬ್ರೋಕರ್‌ಗಳಿಗಿಂತ ಹತ್ತು ಪಟ್ಟು ದುಡ್ಡನ್ನು ಈ ಮ್ಯಾರೇಜ್ ಬ್ರೇಕರ್‌ಗಳು ಕಮಾಯಿಸುತ್ತಾರೆ! ಸಾರ್ವಜನಿಕರು ತಮ್ಮ ವೈಯಕ್ತಿಕ ಕೇಸುಗಳನ್ನು ನಡೆಸುವುದಕ್ಕಾಗಿ ಎಷ್ಟು ಶುಲ್ಕವನ್ನು ಬೇಕಾದರೂ ವಕೀಲರಿಗೆ ಕೊಡಲಿ; ಆದರೆ ಸರಕಾರೀ ಸಂಸ್ಥೆಗಳ ನಡುವೆ ಅಥವಾ ಎರಡು ರಾಜ್ಯಗಳ ನಡುವೆ ನಡೆಯುವ ಪ್ರಕರಣಗಳಲ್ಲಾದರೂ ವಕೀಲರಿಗೆ ಇಂತಿಷ್ಟೇ ಶುಲ್ಕ ಕೊಡಬೇಕೆಂದು ನಿಗದಿಪಡಿಸುವ ಕಾನೂನು ನಮ್ಮ ದೇಶದಲ್ಲಿ ಯಾಕಿಲ್ಲ? ಇಲ್ಲಿ ವಕೀಲರಿಗೆ ಸಂದಾಯವಾಗುವುದು ಯಾರದ್ದೋ ವೈಯಕ್ತಿಕ ಹಣವಲ್ಲ; ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣ ಎಂಬುದನ್ನು ನಾವು ನೆನಪಿಡಬೇಕು. ಹೀಗೆ ಸರಕಾರಗಳಿಂದ ಕೋಟಿಗಟ್ಟಲೆ ಬಾಚಿಕೊಂಡು ದಶಕಗಳ ಕಾಲ ಸಮಸ್ಯೆಗಳನ್ನು ಜೀವಂತವಾಗಿಟ್ಟು ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿಕೊಂಡ ಯಾವ ವಕೀಲರೂ ಕಾನೂನಿನ ವಿಚಾರಣೆಗೆ ಒಳಪಡುವುದಿಲ್ಲ ಎಂಬುದೇ ನನ್ನ ಪ್ರಕಾರ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ.
ಅಂದ ಹಾಗೆ, 2007ರಿಂದ ಇದುವರೆಗೆ ಕಾವೇರಿ, ಮಹದಾಯಿ, ಬೆಳಗಾವಿ ಪ್ರಕರಣಗಳಲ್ಲಿ ಕರ್ನಾಟಕದ ಪರವಾಗಿ ವಾದಿಸುತ್ತ ಬಂದಿರುವ ಫಾಲಿ ನಾರಿಮನ್ ಪಡೆದಿರುವ ಒಟ್ಟು ಶುಲ್ಕ ಎಷ್ಟು? ದೇವರಿಗೇ ಗೊತ್ತು! ಈ ವ್ಯಕ್ತಿ ಒಂದೇ ಒಂದು ದಿನದ ವಿಚಾರಣೆಗೆ ಕೋರ್ಟಿಗೆ ಹಾಜರಾಗಬೇಕಾದರೂ ಫಿರ್ಯಾದುದಾರರು ಕೊಡಬೇಕಾದ ಶುಲ್ಕದ ಮೊತ್ತ 8ರಿಂದ 15 ಲಕ್ಷಗಳವರೆಗೆ ಎಂಬುದು ನಿಮಗೆ ಗೊತ್ತಿರಲಿ.
ಪ್ರತಿಪಕ್ಷದ ಪರ ನಿಂತವರನ್ನು ನಂಬಬಹುದೆ?
ಫಾಲಿ ನಾರಿಮನ್ ನಿಜವಾಗಿಯೂ ಕರ್ನಾಟಕದ ಹಿತ ಕಾಪಾಡುವ ಜವಾಬ್ದಾರಿ ಹೊತ್ತಿದ್ದಾರೆಯೇ ಅಥವಾ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ ಎಂಬಂತೆ ಕೊಟ್ಟಷ್ಟು ಕಾಸಿಗೆ ಕಾಟಾಚಾರದ ಸೇವೆ ಸಲ್ಲಿಸುತ್ತಿದ್ದಾರೆಯೇ ಎಂಬುದನ್ನೂ ಇಂದು ಕೇಳಿಕೊಳ್ಳಬೇಕಾಗಿದೆ. ಕಳೆದ ವರ್ಷ ದೇಶದಲ್ಲಿ ಅಸಹಿಷ್ಣುತೆಯ ಹೊಗೆ ಎದ್ದಿದ್ದಾಗ ಫಾಲಿ ನಾರಿಮನ್ ಮಾತಾಡಿದ್ದರು. “ಈ ದೇಶದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಅಸಹಿಷ್ಣುತೆ ತಾಂಡವವಾಡುತ್ತಿದೆ. ದೇಶಕ್ಕೆ ದೇಶವೇ ಹೊತ್ತಿ ಉರಿಯುವ ಸನ್ನಿವೇಶಕ್ಕೆ ಅಣಿಯಾದಂತಿದೆ. ಲೇಖಕರು ಪ್ರಶಸ್ತಿ ವಾಪಸು ಕೊಡುತ್ತಿರುವ ಟ್ರೆಂಡ್‌ಅನ್ನು ಸಣ್ಣ ಚಳವಳಿಯೆಂದು ಭಾವಿಸಬೇಕಿಲ್ಲ. ಇದು ಮುಂದೆ ಒಂದು ದೊಡ್ಡ ಕ್ರಾಂತಿಗೆ ನಾಂದಿ ಹಾಡುವ ಎಲ್ಲ ಲಕ್ಷಣಗಳೂ ಇವೆ. ಪ್ರಧಾನಿ ಮೋದಿಯವರು ಈಗ ಮಾತಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇಂಥ ಅಸಹಿಷ್ಣು ವಾತಾವರಣವನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ” ಎಂದು ಇವರು ಹೇಳಿದಾಗಲೇ ಇವರ ಅಸಲಿಯತ್ತು ದೇಶದ ಮುಂದೆ ಬತ್ತಲಾಗಿತ್ತು. ಆದರೆ ಎಲ್ಲರಿಗಿರುವಂತೆ ನಾರಿಮನ್ ಅವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಭಾವಿಸಿ ದೇಶದ ಜನ ಸುಮ್ಮನಾಗಿದ್ದರು. ಅದರೆ ಇಂತಹ ಸೀಮಿತ ಬುದ್ಧಿಮತ್ತೆ ಇರುವ ವ್ಯಕ್ತಿ ದೇಶದ ಅತ್ಯಂತ ಸೂಕ್ಷ್ಮ ವಿಚಾರಗಳಲ್ಲಿ ಸವೋಚ್ಚ ನ್ಯಾಯಾಲಯದಲ್ಲಿ ವಾದಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಈಗ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಅದೂ ಅಲ್ಲದೆ, ಅಕ್ರಮ ಆಸ್ತಿಗಳಿಕೆಯ ಪ್ರಕರಣದಲ್ಲಿ ನ್ಯಾಯಾಂಗದಿಂದ ತೀವ್ರ ವಿಚಾರಣೆಗೊಳಗಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಜಯಲಲಿತಾ ಅವರಿಗೆ ಜಾಮೀನು ಕೊಡಿಸಿದ ಕೀರ್ತಿಯೂ ನಾರಿಮನ್ ಹೆಸರಿನಲ್ಲಿದೆ! ಒಂದು ಕಡೆ ಜಯಲಲಿತಾ ಪರವಾಗಿ ಕೇಸು ನಡೆಸುವ ನ್ಯಾಯವಾದಿಗಳು ಇನ್ನೊಂದು ಕಡೆಯಲ್ಲಿ ಅದೇ ಜಯಲಲಿತಾ ಸರಕಾರದ ವಿರುದ್ಧ ಸಮರ್ಥವಾಗಿ ವಾದ ಮಂಡಿಸುತ್ತಾರೆಂದು ಹೇಗೆ ನಂಬುವುದು?
ಕರ್ನಾಟಕಕ್ಕೆ ಮಹದಾಯಿ ನೀರು ಬಿಡಬೇಕು ಎಂದು ಒಂದು ಕಡೆ, ಕರ್ನಾಟಕದಿಂದ ಕಾವೇರಿ ನೀರು ಬಿಡುವುದಿಲ್ಲ ಎಂದು ಇನ್ನೊಂದು ಕಡೆ – ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ ಪರಿಸ್ಥಿತಿಯನ್ನು ವಿವರಿಸಿದವರು ನಾರಿಮನ್ ಒಬ್ಬರೇ. ಮತ್ತು ಎರಡೂ ಕಡೆಯೂ ಅವರಿಗೆ ಸಿಕ್ಕ ಫಲಿತಾಂಶ: ಸೋಲು! ಒಂದೇ ರಾಜ್ಯದ ಎರಡು ವಿರುದ್ಧವೆನಿಸುವ ಪ್ರಕರಣಗಳಲ್ಲಿ ವಾದಿಸಿ ಎರಡಲ್ಲಿಯೂ ಸೋಲು ಕಂಡ ಈ ವಿಚಿತ್ರ ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ್ದು. ಮಹದಾಯಿಯ ವಿಚಾರದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ನಾರಿಮನ್ ಸುತಾರಾಂ ಸಿದ್ಧರಿರಲಿಲ್ಲ. ಆದರೆ ಅವರಿಂದ ಅರ್ಜಿ ಹಾಕಿಸಲೇಬೇಕೆಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳೇ ಸ್ವತಃ ತನ್ನ ಬಳಗವನ್ನು ಕಟ್ಟಿಕೊಂಡು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಮುಖ್ಯಮಂತ್ರಿ ಮತ್ತು ಡಜನ್‌ನಷ್ಟಿದ್ದ ಶಾಸಕ ಪಡೆಯನ್ನು ಕಂಡು ಕೊನೆಗೂ ಒಪ್ಪಿಕೊಂಡ ನಾರಿಮನ್, ಕರ್ನಾಟಕಕ್ಕೆ ಮಹದಾಯಿ ನದಿಯಿಂದ ಏಳೂವರೆ ಟಿಎಂಸಿ ನೀರು ಬಿಡಬೇಕೆಂಬ ಬೇಡಿಕೆ ಇಟ್ಟು ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದರು. ಅರ್ಜಿ ಹಾಕುವಾಗ ಕೇಳಿದ್ದು ಕುಡಿಯುವ ನೀರು ಬೇಕೆಂದು. ಅರ್ಜಿಯ ವಿಚಾರಣೆ ನಡೆದಾಗ ಹೇಳಿದ್ದು, ಕೊಟ್ಟ ನೀರನ್ನು ಬೇಸಾಯ ಮತ್ತು ಕೈಗಾರಿಕೆಗೆ ಬಳಸುತ್ತೇವೆಂದು! ಇಂತಹ ಎಡಬಿಡಂಗಿತನವನ್ನು ಕಂಡು ಕೋಪಗೊಂಡ ನ್ಯಾಯಮೂರ್ತಿಗಳು ಅರ್ಜಿಯನ್ನು ಅರ್ಧದಲ್ಲೇ ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದರು. ಈಗಲೂ ಇಂಥಾದ್ದೇ ಗೊಂದಲ ಮರುಕಳಿಸಿದೆ. ಕರ್ನಾಟಕದ ನ್ಯಾಯವಾದಿಗಳೇ ಎಲ್ಲರಿಗಿಂತ ಮೊದಲು ತಮ್ಮ ಕಡೆಯಿಂದ 10,000 ಕ್ಯೂಸೆಕ್ ನೀರು ಬಿಡಲು ತಕರಾರಿಲ್ಲ ಎಂಬ ಹೇಳಿಕೆ ಕೊಟ್ಟರು. ಇಂಥ ಮಾತಿನ ದೌರ್ಬಲ್ಯವನ್ನು ಗಬಕ್ಕನೆ ಗ್ರಹಿಸಿದ ತಮಿಳುನಾಡು ವಕೀಲರು 20,000 ಕ್ಯೂಸೆಕ್‌ಗೆ ಬೇಡಿಕೆ ಇಟ್ಟರು. ಇದುವರೆಗಿನ ಚರಿತ್ರೆಯಲ್ಲಿ ಆಗಿರುವಂತೆಯೇ, ನ್ಯಾಯಮೂರ್ತಿಗಳು ಈ ಎರಡೂ ಸಂಖ್ಯೆಗಳ ನಡುವಿನ – ಅಂದರೆ 15,000 ಕ್ಯೂಸೆಕ್‌ಗಳ ಆದೇಶ ಹೊರಡಿಸಿದರು. ವಾದದ ಪ್ರಾರಂಭದಲ್ಲಿಯೇ, ನಾರಿಮನ್ ಅಂಕೆಸಂಖ್ಯೆಗಳನ್ನು ಮುಂದಿಡದೆ, “ಕಾವೇರಿ ನೀರನ್ನು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ” ಎಂಬ ಪಟ್ಟು ಹಿಡಿದಿದ್ದರೆ ಇಡೀ ತೀರ್ಪೇ ಬೇರೆ ದಾರಿ ಹಿಡಿಯುತ್ತಿತ್ತು, ಅಲ್ಲವೇ? ನಾರಿಮನ್ ಹತ್ತು ದಿನಗಳ ಕಾಲ ಕರ್ನಾಟಕ ನೀರು ಬಿಡಲಿದೆಯೆಂಬ ವಾಗ್ದಾನವನ್ನು ನ್ಯಾಯಾಲಯಕ್ಕೆ ಮಾಡುತ್ತಾರೆಂಬ ಮಾಹಿತಿಯೇ ತನಗೆ ಇರಲಿಲ್ಲ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ! ಒಟ್ಟಾರೆ ಹೇಳಬೇಕಾದರೆ ಕರ್ನಾಟಕದ ಸ್ಥಿತಿ “ನಂದರ ರಾಜ್ಯ ನರಿನಾಯಿಗೆ” ಎಂಬಂತಾಗಿದೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ಇಚ್ಛೆ ಸ್ವತಃ ಮುಖ್ಯಮಂತ್ರಿಗಳಿಗೇ ಇಲ್ಲದಿರುವಾಗ ಅದನ್ನು ಕನ್ನಡ ಬರದ, ಕನ್ನಡಿಗರ ಸಂವೇದನೆ ಅರ್ಥವಾಗದ ಒಬ್ಬ ಹೊರರಾಜ್ಯದ ನ್ಯಾಯವಾದಿಯಿಂದ ನಿರೀಕ್ಷಿಸುವುದು ನಮ್ಮದೇ ಮುಟ್ಟಾಳತನ ನೋಡಿ!
ಅಪ್ಪ ನ್ಯಾಯವಾದಿ, ಮಗ ನ್ಯಾಯಾಧೀಶ!
ಮಾನ್ಯ ಫಾಲಿ ನಾರಿಮನ್ 1971ರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ. ಅವರ ಪುತ್ರ ರೋಹಿಂಟನ್ ನಾರಿಮನ್ 2014ರ ಜುಲೈನಿಂದ ಅದೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ! 1961ರ ಅಡ್ವೊಕೇಟ್ಸ್ ಆಕ್ಟ್ ಪ್ರಕಾರ ರಕ್ತಸಂಬಂಧವಿರುವ ಇಬ್ಬರು ವ್ಯಕ್ತಿಗಳು ಒಂದೇ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಆದರೆ ಅದ್ಯಾವ ಪವಾಡವೋ ಏನೋ, ಆ ಕಾನೂನು ಈ ಇಬ್ಬರು ನಾರಿಮನ್‌ಗಳಿಗೆ ಮಾತ್ರ ಅನ್ವಯವಾಗುವುದಿಲ್ಲ!
ಅದು 1980ರ ದಶಕ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎನ್.ಎಸ್. ನೇಸರ್ಗಿಯವರನ್ನು ವಿವಾಹವಾದ ಪ್ರಮೀಳಾ ನೇಸರ್ಗಿಯವರಿಗೆ ಅದೇ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಮುಂದುವರಿಸಲು ಅವಕಾಶವನ್ನು ನಿರಾಕರಿಸಲಾಯಿತು. ಪತಿ-ಪತ್ನಿ ಎಂಬುದು ಅತ್ಯಂತ ನಿಕಟವಾದ ಸಂಬಂಧ. ಅವರಿಬ್ಬರ ನಡುವೆ ಅದೆಷ್ಟೋ ಸೂಕ್ಷ್ಮ ಮಾಹಿತಿಗಳ ವಿನಿಮಯ ನಡೆಯುತ್ತಿರಬಹುದು. ಇಬ್ಬರೂ ಒಂದೇ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅದರಿಂದ ನ್ಯಾಯತೀರ್ಮಾನದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಜಸ್ಟಿಸ್ ಪಿ.ಪಿ. ಬೋಪಣ್ಣ ವಾದಿಸಿದ್ದರು. ಇಂತಹ ಹಲವಾರು ಪ್ರಕರಣಗಳು ಈ ದೇಶದಲ್ಲಿ ನಡೆದದ್ದುಂಟು. ಹೆಚ್ಚಿನ ಸಂದರ್ಭಗಳಲ್ಲಿ ನ್ಯಾಯವಾದಿಗಳೇ ಸ್ವತಃ ಮುಂದಾಗಿ ಇಂಥ ಮುಜುಗರದ ಪ್ರಸಂಗಗಳನ್ನು ತಪ್ಪಿಸಿಕೊಂಡದ್ದುಂಟು. ಜಸ್ಟಿಸ್ ಕೃಷ್ಣ ಅಯ್ಯರ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಆಯ್ಕೆಯಾದಾಗ ಅದುವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗ ವಕೀಲಿ ವೃತ್ತಿ ತೊರೆದು ಖಾಸಗಿ ಸಂಸ್ಥೆಯೊಂದನ್ನು ಸೇರಿಕೊಂಡಿದ್ದರು. ಕೇರಳ ಉಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಸ್ಟಿಸ್ ಶಿವರಾಮನ್, ತನ್ನ ಮಗಳು ಅಲ್ಲಿ ವೃತ್ತಿ ಆರಂಭಿಸಿದಾಗ ಬೇರೊಂದು ರಾಜ್ಯಕ್ಕೆ ತನ್ನನ್ನು ವರ್ಗಾಯಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಜಸ್ಟಿಸ್ ಬಾಲಕೃಷ್ಣ ಅಯ್ಯರ್ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿ ಬಂದಾಗ, ಅಲ್ಲಿ ಕೆಲಸದಲ್ಲಿದ್ದ ಅವರ ಮಗ ಸ್ವ-ಇಚ್ಛೆಯಿಂದ ಹೊರ ರಾಜ್ಯಕ್ಕೆ ವರ್ಗಾವಣೆಗೊಂಡಿದ್ದರು. 1997ರಲ್ಲಿ ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರೂ ಜಸ್ಟಿಸ್ ಜೆ.ಎಸ್. ವರ್ಮಾ ನೇತೃತ್ವದಲ್ಲಿ ಸಭೆ ಸೇರಿ, ಒಂದೇ ನ್ಯಾಯಾಲಯದಲ್ಲಿ ಇಬ್ಬರು ಸಂಬಂಧಿಗಳು ಕೆಲಸ ಮಾಡುವಂತಿರಬಾರದೆಂದು ಸರ್ವಾನುಮತದ ನಿರ್ಣಯ ಹೊರಡಿಸಿದ್ದರು. ಇಷ್ಟೆಲ್ಲ ಆಗಿದ್ದರೂ ನಾರಿಮನ್ ಅವರು ತನ್ನ ಮಗನೇ ನ್ಯಾಯಮೂರ್ತಿಯಾಗಿರುವ ಸಂಸ್ಥೆಯಲ್ಲಿ ಅಡ್ವೊಕೇಟ್ ಆಗಿ ಕೆಲಸ ನಿರ್ವಹಿಸುವುದು ಸರಿಯೇ? ಈ ಪ್ರಶ್ನೆ 2014ರಿಂದಲೂ ಮತ್ತೆ ಮತ್ತೆ ನ್ಯಾಯಾಲಯದ ಮುಂದೆ ಬರುತ್ತಿದೆ. ಪತ್ರಕರ್ತರು ಈ ಪ್ರಶ್ನೆಯನ್ನು ಸ್ವತಃ ನಾರಿಮನ್ ಅವರಿಗೇ ತೂರಿಬಿಟ್ಟಾಗೆಲ್ಲ ಅವರು “ಅಂಥ ಯಾವ ಕಾನೂನೂ ಈ ದೇಶದಲ್ಲಿಲ್ಲ” ಎಂದು ತಪ್ಪಿಸಿಕೊಂಡಿದ್ದಾರೆ. ನಾರಿಮನ್ ಅವರೇ, ಕಾನೂನು ಇದೆಯೋ ಇಲ್ಲವೋ ಸೆಕೆಂಡರಿ; ನಿಮಗೆ ಆತ್ಮಸಾಕ್ಷಿ ಎಂಬುದಾದರೂ ಇರಬೇಕಿತ್ತಲ್ಲವೇ?
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

‘ಕಾವೇರಿ’ ಅನ್ಯಾಯ; ಯಾದಗಿರಿಯಲ್ಲಿ ಆಕ್ರೋಶದ ಪ್ರತಿಭಟನೆ

Next Post

ಇಷ್ಟಕ್ಕೂ ಈ ಬಂದ್ ಆಚರಿಸಿದ್ದು ಯಾರ ವಿರುದ್ದ?

kalpa News

kalpa News

Next Post

ಇಷ್ಟಕ್ಕೂ ಈ ಬಂದ್ ಆಚರಿಸಿದ್ದು ಯಾರ ವಿರುದ್ದ?

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL