ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರ ಸತತ ಪ್ರಯತ್ನದಿಂದಾಗಿ ರಾಜ್ಯದ ಗ್ರಾಮೀಣ ಬಡ ಕುಟುಂಬಗಳ ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರ 1200 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಿದೆ.
ಈಶ್ವರಪ್ಪನವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ಹಲವು ಬೇಡಿಕೆಗಳನ್ನು ಮಂಡಿಸಿ, ಮಾತುಕತೆ ನಡೆಸಿದ್ದು, ಈ ವೇಳೆ ಸಚಿವ ಬಹಳಷ್ಟು ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಸಚಿವ ತೋಮರ್ ಅವರೊಂದಿಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಯೋಜನೆಗಳ ಬಗ್ಗೆ ದೀರ್ಘವಾಗಿ ಚರ್ಚಿಸಿದ್ದು, ಅವರು ರಾಜ್ಯದ ಎಲ್ಲಾ ಬೇಡಿಕೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು.
ಏನೆಲ್ಲಾ ಚರ್ಚೆಯಾಯಿತು?
1. ನಮ್ಮ ರಾಜ್ಯಕ್ಕೆ 2020-21ನೇ ಸಾಲಿಗೆ ಮನರೇಗಾ ಯೋಜನೆಯಡಿ ಒಟ್ಟು 13 ಕೋಟಿ ಮಾನವದಿನಗಳನ್ನು ಗುರಿಯಾಗಿ ನಿಗದಿಪಡಿಸಿದ್ದು ಇಲ್ಲಿಯವರೆಗೂ ನಮ್ಮ ಇಲಾಖೆ ಸುಮಾರು 10.50 ಕೋಟಿ ಮಾನವದಿನಗಳನ್ನು ಸೃಷ್ಟಿಸಿದ್ದು ಅತ್ಯುತ್ತಮ ಸಾದನೆ ಮಾಡಿರುವುದನ್ನು ಸಚಿವರು ಪ್ರಶಂಸಿಸಿದ್ದಾರೆ. ರಾಜ್ಯಕ್ಕೆ ನೀಡಿರುವ ಗುರಿ ಜನವರಿ 2021ಕ್ಕೆ ಸಾಧಿಸುವ ಭರವಸೆಯಿದ್ದು, ಹೆಚ್ಚುವರಿಯಾಗಿ 2 ಕೋಟಿ ಮಾನವದಿನಗಳನ್ನು ಅಂದರೆ ಸುಮಾರು 800 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದ್ದಾರೆ.

2. ಕಳೆದ ನವೆಂಬರ್ 2019ರಲ್ಲಿ ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ 104 ನೆರೆ ಪೀಡಿತ ತಾಲೂಕುಗಳಿಗೆ ಹೆಚ್ಚುವರಿಯಾಗಿ 50 ಮಾನವದಿನಗಳನ್ನು ಮಂಜೂರು ಮಾಡಿದ್ದನ್ನು ಗಮನಕ್ಕೆ ತಂದಿದ್ದು, ಈ ಸಾಲಿನಲ್ಲೂ ಅದೇ ಪರಿಸ್ಥಿತಿ ರಾಜ್ಯದಲ್ಲಿದ್ದು, 173 ತಾಲೂಕುಗಳ ಗ್ರಾಮೀಣ ಕುಟುಂಬಗಳಿಗೆ ಗರಿಷ್ಠ ಮಿತಿ 100 ಮಾನ ದಿನಗಳನ್ನು 150 ಮಾನವದಿನಗಳಿಗೆ ಹೆಚ್ಚಿಸಲು ಮಾನ್ಯ ಸಚಿವರು ಒಪ್ಪಿದ್ದಾರೆ. ಈ ಸಂಬಂಧ ಕೂಡಲೇ ಆದೇಶ ಹೊರಡಿಸಲಾಗುವುದೆಂದು ತಿಳಿಸಿದ್ದು, ಇದರಿಂದ ಅಂದಾಜು 400 ಕೋಟಿ ರೂ.ಗಳ ಹೆಚ್ಚುವರಿಯಾಗಿ ರಾಜ್ಯಕ್ಕೆ ಲಭ್ಯವಾಗಲಿದೆ. ಈಶ್ವರಪ್ಪನವರ ಭೇಟಿಯ ಫಲಶೃತಿ 1200 ಕೋಟಿ ರೂ.ಗಳು ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗಾವಕಾಶ ಸಿಗಲಿವೆ.
3. ಮನರೇಗಾ ಯೋಜನೆಯಡಿ ಮಟೀರಿಯಲ್ ಬಿಲ್’ಗಾಗಿ 1119 ಕೋಟಿ ರೂ.ಗಳನ್ನು ಶೀಘ್ರವಾಗಿ ಪಾವತಿಸುವಂತೆ ರಾಜ್ಯ ಸರ್ಕಾರವು ಕೋರಿದೆ. ರಾಜ್ಯದಿಂದ ಹಣಬಳಕೆ ಪ್ರಮಾಣ ಪತ್ರವನ್ನು ಒದಗಿಸಿದ ತಕ್ಷಣವೇ ಈ ಹಣವನ್ನು ಪಾವತಿಸಲಾಗುವುದೆಂದು ತಿಳಿಸಿದ್ದಾರೆ.
4. ಶ್ಯಾಮಪ್ರಸಾದ್ ಮುಖರ್ಜಿ ಆರ್-ಅರ್ಬನ್ ಮಿಷನ್ ಯೋಜನೆಯಡಿ ಹೆಚ್ಚುವರಿ 90 ಕ್ಲಸ್ಟರನ್ನು ಮಂಜೂರು ಮಾಡುವಂತೆ ಕೋರಿ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ರಾಜ್ಯದ ಈ ಕೋರಿಕೆಯನ್ನು ಅತಿ ಶೀಘ್ರವಾಗಿ ಪರಿಗಣಿಸಲಾಗುವುದೆಂದು ಸಚಿವರು ತಿಳಿಸಿದ್ದು, ಇದರಿಂದ, 1000 ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















