ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅನಾವಶ್ಯಕವಾಗಿ ಕೆಎಸ್’ಆರ್’ಟಿಸಿ ನೌಕರರಿಗೆ ಕುಮ್ಮಕ್ಕು ನೀಡಿ, ಸಾರ್ವಜನಿಕರಿಗೆ ನಾಲ್ಕು ದಿನ ತೊಂದರೆಯಾಗಲು ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ಕೃಷ್ಟವಾದ ಆಡಳಿತ ನೀಡುತ್ತಿದ್ದು, ಇದನ್ನು ಸಹಿಸಲು ಬಹಳಷ್ಟು ಮಂದಿ ಆಗುತ್ತಿಲ್ಲ. ಹೀಗಾಗಿ, ಇಂತಹ ವ್ಯಕ್ತಿಗಳು ಸರ್ಕಾರದ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್’ಗೂ ಕೆಎಸ್’ಆರ್’ಟಿಸಿ ನೌಕರರಿಗೂ ಏನು ಸಂಬಂಧ ಎಂದು ತಿಳಿದಿಲ್ಲ. ಅನಾವಶ್ಯಕವಾಗಿ ಸಾರಿಗೆ ನೌಕರರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿ, ಸಾರ್ವಜನಿಕರಿಗೆ ತೊಂದರೆಯಾಗಲು ಕೋಡಿಹಳ್ಳಿಯವರೇ ನೇರ ಕಾರಣ ಎಂದು ದೂರಿದರು.
ರಾಜ್ಯದಲ್ಲಿ 50ಕ್ಕೂ ಅಧಿಕ ಕಾರ್ಪೊರೇಶನ್’ಗಳಿದ್ದು, ಅದರಲ್ಲಿನ ನೌಕರರು ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಹೀಗಿರುವಾಗ, ಎಲ್ಲರೂ ತಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ ಎಂದು ಕೇಳಿದರೆ ವಾಸ್ತವವಾಗಿ ಅದು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದ ಜನರ ತೆರಿಗೆ ಹಣವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡಲು ಸಾಧ್ಯವಿಲ್ಲ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಅವರಂತಹ ವ್ಯಕ್ತಿಗಳ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಭಾನುಪ್ರಕಾಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















