ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್ )ಅಭಿವೃದ್ದಿಪಡಿಸಿರುವ ತೋಟಗಾರಿಕೆ ತಂತ್ರಜ್ಞಾನಗಳ ವಾಣಿಜ್ಯೀಕರಣ ಮಾಡಲು ಪರವಾನಗಿ ಪಡೆದ ನಾಲ್ಕು ಸಂಸ್ಥೆಗಳ ಜತೆ ಐಐಎಚ್ಆರ್ ನಿನ್ನೆ ಒಡಂಬಡಿಕೆಗೆ ಸಹಿ ಮಾಡಲಾಯಿತು.
ತೋಟಗಾರಿಕೆ ಸಚಿವ ಆರ್. ಶಂಕರ್ ಒಡಂಬಡಿಕೆ ಪತ್ರವನ್ನು ಕಂಪನಿಯ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು.
ಐಐಎಚ್ಆರ್ ಏರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪಾಲ್ಗೊಂಡ ಸಚಿವರು, ತೋಟಗಾರಿಕೆ ಉತ್ಪಾದನೆಯಲ್ಲಿ ರಾಜ್ಯ 8ನೆಯ ಸ್ಥಾನದಲ್ಲಿದ್ದು, ವಿಸ್ತರಣೆಯಲ್ಲಿ ಒಂದನೇ ಸ್ಥಾನದಲ್ಲಿದೆ. ಉತ್ಪಾದನೆಯಲ್ಲಿ ಎರಡನೇ ಅಥವಾ ಮೂರನೇ ಸ್ಥಾನಕ್ಕೆ ಬರಲು ಎಲ್ಲಾ ರೀತಿಯ ಒತ್ತು ನೀಡಲಾಗುವುದು ಎಂದು ಹೇಳಿದರು.

ತೋಟಗಾರಿಕೆ ಸಂಶೋಧನಾ ಸಂಸ್ಥೆಗಳು ಅಭಿವೃದ್ದಿಪಡಿಸಿರುವ ತಂತ್ರಜ್ಞಾನಗಳು ಸೀಮಿತವಾಗಿದ್ದು, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಐಐಎಚ್ಆರ್ ಅಭಿವೃದ್ದಿಪಡಿಸಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದು, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಪ್ರಸಕ್ತ ಬಜೆಟ್ನಲ್ಲಿ ಅನುದಾನ ಮೀಸಲಿಡುವ ಕುರಿತು ಯೋಜನೆ ರೂಪಿಲಾಗುವುದು ಎಂದರು.

ರೈತರು ಒಂದೇ ಬೆಳೆಯನ್ನು ಹೆಚ್ಚಿಗೆ ಬೆಳೆದು ಅದರ ಬೆಲೆ ಕಳೆದು ಕೊಳ್ಳುವ ಸಂದರ್ಭ ಜಾಸ್ತಿಯಾಗುತ್ತಿದೆ. ಅವರನ್ನು ಸಮಗ್ರ ಕೃಷಿ ಪದ್ಧತಿಗೆ ಪ್ರೇರಿಪಿಸುವುದು ಮತ್ತು ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಡಂಬಡಿಕೆಗೆ ಸಹಿ
ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ಅಭಿವೃದ್ದಿಪಡಿಸಿರುವ ತಂತ್ರಜ್ಞಾನ ನಿರ್ವಾಹಕ ಘಟಕದಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಮತ್ತು ತಳಿಗಳನ್ನು ಕಳೆದ ಹತ್ತು ವರ್ಷಗಳಿಂದೀಚೆಗೆ ವಾಣಿಜ್ಯೀಕರಣಗೊಳಿಸಲಾಗಿದೆ. ಐಐಎಚ್ಆರ್ ಜತೆ ಇಂದು ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ವಿವರ ಇಂತಿದೆ.
ಆಂದ್ರಪ್ರದೇಶದ ರೈನ್ ಬೋ ಆಗ್ರಿ ವೆಟ್ ಸಿರಿ ಟೆಕ್ನಾಲಾಜಿಸ್ ಪ್ರೈವಿಟ್ ಲಿಮಿಟೆಡ್, ಬೆಂಗಳೂರಿನ ಪಿ.ಜೆ. ಮಾರ್ಗೋ ಪ್ರೈವಿಟ್ ಲಿಮಿಟೆಡ್, ತಿರುವನಂತಪುರದ ಗ್ರೀನ್ ಟೆಕ್ ಫರ್ಟಿಲೈಸರ್ ಕಾರ್ಪೋರೇಷನ್ ಮತ್ತು ಚೆನ್ನೈನ ಲಾ ಪರ್ಮ್ ಡಿ ಪೀಟರ್ ಎಲ್ಎಲ್ಪಿ ಸಂಸ್ಥೆಗಳ ಜತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ ಎಂದು ವಿವರಿಸಿದರು.
ಅಪ್ಪೆ ಮಿಡಿ ಹೆಗ್ಡೆಯವರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಮಲೆನಾಡಿನ ಅಪ್ಪೆ ಮಿಡಿ ಮಾವಿನಕಾಯಿಯನ್ನು ಸಂರಕ್ಷಿಸಿ ಕಾಪಾಡುತ್ತಿರುವ ಸಾಗರದ ಬೇಳೂರಿನ ಬಿ.ಬಿ. ಸುಬ್ಬರಾವ್ ಹೆಗ್ಡೆ ಅವರಿಗೆ ಸಚಿವರು ಐಐಎಚ್ಆರ್ ವತಿಯಿಂದ ಸನ್ಮಾನಿಸಿದರು.
ಅಪ್ಪೆ ಮಿಡಿಯನ್ನು ಹಲವು ವರ್ಷಗಳಿಂದ ಸಂರಕ್ಷಿಸಲಾಗುತ್ತಿದ್ದು, ಇದನ್ನು ಕಾಪಾಡಲು ಒಂದು ಸಣ್ಣ ಕಾಡನ್ನು ತಮ್ಮ ಮನೆಯ ಸಮೀಪ ನಿರ್ಮಿಸಲಾಗಿದೆ ಎಂದು ಹೆಗ್ಡೆ ತಿಳಿಸಿದರು.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಖಠಾರಿಯ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಫೌಸಿಯಾ ತರ್ನಮ್, ಬಾಗಲಕೋಟ ತೋಟಗಾರಿಕೆ ವಿ.ವಿ. ಉಪಕಲಪತಿ ಡಾ. ಇಂದ್ರೇಶ್, ಐಐಎಚ್ಆರ್ ನಿರ್ದೇಶಕ ಡಾ.ಎಂ.ಆರ್. ದಿನೇಶ್, ರಾಷ್ಟ್ರೀಯ ತೋಟಗಾರಿಕೆ ಮೇಳದ ಕಾರ್ಯದರ್ಶಿ ಮತ್ತು ಪ್ರಧಾನ ವಿಜ್ಞಾನಿ ಎಂ.ವಿ. ಧನಂಜಯ್ ಹಾಜರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















