ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಮ್ಮ ನಡುವೇ ಸಾಕಷ್ಟು ಸಮಸ್ಯೆಗಳು ಅವಶ್ಯಕತೆಗಳು ಒಡಮೂಡುತ್ತಿದ್ದು, ಅಂತಹ ಅವಶ್ಯಕತೆಗಳೇ ನಾವಿನ್ಯತೆಯೆಡೆಗೆ ಸಾಗುವ ಹೆಬ್ಬಾಗಿಲು ಎಂದು ರಾಜ್ಯ ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.

ಇಂದು ನಗರದ ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜಿನ ನ್ಯೂ ಜೆನ್ ಐಇಡಿಸಿ ವತಿಯಿಂದ ಏರ್ಪಡಿಸಿದ್ದ ನಾವಿನ್ಯತೆ ಕೌಶಲ್ಯತೆ ಉದ್ಯಮಶೀಲತೆ ಕಾರ್ಯಾಗಾರ ಲೆಟ್ಸ್ ಇನೊ ಕ್ರಿಯೇಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬದುಕಿನ ಹಾದಿಯಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯ ಕ್ಷಣಗಳಾಗಿದ್ದು, ಕಲಿಕೆ ನಿರಂತರ ಪ್ರಕ್ರಿಯೆಯಾಗಿದೆ. ಅದೊಂದು ಕಾಲವಿತ್ತು ಒಂದು ಕೆಲಸಕ್ಕೆ ಸೇರಿದ ನಂತರ ಏನೇ ಸಮಸ್ಯೆಗಳಾದರೂ ಅದೇ ಕೆಲಸದಲ್ಲಿ ಮುಂದುವರಿಯುವ ಅನಿವಾರ್ಯತೆ ಇತ್ತು. ಆದರೇ ಕಾಲ ಬದಲಾಗಿದೆ. ಇತರೆಡೆಗೆ ಕೆಲಸ ನಿರ್ವಹಿಸುವುದಕ್ಕಿಂತ ತಾವೇ ಇತರರಿಗೆ ಕೆಲಸ ನೀಡುವಂತಾಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಘನ ಸರ್ಕಾರ ಸ್ಟಾರ್ಟ್ ಆಪ್ಗಳ ಪ್ರಾರಂಭಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದರು.

ಭಾರತ ಉದ್ಯಮಶೀಲ ಕ್ಷೇತ್ರದಲ್ಲಿ ತನ್ನದೇ ಸಾಧನೆಯ ದಾಪುಗಾಲು ಇಡುತ್ತಿದೆ. ವಿದ್ಯಾರ್ಥಿಗಳು ಒಂದು ಸೀಮಿತತೆಗೆ ಸಿಲುಕದೇ ತಮ್ಮ ಯೋಚನಾ ಶಕ್ತಿಯನ್ನು ವಿಸ್ತರಿಸಿಕೊಳ್ಳಬೇಕಿದೆ. ಯಾವುದೇ ಅಂಜಿಕೆಗಳಿಲ್ಲದೇ ದೊರೆಯುವ ಹೊಸ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜಿನ ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ. ಎಂ.ಎಂ. ರಜತ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಅಶ್ವತನಾರಾಯಣ ಶೆಟ್ಟಿ, ಕುಲಸಚಿವ ಪ್ರೋ. ಹೂವಯ್ಯ ಗೌಡ, ಸಹ್ಯಾದ್ರಿ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಕೆ. ವೀಣಾ, ಸಂಪನ್ಮೂಲ ವ್ಯಕ್ತಿಗಳಾದ ಅಫತಾಬ್, ನ್ಯೂ ಜೆನ್ ಐಇಡಿಸಿ ಮುಖ್ಯ ಸಂಯೋಜಕ ಡಾ.ಕೆ.ಎಂ. ಬಸಪ್ಪಾಜಿ, ಯೋಜನಾ ಸಂಯೋಜಕ ಸಿ.ಎಂ.ನೃಪತುಂಗ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















