ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಬೇಕಿದೆ ಎಂದು ಜನಶಿಕ್ಷಣ ಸಂಸ್ಥಾನದ ನಿರ್ದೇಶಕಿ ಬಿ.ವೈ. ಅರುಣಾದೇವಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಹಿಳಾ ಕೌಶಲ್ಯಾಭಿವೃದ್ದಿ ಅರಿವು ಕುರಿತು ನಿನ್ನ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಹಿಳೆಯರು ಕಾಲಿಡದ ಕ್ಷೇತ್ರವೇ ಇಲ್ಲ. ಉದ್ಯಮ, ಸಿನಿಮಾ, ಕೃಷಿ, ರಕ್ಷಣಾಪಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸೇವಾವಲಯ ಹೀಗೆ ದೇಶದ ಆರ್ಥಿಕತೆಯ ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಸಧೃಡತೆಯ ದೃಷ್ಟಿಯಿಂದ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಕೂಡ ಮುಖ್ಯ ಎಂದರು.

ಕುಲಪತಿ ಪ್ರೊ. ಬಿ. ಪಿ ವೀರಭದ್ರಪ್ಪ ಮಾತನಾಡಿ, ಮಹಿಳೆಯರು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ, ಬುದ್ಧಿಮತ್ತೆಯ ದೃಷ್ಟಿಯಿಂದ ನೋಡುವುದಾದರೆ ಪುರುಷರಿಗೆ ಸರಿಸಮಾನವಾದ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಇತ್ತೀಚಿನ ಕೆಲವು ಮಹಿಳಾ ಸಾಧಕಿಯರ ನಿದರ್ಶನಗಳನ್ನು ಗಮನಿಸುವುದಾದರೆ, ಶಿಕ್ಷಣ ಮಹಿಳೆಯರ ಸಬಲೀಕರಣದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮಹಿಳೆಯರ ಶೋಷಣೆಗೆ ಶಿಕ್ಷಣ ಮಾತ್ರ ತಕ್ಕ ಪರಿಹಾರ ಒದಗಿಸಬಲ್ಲದು. ಆದ್ದರಿಂದ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು.

ಭದ್ರಾವತಿ ನಗರಸಭೆಯ ಕಮ್ಯೂನಿಟಿ ಅಫೇರ್ಸ್ ಅಧಿಕಾರಿ ಸುಹಾಸಿನಿ, ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್, ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಕಣ್ಣನ್ ಮಾತನಾಡಿದರು. ಡಾ. ಎನ್. ರಾಜೇಶ್ವರಿ, ಪ್ರೊ. ಎಸ್. ಪದ್ಮಮ್ಮ, ವಿವಿದ ಕಾಲೇಜುಗಳ ಉಪನ್ಯಾಸಕರು, ವಿವಿಯ ಅಧ್ಯಾಪಕೇತರ ಮಹಿಳಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪತ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















