ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಶಾಸಕ ಕುಮಾರ್ ಬಂಗಾರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅವೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿಗಳಾಗಿವೆ ಎಂದು ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮತ್ತು ಹಿರಿಯ ವಕೀಲ ವೈ.ಜಿ. ಪುಟ್ಟಸ್ವಾಮಿ ಅವರು ಈ ಮೊದಲಿನಿಂದಲೂ ಶಾಸಕರೊಂದಿಗೆ ಅಂತರ ಕಾಯ್ದುಕೊಂಡೇ ಬಂದಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದೊಂದಿಗೆ ಶಾಸಕರು ತಾಲ್ಲೂಕಿನಲ್ಲಿ ಅಭಿವೃದ್ಧಿಯ ಪರ್ವವನ್ನೇ ಹರಿಸುತ್ತಿದ್ದಾರೆ. ಸಾವಿರಾರು ಕೋಟಿ ರೂ., ಅನುದಾನಗಳನ್ನು ತರುವಲ್ಲಿ ಯಶಸ್ವಿಯೂ ಆಗಿದ್ದಾರೆ. ಇದನ್ನು ಗಮನಿಸದೇ ಕೇವಲ ವೈಯುಕ್ತಿಕ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಶಾಸಕರ ವಿರುದ್ಧ ಆರೋಪ ಮಾಡುವುದು ಸಲ್ಲದು. ಶಾಸಕರಿಂದ ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲ ರೀತಿಯಿಂದಲೂ ಲಾಭ ಪಡೆದವರು ಈಗ ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸರ್ವೆ ನಂ. 113ರಲ್ಲಿ ವಾಸಿಸುತ್ತಿರುವ ಬಡವರಿಗೆ ಯಾವುದೇ ತೊಂದರೆಯಾದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಶಾಸಕರು ಯಾವುದೇ ತೊಂದರೆಯನ್ನು ನೀಡಿಲ್ಲ. ಸರ್ಕಾರ ಸ್ವತ್ತನ್ನು ಸರ್ಕಾರಕ್ಕೆ ಉಳಿಸದೇ ಹೋದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಆಸ್ಪತ್ರೆ, ಕ್ರೀಡಾಂಗಣ, ಕೋರ್ಟ್, ಡಿಪ್ಲೋಮಾ ಕಾಲೇಜ್, ಕೈಗಾರಿಕಾ ಪ್ರದೇಶ, ಅಗ್ನಿ ಶಾಮಕ ಠಾಣೆ ಸೇರಿದಂತೆ ಅನೇಕ ಕಚೇರಿಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲು ಜಾಗವನ್ನು ಉಳಿಸಿಕೊಳ್ಳುವ ಅವಶ್ಯಕತೆಯೂ ಇದೆ. ಇಲ್ಲವಾದಲ್ಲಿ ಖಾಸಗಿಯಾಗಿ ಕೊಳ್ಳಬೇಕಾದ ಸ್ಥಿತಿ ಎದುರುಗೊಳ್ಳುತ್ತದೆ ಎಂದರು.
ತಾಲ್ಲೂಕಿನ ಬಗುರುಹುಕುಂ ರೈತರಿಗೆ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ನ್ಯಾಯಯುತವಾಗಿ ನೈಜ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ವಿತರಿಸುವ ಕಾರ್ಯವೂ ನಡೆಯುತ್ತಿದೆ. ಈಗಾಗಲೇ ನೂರಾರು ರೈತರಿಗೆ ಹಕ್ಕುಪತ್ರ ಸಹ ವಿತರಿಸಲಾಗಿದೆ. ತಾಲ್ಲೂಕಿನ ಬಹು ನಿರೀಕ್ಷಿತ ಮೂಡಿ-ಮೂಗೂರು ಯೋಜನೆಗಳು ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಶಾಸಕರ ನೇತೃತ್ವದಲ್ಲಿ ಸಾಕಾರಗೊಂಡಿವೆ. ತಾಲ್ಲೂಕಿನಲ್ಲಿ ವಿದ್ಯುತ್ ಗ್ರಿಡ್ಗಳು, ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಒತ್ತು ನೀಡಿದ್ದಾರೆ. ತಬಲಿ ಬಂಗಾರಪ್ಪ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಅವರು ಅನೇಕ ಅಧಿಕಾರಗಳನ್ನು ಕಂಡಿರುವುದು ಶಾಸಕರ ಕೃಪಾಕಟಾಕ್ಷದಿಂದ ಎಂಬುದು ಮರೆಯಬಾರದು ಎಂದರು.
ಬಗುರುಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ ಮಾತನಾಡಿ, ಶಾಸಕರ ವಿರುದ್ಧವಾಗಿ ಏಕವಚನದಲ್ಲಿ ಮಾತನಾಡಿರುವ ಮುಖಂಡರಿಗೆ ಶೋಭೆ ತರುವುದಿಲ್ಲ. ತಬಲಿ ಬಂಗಾರಪ್ಪ ಅವರಿಗೆ ಭೂ ನ್ಯಾಯಮಂಡಳಿ ಸದಸ್ಯರನ್ನಾಗಿ ಮಾಡಿದ್ದಾರೆ. ಕೊಟ್ಟ ಕುದುರೆಯನ್ನು ಏರದವರು ಶಾಸಕರ ಬಗ್ಗೆ ಅವಹೇಳನವಾಗಿ ಮಾತನಾಡಿರುವುದನ್ನು ಕ್ಷೇತ್ರದ ಜನತೆ ಸಹಿಸುವುದಿಲ್ಲ. ಪಕ್ಷದಲ್ಲಿ ಆತಂಕರಿಕವಾಗಿ ಬಣಗಳಾದ ಸಂದರ್ಭದಲ್ಲಿಯೂ ಮತ್ತೊಂದು ಬಣದೊಂದಿಗೆ ಗುರುತಿಸಿಕೊಂಡಿದ್ದರು. ಈವರೆಗೂ ಆರ್ಥಿಕವಾಗಿ, ಅಧಿಕಾರಾತ್ಮಕವಾಗಿ ಎಲ್ಲಾ ರೀತಿಯಲ್ಲೂ ತಬಲಿ ಬಂಗಾರಪ್ಪ ಅವರು ಶಾಸಕರಿಂದ ಸಹಕಾರ ಪಡೆದಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ನಟರಾಜ ಉಪ್ಪಿನ, ಪ್ರಮುಖರಾದ ಸಿ.ಎನ್. ಕೊಟ್ರೇಶ್ ಗೌಡ, ಈಶ್ವರ ಚನ್ನಪಟ್ಟಣ, ಶಿವಕುಮಾರ ಕಡಸೂರು, ಸುರೇಶ್ ಉದ್ರಿ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕೃಷ್ಣಮೂರ್ತಿ ತತ್ತೂರು, ಕೃಷ್ಣಮೂರ್ತಿ ಕೊಡಕಣಿ, ಹೂವಪ್ಪ ಕೊಡಕಣಿ, ನಾಗರಾಜ ಕೊಕಣಿ, ಶಿವನಗೌಡ ಧ್ವಾರಹಳ್ಳಿ, ಕೊಟ್ರೇಶ್ ನೇರಲಗಿ, ಉಮೇಶ್ ಗುಂಜನೂರು, ಮಹೇಂದ್ರ ತತ್ತೂರು, ಅಶೋಕ್ ಶೇಟ್, ಪ್ರಕಾಸ್ ಅಗಸನಹಳ್ಳಿ, ಪ್ರಭು, ಶಿವು ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post