ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿದ್ಯಾರ್ಥಿ ಜೀವನದಲ್ಲಿಯೇ ಶಿಕ್ಷಣದ ಮೂಲಕ ಉದ್ಯಮ ಪೂರಕ ಆಳವಾದ ಅಧ್ಯಯನ ಅವಶ್ಯಕ ಎಂದು ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಿನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್ ಎ. ಉಪ್ಪಿನ್ ಅಭಿಪ್ರಾಯಪಟ್ಟರು.
ಇಂದು ನಗರದ ಜೆಎನ್’ಎನ್’ಸಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸ್ಥಾಪಿಸಿರುವ ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ವಿಜಿಎಸ್’ಟಿ) ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸುತ್ತಲಿನ ದೈನಂದಿನ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರದ ಅವಶ್ಯಕತೆಯಿದೆ. ನಾವು ಎದುರಿಸುತ್ತಿರುವ ಶುದ್ಧ ಕುಡಿಯುವ ನೀರಿನ ಸರಬರಾಜು, ಅನವಶ್ಯಕ ನೀರು ಸೊರಿಕೆ ತಡೆ, ಕೃಷಿ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆಗೆ ಹೊಸ ಆವಿಷ್ಕಾರಗಳು ಪೂರಕವಾಗಲಿ. ಸಂಶೋಧನಾ ಕ್ಷೇತ್ರಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಅಬ್ದುಲ್ ಕಲಾಂ ಅವರ ಕೊಡುಗೆ ಎಂದೆಂದಿಗೂ ಮಾದರಿಯಾಗಿದ್ದು, ಸ್ಥಳೀಯ ಸಂಶೋಧನಾ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಾಗ ಮಾತ್ರ ಸ್ಥಳೀಯ ಉದ್ಯಮದಾರರು ಲಭ್ಯವಾಗಲಿದ್ದು ಅಂತಹ ಪ್ರೇರಣೆ ನೀಡುವ ಜವಾಬ್ದಾರಿ ಕಾಲೇಜುಗಳ ಮೇಲಿದೆ ಎಂದು ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಆರ್. ಗಣೇಶ್ ಮಾತನಾಡಿ, ಸಂಶೋಧನಾ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಹಣವನ್ನು ಮೀಸಲಿಟ್ಟಿದ್ದು, ಕರ್ನಾಟಕ ಸರ್ಕಾರ ಆರ್ ಅಂಡ್ ಡಿ ಪಾಲಿಸಿ ಅನುಷ್ಟಾನಗೊಳಿಸುವುದರ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಪೂರಕ ವೇದಿಕೆ ಕಲ್ಪಿಸಿದೆ. ಎಂಎಸ್’ಎಂಇ ಮೂಲಕ ಸಣ್ಣ, ಮಧ್ಯಮ ಉದ್ಯಮ ಪ್ರಾರಂಭಿಸುವವರಿಗೆ ಶೇ.25ರಷ್ಟು ಸಬ್ಸಿಡಿಯನ್ನು ಸರ್ಕಾರ ಭರಿಸಲಿದೆ. ಬೆಳಗಾವಿ ನಂತರ ಅತಿ ಹೆಚ್ಚು ಫೌಂಡರಿ ಹೊಂದಿರುವ ನಗರ ಶಿವಮೊಗ್ಗ. ಅಂತರಾಷ್ಟ್ರೀಯ ಮಟ್ಟದಲ್ಲಿ ಶಿವಮೊಗ್ಗದ ಕೈಗಾರಿಕೊದ್ಯಮಿಗಳು ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವತ್ಥ್ ನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಮಾತನಾಡಿದರು. ಜೆಎನ್’ಎನ್’ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಂ. ಪೂರ್ಣಿಮಾ, ಸಹ ಪ್ರಾಧ್ಯಾಪಕರು ಹಾಗೂ ವಿಜಿಎಸ್’ಟಿ ಸಂಯೋಜಕರಾದ ಡಾ.ಜಿ.ಆರ್. ಮಂಜುಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















