ಕಲ್ಪ ಮೀಡಿಯಾ ಹೌಸ್
ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀಟಿಕಟ್ಟೆ ಗ್ರಾಮದಲ್ಲಿ ಒಂದು ವಾರದಿಂದ ಅನಾಥವಾಗಿ ತಿರುಗಾಡುತ್ತಿದ್ದ ೩೫ ವರ್ಷ ಅಸುಪಾಸಿನ ಮಾನಸಿಕ ಅಸ್ವಸ್ಥ ಮಹಿಳೆಗೆ ಕರವೇ ಕಾರ್ಯಕರ್ತರು ಆಶ್ರಯ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದ ಮಹಿಳೆಯನ್ನು ಕಂಡ ಸ್ಥಳೀಯರಾದ ಶಿಲ್ಪಿ ಮಂಜುನಾಥ್ ಆಚಾರ್ಯ ಅವರು ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ಮಾತನಾಡಿಸಿದಾಗ ಮಾನಸಿಕ ಅಸ್ವಸ್ಥರಂತೆ ಕಂಡು ಬರುತ್ತಿದ್ದರು ಎಂದು ಹೇಳಿದ್ದಾರೆ.
ಕರವೇ ಫ್ರಾನ್ಸಿಸ್ ಡಿಸೋಜಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್ನ ಆಡಳಿತಾಧಿಕಾರಿ ಪ್ರಭಾವತಿ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿದಾಗ ನಮ್ಮ ಇಲಾಖೆಗೆ ಕರೆದು ತರಲು ಹೇಳಿದ್ದರಿಂದ ಮಹಿಳೆಯನ್ನು ಸಖಿ ಒನ್ ಸ್ಟಾಪ್ ಸೆಂಟರ್ಗೆ ಬಿಡಲಾಯಿತು. ನಂತರ ಮಹಿಳೆಗೆ ಶ್ರೀಶಕ್ತಿ ಅನಾಥಶ್ರಮದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರ ಜತೆ ಮಾತನಾಡಿ, ಮಹಿಳೆಯನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಿದ ಗೌಡಳ್ಳಿ ಪಂಚಾಯಿತಿ ಸದಸ್ಯ ವೆಂಕಟೇಶ, ಸಖಿ ಒನ್ ಸೆಂಟರ್ ಆಡಳಿತಾಧಿಕಾರಿ ಪ್ರಭಾವತಿ, ಋತು ಮತ್ತು ಚಿಕಿತ್ಸೆ ಕೊಡಿಸಲು ನೆರವಾದ ಶ್ರೀಶಕ್ತಿ ಆಶ್ರಮದ ವ್ಯವಸ್ಥಾಪಕ ಸತೀಶ್ ಅವರಿಗೆ ಕರವೇ ಕಾರ್ಯಕರ್ತರು ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೀಟಿಕಟ್ಟೆ ಗ್ರಾಮದ ಚಂದ್ರಪ್ಪ, ಗ್ರಾಮಸ್ಥರು ಮತ್ತು ಕಿಸಾನ್ ರೈ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















