ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವುದರಿಂದ ನಗರದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲು ಇಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಉಸ್ತುವಾರಿ ಸಚಿವ ಈಶ್ವರಪ್ಪ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಸರ್.ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವೂ ಸಹ ಇದೆ. ಇಲ್ಲಿ ಸುಮಾರು 36 ತಂಡಗಳು ಕಾರ್ಯ ನಿರ್ವಹಿಸಿದರೆ, 150 ಕೆಎಲ್ ಸಾಮರ್ಥ್ಯದ ಸುಮಾರು 1000 ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್ಗಳನ್ನು ಭರ್ತಿ ಮಾಡಬಹುದು. ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಜವಾಬ್ದಾರಿ ಎಂಎಸ್ಪಿಎಲ್ ಕಂಪೆನಿ ಮಾಡಿದರೆ, ಅದನ್ನು ಸಿಲಿಂಡರ್ಗೆ ತುಂಬಿಸುವ ಕಾರ್ಯವನ್ನು ವಿಐಎಸ್ಎಲ್ ಮಾಡುತ್ತದೆ ಎಂದು ಹೇಳಿದರು.
ವಿಐಎಸ್ಎಲ್ನಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿ ಕಾರ್ಯಾರಂಭವಾಗಲಿದ್ದು, ರಾಜ್ಯದಲ್ಲಿ ಅಗತ್ಯವಿರುದ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ರವಾನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಶಾಸಕ ಸಂಗಮೇಶ್ವರ್, ರುದ್ರೇಗೌಡ ಇನ್ನಿತರರಿದ್ದರು.
ಇದಕ್ಕೂ ಮೊದಲು ತಾನು, ಸಂಸದ ರಾಘವೇಂದ್ರ ಅವರೊಂದಿಗೆ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿ ಆಮ್ಲಜನಕ ಉತ್ಪಾದನೆ ಕುರಿತು ಸಮೀಕ್ಷೆ ನಡೆಸಿದ್ದೆವು. ತಮ್ಮ ಆಹ್ವಾನದ ಮೇರೆಗೆ ಸಚಿವ ಜಗದೀಶ್ ಶೆಟ್ಟರ್ ಅವರು ಇಂದು ನಗರಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಪ್ರಸ್ತುತ ಆಕ್ಸಿಜನ್ ಪೂರೈಕೆಗೆ ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಲಸಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ ಕೊರೋನಾ ಲಸಿಕೆ ದಾಸ್ತಾನು ಇದ್ದಾಗ ಬಂದು ಲಸಿಕೆ ಹಾಕಿಕೊಳ್ಳುವಂತೆ ವಿನಂತಿಸಿದರೂ ಪಡೆಯದೆ ನಿರ್ಲಕ್ಷ್ಯ ಮಾಡಿದಿರಿ. ಈಗ ಬೇಕು ಎಂದರೂ ಸಿಗುತ್ತಿಲ್ಲ. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದವರಿಗೆ ಎರಡನೆಯ ಹಂತದ ಲಸಿಕೆ ನೀಡುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ಬಳಿಕ ಉಳಿದವರಿಗೆ ಲಸಿಕೆ ನೀಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post