ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಕೊರತೆಯೂ ಉದ್ಭವಿಸಿರುವುದರಿಂದ ನಗರದ ವಿಐಎಸ್ಎಲ್ ಕಾರ್ಖಾನೆಗೆ ಇಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಮಧ್ಯಾಹ್ನ ಕಾರ್ಖಾನೆಗೆ ಭೇಟಿ ನೀಡಿದ ಅವರು, ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಸರ್.ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವೂ ಸಹ ಇದೆ. ಈ ಹಿಂದೆ ಎಂಎಸ್ಪಿಎಲ್ ಕಂಪೆನಿಯ ಸಹಭಾಗಿತ್ವದಲ್ಲಿ ಘಟಕ ಆರಂಭವಾಗಿತ್ತು. ಆದರೆ, ಅದು ಕಳೆದ ಎರಡು ವರ್ಷಗಳಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಈಗ ಇಂತಹ ತುರ್ತು ಸಂದರ್ಭದಲ್ಲಿ ಎಂಎಸ್ಪಿಎಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಇದೇ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ.
ಇಲ್ಲಿ ಸುಮಾರು 36 ತಂಡಗಳು ಕಾರ್ಯ ನಿರ್ವಹಿಸಿದರೆ, 150 ಕೆಎಲ್ ಸಾಮರ್ಥ್ಯದ ಸುಮಾರು 1000 ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್ಗಳನ್ನು ಭರ್ತಿ ಮಾಡಬಹುದು. ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಜವಾಬ್ದಾರಿ ಎಂಎಸ್ಪಿಎಲ್ ಕಂಪೆನಿ ಮಾಡಿದರೆ, ಅದನ್ನು ಸಿಲಿಂಡರ್ಗೆ ತುಂಬಿಸುವ ಕಾರ್ಯವನ್ನು ವಿಐಎಸ್ಎಲ್ ಮಾಡುತ್ತದೆ.
ಈ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವುದಕ್ಕೆ ಪ್ರತಿ ತಿಂಗಳು ಅಂದಾಜು 10 ರಿಂದ 12 ಲಕ್ಷ ರೂ. ವೆಚ್ಚ ತಗಲುತ್ತದೆ. ಪ್ರತಿದಿನ ಉತ್ಪಾದನೆಗಾಗಿ 2 ಲಕ್ಷ ರೂ. ವಿದ್ಯುತ್ ಬಿಲ್ ಅಂದಾಜಿಸಲಾಗಿದ್ದು, ಇದನ್ನು ಜಿಲ್ಲಾಡಳಿತ ಪಾವತಿಸಲಿದೆ. ಆಕ್ಸಿಜನ್ ಉತ್ಪಾದನೆಗಾಗಿ ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಈಗಾಗಲೇ ಆರಂಭಿಸಿದ್ದು, ಬಹುತೇಕ ಇದೇ ಶನಿವಾರ ಅಥವಾ ಭಾನುವಾರದಿಂದ ಉತ್ಪಾದನೆ ಆರಂಭವಾಗಲಿದೆ. ಇಲ್ಲಿ ಉತ್ಪಾದನೆ ಆರಂಭವಾದ ನಂತರ ಜಿಲ್ಲೆಯಲ್ಲಿರುವ ಆಕ್ಸಿಜನ್ ಕೊರತೆ ನೀಗಲಿದೆ ಎಂದರು.ಉತ್ಪಾದನೆ ಆರಂಭವಾದ ಅತಿ ಶೀಘ್ರದಲ್ಲಿ ಪ್ರಮಾಣವನ್ನು ಹೆಚ್ಚಿಸಿ, ನಮ್ಮ ಜಿಲ್ಲೆಯೊಂದಿಗೆ ಆಕ್ಸಿಜನ್ ಅಗತ್ಯವಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಸಹ ರವಾನಿಸುವ ಆಶಯ ಹೊಂದಲಾಗಿದೆ.
ಇದೇವೇಳೆ ನೈಟ್ರೋಜನ್ ಘಟಕಕ್ಕೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಪಂ ಸಿಇಓ ವೈಶಾಲಿ, ದತ್ತಾತ್ರಿ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಶಾಸಕ ಸಂಗಮೇಶ್ವರ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಸೇರಿದಂತೆ ಹಲವರು ಇದ್ದರು.
ಪರಿಶೀಲನೆಗೂ ಮುನ್ನ ವಿಐಎಸ್ಎಲ್ ಅತಿಥಿ ಗೃಹದಲ್ಲಿ ಸಭೆ ನಡೆಸಿದ ಸಚಿವರು, ಜಿಲ್ಲಾಡಳಿತ ಹಾಗೂ ವಿಐಎಸ್ಎಲ್ ಅಧಿಕಾರಿಗಳಿಂದ ಆಕ್ಸಿಜನ್ ಪ್ಲಾಂಟ್ನ ಪ್ರಸ್ತುತ ಪರಿಸ್ಥಿತಿ ಹಾಗೂ ಉತ್ಪಾದನೆಗೆ ಅಗತ್ಯವಿರುವ ಸಾಮಗ್ರಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post