ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಡೀ ದೇಶಕ್ಕೆ ಸಂಕಷ್ಟ ಬಂದಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕೆಟ್ಟ ಬುದ್ಧಿಯನ್ನು ತೋರಿಸಿದೆ. ಕೊರೋನಾ ಸಂಕಷ್ಟದ ಈ ಸಂದರ್ಭವನ್ನು ತನ್ನ ಲಾಭವಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಬಿಜೆಪಿಯನ್ನು ಹೇಗೆ ಹಣಿಯಬೇಕೆಂದು ಕಾರ್ಯತಂತ್ರವನ್ನು ರೂಪಿಸಿ ಟೂಲ್ ಕಿಟ್ ಅನ್ನು ತಯಾರು ಮಾಡಿದೆ. ಇದು ಒಂದು ದುರಂತವೇ ಸರಿ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಉಪಾಧ್ಯಕ್ಷ ಎಸ್. ದತ್ತಾತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಸಿಗುತ್ತಿಲ್ಲ, ಔಷದಿಗಳು ಸರಿಯಾದ ಸಮಯಕ್ಕೆ ಲಭ್ಯವಿಲ್ಲ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹೇಗಾದರೂ ಇದರ ಲಾಭ ಪಡೆದು ಅಧಿಕಾರದಲ್ಲಿರುವ ಬಿಜೆಪಿಗೆ ಅವಮಾನಿಸಬೇಕು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಷ್ಟವನ್ನುಂಟುಮಾಡಬೇಕು ಎಂದು ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುರಂತವೆಂದರೆ ಈ ಸಂದರ್ಭದಲ್ಲಿ ದೇಶದಲ್ಲಿ ಎಲ್ಲಾ ಪಕ್ಷಗಳು ಜೊತೆಗೆ ನಿಂತು ಮನುಕುಲದ ಉಳಿವಿಗೆ ಹೊರಡಬೇಕು ಅನ್ನೋ ಸಮಷ್ಟಿ ಪ್ರಜ್ಞೆ, ಸದ್ಭಾವನೆ, ಜನತೆಗೆ ಕುರಿತಾದ ಒಂದು ಅಂತಃಕರಣ ಎಲ್ಲಾ ಪಕ್ಷದವರಿಗೂ ಇರಬೇಕು. ಏಕೆಂದರೆ ಜನತೆಯ ಸೇವೆಗಾಗಿಯೇ ಈ ಎಲ್ಲಾ ಪಕ್ಷಗಳು ಇರುವುದು. ಆದರೆ ಕಾಂಗ್ರೆಸ್ ಪಕ್ಷ ಸೇವೆಯ ಬದಲು ಟೂಲ್ ಕಿಟ್ ಮಾಡುತ್ತಿದೆ. ಹಾಗೂ ಸಾಕ್ಷಿ ಸಮೇತ ಇದು ರುಜುವಾತಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಬರೆದಿರುವ ಪತ್ರದ (ಟೂಲ್ ಕಿಟ್)ಕೆಲ ವಿವರ ಈ ಕೆಳಗಿನಂತಿದೆ:
ಕೋವಿಡ್ನ ಈ ಹೊಸ ರೂಪಾಂತರಕ್ಕೆ “ಮೋದಿ ತಳಿ, ಭಾರತದ ತಳಿ” ಎಂದು ಹೆಸರಿಡುವುದು…
ಕುಂಭಮೇಳವನ್ನು “ಸೂಪರ್ ಸ್ಪೆಂಡರ್” ಎಂಬಂತೆ ಎಲ್ಲಾ ಮಾಧ್ಯಮಗಳಲ್ಲಿಯೂ ನಿರಂತರ ಸುದ್ದಿ ಬರುವಂತೆ ನೋಡಿಕೊಳ್ಳುವುದು.
ಈದ್ ಹಬ್ಬದಲ್ಲಿ ಭಾಗವಹಿಸಿದವರ ವಿರುದ್ಧ ಯಾವುದೇ ಸುದ್ದಿಗಳು ಬಾರದಂತೆ ನೋಡಿಕೊಳ್ಳುವುದು.
ಶವಸಂಸ್ಕಾರ ಅಥವಾ ಹೆಣ ಸುಡುವ ಸನ್ನಿವೇಶಗಳನ್ನು ಸಿನಿಮಾ ರೀತಿ ಚಿತ್ರಿಕರಿಸಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುವಂತೆ ಮಾಡುವುದು.
ಪಿಎಂ ಕೇರ್ನಿಂದ ಬಂದಂತ ಹಣದಲ್ಲಿ ಸಪ್ಲೈ ಮಾಡಲಾಗಿರುವಂತಹ ವೆಂಟಿಲೇಟರ್ಗಳು “ಕಳಪೆಮಟ್ಟದ್ದು” ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು.
ಬಿಜೆಪಿ ಗೆದ್ದ ಕ್ಷೇತಕ್ಕೆ ಹೆಚ್ಚು ವೆಂಟಿಲೇಟರ್ ಗಳನ್ನು ಕೊಟ್ಟು ಕಾಂಗ್ರೆಸ್ ಗೆದ್ದ ಕ್ಷೇತ್ರಕ್ಕೆ ವೆಂಟಿಲೇಟರ್ ಗಳನ್ನು ಕೊಡದೆ ಬಿಜೆಪಿ “ತಾರತಮ್ಯ ನೀತಿಯನ್ನು” ಅನುಸರಿಸುತ್ತಿದೆ ಎಂದು ಬಿಂಬಿಸುವುದು.
ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು, ಫೋಟೋಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ವಿಟ್ಟರ್ ಅನ್ನು ಬಳಸಿ ಹೇಗೆ ಹರಡಬೇಕು ಅದರಿಂದ ಭಾರತ ಹಾಗೂ ಮೋದಿಯವರ ವ್ಯಕ್ತಿತ್ವವನ್ನು ಹೇಗೆ ಹಾಳು ಮಾಡಬೇಕು ಎನ್ನುವುದರ ಕುರಿತು ಸವಿಸ್ತಾರವಾದ ವರದಿಗಳು.
ಇಂತಹ ಹತ್ತು ಅಂಶಗಳನ್ನು ತನ್ನ ಕಾರ್ಯಕರ್ತರಿಗೆ ಕಾಂಗ್ರೆಸ್ ನೀಡಿದೆ. ಜೊತೆಗೆ “ಸೆಂಟ್ರಲ್ ವಿಸ್ತ” ಯೋಜನೆಯ ಬಗ್ಗೆ ಕಾಂಗ್ರೆಸ್ ಪ್ರಧಾನಿಯ ವಸತಿಗಾಗಿ ಹಣ ವ್ಯಯ ಮಾಡುತ್ತಿದೆ ಎಂದು ಆರೋಪಿಸಿ, ಇಷ್ಟೊಂದು ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿದ್ದಾರೆ ಈ ಹಣದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ಖರೀದಿಸಬಹುದಿತ್ತು ಆಸ್ಪತ್ರೆಗಳನ್ನು ನಿರ್ಮಿಸಬಹುದಿತ್ತು ಅನ್ನುವಂತಹ ಸಂದೇಶವನ್ನು ರವಾನೆ ಮಾಡಲು ಕಾಂಗ್ರೆಸ್ ತಿಳಿಸಿದೆ ಎಂದು ಹೇಳಿದ್ದಾರೆ.
ಇನ್ನೊಂದು ಚಾಣಾಕ್ಷ ತಂತ್ರವೆಂದರೆ ಅವರ ಕಾರ್ಯಕರ್ತರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮೊದಲಿಗೆ ಮೋದಿ ಅವರ ಅಭಿಮಾನಿಯಂತೆ ಹೆಚ್ಚು ಹೆಚ್ಚು ಮೋದಿಯವರ ಪರ ಟ್ವಿಟ್ ಮಾಡಿ ನಂತರ ಅವರಿಂದಲೇ ಮೋದಿಯ ವಿರುದ್ಧವಾಗಿ ಟ್ವೀಟ್ ಮಾಡಿಸಿ ಜನರನ್ನು ದಿಕ್ಕುತಾಪ್ಪಿಸುವಂತೆ ಸೂಚಿಸಿದೆ ಕಾಂಗ್ರೆಸ್. ಈ ಎಲ್ಲಾ ಅಂಶಗಳ ಕುರಿತು ಜೆ ಪಿ ನಡ್ಡ ಅವರು ಹಾಗೂ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ ಎಂದು ದತ್ತಾತ್ರಿ ಹೇಳಿದ್ದಾರೆ.
ಆದರೆ ಕಾಂಗ್ರೆಸ್ನ ರೀಸರ್ಚರ್ ಹಾಗೂ ಸೋಶಿಯಲ್ ಮೀಡಿಯಾದ ಮುಖ್ಯಸ್ಥ ರಾಜೀವ್ ಗೌಡ ಇದನ್ನ ನಿರಾಕರಿಸಿದ್ದು, ಏನೇ ಆದರೂ ಈ ಸಂದರ್ಭದಲ್ಲಿ ಕಾಂಗ್ರೆಸ್ ಮನುಕುಲದ ಉಳಿವಿಗೆ ಹೊರಾಡಬೇಕು ಅನ್ನೋ ಸದ್ಭಾವನೆ ಇಟ್ಟುಕೊಂಡಿದ್ದರೆ ಇಂತ ಅನಗತ್ಯವಾದಂತ ಯಾವ ಆರೋಪಗಳು ಬರುತ್ತಿರಲಿಲ್ಲ, ಯಾವ ವಿವಾದವು ಇರುತ್ತಿರಲಿಲ್ಲ. ಪ್ರಾರಂಭದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಇದನ್ನೇ ಮಾಡಿಕೊಂಡು ಬಂದಿದೆ. ಕಿಸಾನ್ ಆಂದೋಲನ ಸಂಧರ್ಭದಲ್ಲೂ ಇಂತಹದ್ದೇ ಅಪಪ್ರಚಾರದ ಟೂಲ್ ಕಿಟ್ ಸೃಷ್ಟಿಸಿದ್ದರು. ಈ ಎರಡು ಟೂಲ್ ಕಿಟ್ ದೇಶವಿರೋಧಿ ಟೂಲ್ ಕಿಟ್ ಆಗಿದೆ ಎಂದು ಹೇಳಿದ್ದಾರೆ.
ಇಂದಿನ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಜೊತೆಯಲ್ಲಿ ಸೇರಿ ಈ ಕಂಟಕದಿಂದ ಪಾರಾಗುವ ಜವಾಬ್ದಾರಿ ಇದೆ. ಆದರೆ ಕಾಂಗ್ರೆಸ್ ಇದರಿಂದ ದೂರ ಉಳಿದು ದೇಶದ ನಾಗರಿಕರ ಅಂದರೆ ನಮ್ಮ ಬಂಧು ಬಳಗ, ನಮ್ಮ ಮಿತ್ರರ ಹೆಣದ ಫೋಟೋಗಳನ್ನು ಹಾಕಿ ಅದರ ಮೇಲೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದೆ. ಇಂತಹ ಒಂದು ದೊಡ್ಡ ಪಕ್ಷ, ಸ್ವತಂತ್ರ ಪೂರ್ವದ ಪಕ್ಷ ಶೋಚನೀಯ ಸ್ಥಿತಿಗೆ ತಲುಪಿ, ದೇಶದ್ರೋಹಿ ಟೂಲ್ ಕಿಟ್ ಮಾಡುವ ಕೆಳಮಟ್ಟಕ್ಕೆ ಇಳಿದು ಜನತೆಗೆ ನಂಬಿಕೆ ದ್ರೋಹ ಮಾಡಿದೆ. ಒಂದು ಅದ್ಭುತವಾದಂತಹ ವಿಶ್ವಾಸಾರ್ಹ ವಿರೋಧಪಕ್ಷ ಇರಬೇಕೆಂದು ದೇಶದ ಜನತೆ ಬಯಸಿದರೆ ಕಾಂಗ್ರೆಸ್ ಅದರ ಅರ್ಹತೆಯನ್ನೇ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಇವರು ಏನೇ ಟೂಲ್ ಕಿಟ್ ಮಾಡಿದರು ಎಷ್ಟೇ ಅಪಪ್ರಚಾರ ಮಾಡಿದರು ದೇಶದ ಜನತೆಗೆ ಪ್ರಧಾನಿ ಮೋದಿಯವರ ನಿಸ್ವಾರ್ಥ ಸೇವೆಯ ಬಗ್ಗೆ ದೃಢವಾದ ನಂಬಿಕೆಯಿದೆ. ಹಾಗಾಗಿ ಕಾಂಗ್ರೆಸ್, ಕೋವಿಡ್ನ ನಿರ್ಮೂಲನೆಗಾಗಿ ಸಮಾಜದ ನಡುವೆ ಸೇವಾ ಕಾರ್ಯಗಳನ್ನು ಮಾಡಿ ಪುಣ್ಯ ಸಂಪಾದಿಸಿಕೊಳ್ಳಬೇಕೆ ಹೊರತು ಈ ರೀತಿ ಬಿಜೆಪಿಯ ಮೇಲೆ ನರೇಂದ್ರ ಮೋದಿಯವರ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು ದತ್ತಾತ್ರಿ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post