ಕಲ್ಪ ಮೀಡಿಯಾ ಹೌಸ್
ಸೊರಬ: ವರ್ಷಕ್ಕೂ ಅಧಿಕ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿಯುವ ಅನಿವಾರ್ಯತೆ ಬಂದಿದ್ದು, ಪುನಃ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಮನೆಯಲ್ಲೆ ಆಟವಾಡಿಕೊಂಡು ಸ್ವತಂತ್ರವಾಗಿದ್ದ ಮಕ್ಕಳು ಬಹುತೇಕ ಶಾಲೆ ಮರೆತಿದ್ದಾರೆ. ಇನ್ನೊಂದೆಡೆ ಈ ವರ್ಷವೂ ಮಕ್ಕಳಿಗೆ ಶಾಲಾ ಪ್ರವೇಶ ಮರೀಚಿಕೆಯಾಗಿದೆ. ಇವೆಲ್ಲವನ್ನು ಬದಿಗೆ ಸರಿಸಿ ಮುಂದಾದರೂ ದೇವರಿಲ್ಲದ ದೇವರಗುಡಿಗೆ ದೇವರನ್ನು ಕರೆತರುವ ಕಾರ್ಯದಲ್ಲಿ ಶಿಕ್ಷಕರು ನಿರತರಾಗಿದ್ದಾರೆ.
ತಾಲ್ಲೂಕಿನ ಅನೇಕ ಮಾಧ್ಯಮಿಕ, ಪ್ರಾಥಮಿಕ ಶಾಲೆಗಳು ಮುಂದಿನ ದಿನಗಳಲ್ಲಿ ಮಕ್ಕಳನ್ನು ಸೆಳೆಯಲು ನೂತನ ಪ್ರಯೋಗದಲ್ಲಿ ತೊಡಗಿದ್ದು, ಶಾಲಾ ಕೊಠಡಿಗಳನ್ನು ವರ್ಣರಂಜಿತವಾಗಿಸುವ ಮೂಲಕ ಶಾಲಾ ಹೊರಗಿದ್ದೂ ಶಿಕ್ಷಣ ನೀಡುವ ಕೆಲಸ ಗಮನ ಸೆಳೆಯುತ್ತಿದೆ.
ವಿಶೇಷವಾಗಿ ತಾಲ್ಲೂಕು ಸಿರ್ಸಿ ಗಡಿ ಅಂಚಿನಲ್ಲಿರುವ ಪುಟ್ಟ ಗ್ರಾಮ ತೆಲಗುಂದ್ಲಿ ಸಹಿಪ್ರಾ ಶಾಲಾ ಶಿಕ್ಷಕರು, ಗ್ರಾಮಸ್ಥರು, ಶಾಲಾ ಸಮಿತಿಯವರು ಹಾಗೂ ಕಲಾವಿದರೂ ಒಟ್ಟಾಗಿ ಇಲ್ಲಿ ವ್ಯಾಸಂಗ ಪಡೆಯುತ್ತಿರುವ ಸುಮಾರು 70 ಮಕ್ಕಳಿಗೆ ಸಾಂಕ್ರಮಿಕ ರೋಗ, ಮತಗಟ್ಟೆ ಪರಿಕಲ್ಪನೆ, ಮತದಾರರ ಹಕ್ಕು, ಕರ್ತವ್ಯ, ಮತದಾನದ ಹಕ್ಕು, ಇವೆಲ್ಲವನ್ನೂ ಸಾರಿರುವ ನಾಡಿನ ಹಲವು ದಾರ್ಶನಿಕರ ಅಮೃತವಾಣಿಗಳು ಗೋಡೆಯನ್ನು ರಾರಾಜಿಸುತ್ತಿವೆ.
ಗಮನಸೆಳೆಯುವ ಪುಸ್ತಕ ವಿಮಾನ:
ಪುಷ್ಪಕ ವಿಮಾನದ ಕಲ್ಪನೆಯಲ್ಲಿ ಮೂಡಿಬಂದ ಚಿತ್ರಣ ವಿನೂತನ ಪ್ರಯೋಗವೆನಿಸಿದ್ದು, ಮಗುವಿಗೆ ನೀಡುವ ಶಿಕ್ಷಣ ಜೀವನಕ್ಕೆ ಅಗತ್ಯವಾಗಿರುವಂತೆ ರೂಪಿಸಲಾಗಿದೆ. ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಶಿಕ್ಷಣ ದೊರಕಬೇಕು ಎಂಬ ಪರಿಕಲ್ಪನೆಯಲ್ಲಿ ಇಂತಹ ಹಲವು ಪ್ರಯೋಗಗಳನ್ನು ಮಾಡಲಾಗಿದೆ ಎಂದಿರುವ ಶಿಕ್ಷಕರು ಶಿಶುಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಜ್ಞಾನವಂತರಾಗಬೇಕು. ಇಲ್ಲಿ ಒಂದು ರೆಕ್ಕೆ ಶಿಕ್ಷಕರಾದರೆ, ಇನ್ನೊಂದು ರೆಕ್ಕೆ ಸರ್ಕಾರದ್ದು, ಸಮಾಜ, ಸಮುದಾಯ, ಪೋಷಕವರ್ಗ ಈ ಎರಡು ರೆಕ್ಕೆಗಳ ಸಹಕಾರದಿಂದ ಮಕ್ಕಳು ಪುಸ್ತಕ, ಮೊಬೈಲ್ ಮೂಲಕ ವಿಷಯಜ್ಞಾನ ಹೊಂದುವಂತಾಗಬೇಕು ಎನ್ನುತ್ತಾರೆ.
ಸುಸಂಸ್ಕೃತ ಸಮಾಜದ ನಿರ್ಮಾತೃಗಳ ನೆಮ್ಮದಿ, ಸಮೃದ್ಧ ಬಾಳಿಗೆ ಶಿಕ್ಷಣ ಅತಿ ಮುಖ್ಯ. ಕೊರೋನಾ ಹರಡದಂತೆ ಜಾಗೃತಿಗಾಗಿ ಶಾಲೆಗೆ ಮಕ್ಕಳನ್ನು ಕರೆಯುತ್ತಿಲ್ಲ, ಆದಾಗ್ಯೂ ಅವರಿಗೆ ಶಾಲೆಯ ಸೆಳೆತ ಮರೆಯದಿರಲು ಇಂತಹ ಪ್ರಯೋಗ ಮಾಡಲಾಗಿದೆ.
-ಹೆಚ್.ನರಸಿಂಹಮೂರ್ತಿ, ಮುಖ್ಯ ಶಿಕ್ಷಕ.
ಸಹಾಯಹಸ್ತ:
ಯೋಗ, ಪರಿಸರ, ನಾಡು ನುಡಿ, ಐತಿಹಾಸಿಕ ಕ್ಷೇತ್ರ ಇನ್ನೂ ಮುಂತಾದ ಜ್ಞಾನ ಪೂರಕ ಕಲೆಗೆ ಸುಮಾರು 95 ಸಾವಿರ ರೂ. ವೆಚ್ಛ ತಗುಲಿದೆ. ಈ ಕಾರ್ಯಕ್ಕೆ ಗ್ರಾಪಂ 75 ಸಾವಿರ ರೂ., ಶಾಲಾ ಸಮಿತಿ ಮತ್ತು ಗ್ರಾಮಸ್ಥರು 10 ಸಾವಿರ, ಹರೀಶಿ ಗ್ರಾಪಂ ಅಧ್ಯಕ್ಷ ಟಿ.ರಾಕೇಶ್, ಶಾಲಾ ಮುಖ್ಯ ಶಿಕ್ಷಕ ತಲಾ 5000 ರೂ. ದೇಣಿಗೆ ನೀಡುವ ಮೂಲಕ ಸಹಕರಿಸಿದ್ದಾರೆ.
ಮುಖ್ಯ ಶಿಕ್ಷಕ ಹೆಚ್.ನರಸಿಂಹಮೂರ್ತಿ, ಸಹಶಿಕ್ಷಕ ಕೆ.ಹೆಚ್. ಕೇಶವ, ಭವ್ಯಭಂಡಾರಿ ಇವರ ಕನಸಿಗೆ ಕಲಾವಿದ ಆನಂದ್ ತನ್ನ ಸಂತೋಷ್ ಆರ್ಟ್ ಬ್ಯಾನರ್ ಅಡಿಯಲ್ಲಿ ಮೂರ್ತ ಸ್ವರೂಪ ನೀಡಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post