ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರದ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ವಿಜಯೇಂದ್ರ ಅವರು, ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪದಕ ಸ್ವೀಕರಿಸಿದರು.
ಪ್ರಸ್ತುತ ಗೃಹರಕ್ಷಕದಳದಲ್ಲಿ ಪ್ಲಟೂನ್ ಸಾರ್ಜೆಂಟ್ ಆಗಿರುವ ಇವರು 1999ರಲ್ಲಿ ಸ್ವಯಂ ಸೇವಕರಾಗಿ ನೇಮಕಗೊಂಡಿದ್ದರು. ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿ ವರ್ಷ ಕೇಂದ್ರ ಕಛೇರಿ ವತಿಯಿಂದ ಆಯೋಜಿಸುವ ವಿವಿಧ ತರಬೇತಿಯಲ್ಲಿ ಭಾಗವಹಿಸಿ 2 ಚಿನ್ನ ಹಾಗು 1 ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಹಾಗೂ ಗೃಹರಕ್ಷಕ ದಳದ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಲೋಪದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿರುವುದು ಇವರ ಹೆಗ್ಗಳಿಕೆಯಾಗಿದೆ.
ವಿಜಯೇಂದ್ರ ಅವರ ಪ್ರತಿಕ್ರಿಯೆ:
ಪ್ರಶಸ್ತಿ ಲಭಿಸಿರುವುದು ಸಂತಸವಾಗಿದೆ. ಕೃಷಿಕರಾಗಿ ತೋಟದ ಕೆಲಸದ ಜೊತೆಗೆ ಗೃಹ ರಕ್ಷಕದಳದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ವೈಯಕ್ತಿಕವಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. ನದಿಯಲ್ಲಿ ಕಂಡು ಬರುವ ಅನಾಥ ಶವಗಳ ಪತ್ತೆ ಕಾರ್ಯ, ಸನ್ಮಾರ್ಗ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವು. ಡ್ಯಾನ್ಸ್ ಸ್ಕೂಲ್ ವತಿಯಿಂದ ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ದೇಶ ಭಕ್ತಿ ಗೀತೆ ಮೂಲಕ ಜಾಗೃತಿ ಮೂಡಿಸುವುದು. ಸ್ವಯಂ ಪ್ರೇರಣೆಯಿಂದ ರಕ್ತದಾನ ಸೇರಿದಂತೆ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಇತ್ಯಾದಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಶಸ್ತಿ ಲಭಿಸಿರುವ ಸಂಭ್ರಮದಲ್ಲಿರುವ ವಿಜಯೇಂದ್ರ ಅವರು ತಮ್ಮ ಗುರುಗಳಾದ ವೆಂಕಟರಮಣಯ್ಯ, ರಾಜಣ್ಣ ಜಿಲ್ಲಾ ಸಮಾದೇಷ್ಟರು, ಬೋಧಕರು, ತಾಲೂಕು ಘಟಕಾಧಿಕಾರಿ ಹಾಗೂ ಗೃಹರಕ್ಷಕ ದಳದ ಎಲ್ಲಾ ಹಿರಿಯರನ್ನು ಮತ್ತು ಸಹದ್ಯೋಗಿಗಳನ್ನು ಸ್ಮರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post