ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 22ರಿಂದ 26ರವರೆಗೆ ಐದು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಯವರ ಆರಾಧನಾ ಮಹೋತ್ಸವ ನಡೆಯಲಿದೆ.
ಶ್ರೀ ಸುಬುಧೇಂದ್ರತೀರ್ಥ ಶ್ರೀಗಳ ಆದೇಶ ಅನುಗ್ರಹದೊಂದಿಗೆ ಹಾಗೂ ರಾಜ್ಯ ಸರ್ಕಾರದ ಕೋವಿಡ್-19ರ ನಿಯಮದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಗುರುರಾಯರ ವಿಶೇಷ ಉತ್ಸವ, ಪೂಜಾರಾಧನೆಗಳು ನೆರವೇರಲಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
22ರಂದು ಪೌರ್ಣಮಿ ಪ್ರಯುಕ್ತ ಬೆಳಗ್ಗೆ 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಗುರು ರಾಯರ ಬೃಂದಾವನಕ್ಕೆ ಮಹಾ ಮಂಗಳಾರತಿ ನೆರವೇರುತ್ತದೆ. ಸಂಜೆ 6:30ಕ್ಕೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ಆರ್. ಕೆ ವಾದೀಂದ್ರಾಚಾರ್ಯರಿಂದ ಪಂಚ ರಾತ್ರೋತ್ಸವದ ಉದ್ಘಾಟನೆ ಹಾಗೂ ಜಿ.ಕೆ ಆಚಾರ್ಯರಿಂದ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಶಾಖೋತ್ಸವ ಪೂಜೆ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದೆ.
23ರಂದು ಪೂರ್ವಾರಾಧನೆ:
ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ ಪೂರ್ವಾರಾಧನೆ ಪ್ರಯುಕ್ತ ಗುರುರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕ, ನೂತನ ವಸ್ತ್ರ ಸಮರ್ಪಣೆ, ವಿಶೇಷ ಹೂವಿನ ಅಲಂಕಾರ, ಉತ್ಸವಗಳು (ಶ್ರೀಮಠದಿಂದ ಪಾದಪೂಜೆ) ಕನಕಾಭಿಷೇಕ, ಪ್ರವಚನ, ಮಹಾಮಂಗಳಾರತಿ ನೆರವೇರಲಿದೆ.
24ರಂದು ಮಧ್ಯಾರಾಧನೆ:
ಶ್ರೀಗುರುರಾಯರ ಮಧ್ಯಾರಾಧನೆ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನದೊಳಗೆ ಪ್ರವೇಶ ಮಾಡಿದ ದಿನ, ಈ ದಿನವು ಗುರುಗಳ ಬೃಂದಾವನಕ್ಕೆ ಅಭಿಷೇಕ ವಿಶೇಷ ಹೂವಿನ ಅಲಂಕಾರ ನೂತನ ವಸ್ತ್ರ ಸಮರ್ಪಣೆ (ಶ್ರೀಮಠದಿಂದ ಪಾದಪೂಜೆ) ಕನಕಾಭಿಷೇಕ ಪ್ರವಚನ ಮಹಾಮಂಗಳಾರತಿ ನೆರವೇರಲಿವೆ.
25ರಂದು ಉತ್ತರಾರಾಧನೆ:
ಅಭಿಷೇಕ ವಿಶೇಷ ಹೂವಿನ ಅಲಂಕಾರ ನೂತನ ವಸ್ತ್ರ ಸಮರ್ಪಣೆ (ಶ್ರೀಮಠದಿಂದ ಪಾದಪೂಜೆ) ಕನಕಾಭಿಷೇಕ ದೊಂದಿಗೆ ಉತ್ತರಾರಾಧನೆ ನೆರವೇರಲಿದೆ.
ರಾಜಬೀದಿಯಲ್ಲಿ ಮಹಾರಥೋತ್ಸವ ಇಲ್ಲ:
ಪ್ರತಿವರ್ಷ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಸರ್ಕಾರದ ಕೋವಿಡ್ ನಿಯಮಾವಳಿಯಂತೆ ಹಾಗೂ ಶ್ರೀಪಾದರ ಆದೇಶದಂತೆ ರಾಜಬೀದಿಯಲ್ಲಿ ಉತ್ಸವ ಇರುವುದಿಲ್ಲ. ಶ್ರೀ ಗುರುರಾಯರ ಸನ್ನಿಧಿಯ ಪ್ರಾಕಾರದಲ್ಲಿ ಮಾತ್ರ ಬೆಳಗ್ಗೆ 10ಕ್ಕೆ ರಥೋತ್ಸವ, ಪಲ್ಲಕ್ಕಿ ಉತ್ಸವ, ಗಜವಾಹನೋತ್ಸವ, ಕನಕಾಭಿಷೇಕ, ಪ್ರವಚನ, ಮಹಾ ಮಂಗಳಾರತಿ ನೆರವೇರಲಿದೆ.
26ರಂದು ಆರಾಧನೆ ಸಂಪನ್ನ:
ಸರ್ವಸಮರ್ಪಣೋತ್ಸವ ನೆರವೇರಲಿದ್ದು, ಈ ಐದು ದಿನಗಳ ಪಂಚರಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳು ಸಮಾಪ್ತಿಯಾಗಲಿದೆ.
ಮಾಸ್ ಕಡ್ಡಾಯ:
ಶ್ರೀ ಮಠಕ್ಕೆ ಬರುವಂತಹ ಭಕ್ತರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಮಠದ ಮುಂಭಾಗದ ದ್ವಾರದಲ್ಲಿ ಥರ್ಮಲ್ ಸ್ಕಾನಿಂಗ್, ಸ್ಯಾನಿಟೈಜರ್ ವ್ಯವಸ್ಥೆಯೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಚೌಕಾಕಾರದ ಗೆರೆಗಳನ್ನು ಹಾಕಲಾಗಿದೆ. ಭಕ್ತಾದಿಗಳು ಶ್ರೀ ಮಠದ ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಶ್ರೀಗುರು ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ಶ್ರೀ ಮಠದ ಪರವಾಗಿ ಪುರೋಹಿತ ನಂದಕಿಶೋರ್ ಆಚಾರ್ಯರು ವಿನಂತಿಸಿದ್ದಾರೆ.
ಆನ್ಲೈನ್ ಸೇವೆ ಲಭ್ಯ:
ಶ್ರೀ ಗುರುರಾಯರ ಸೇವೆಯನ್ನು ಮಾಡಿಸುವಂತಹ ಭಕ್ತರು ಶ್ರೀ ಮಠದ ಈ ವಾಟ್ಸಪ್ – 9449133929 ನಂಬರ್ ಕ್ಯಾಟಲಾಗ್- ಮುಖಾಂತರ ಮಾಹಿತಿಯನ್ನು ಪಡೆದು ಕೊಂಡು ಆನ್ಲೈನ್ ನಲ್ಲಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು.
ಶ್ರೀ ಮಠಕ್ಕೆ ಆಗಮಿಸಲು ಆಗದೆ ಇರುವ ಭಕ್ತರು ಹಾಗೂ ವಯೋವೃದ್ಧರಿಗಾಗಿ ಶ್ರೀ ಮಠದ ಪೂಜೆಯು ಆನ್ಲೈನ್ ಮುಖಾಂತರ ದರ್ಶನ ಪಡೆದುಕೊಂಡು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ಸೇವೆ ಮಾಡಿಸಿದ ಪ್ರತಿಯೊಬ್ಬ ಸೇವಾಕರ್ತರು ತಾವು ಪಡೆದ ರಸೀದಿಯನ್ನು ಶ್ರೀ ಮಠದಲ್ಲಿ ತೋರಿಸಿ ಗುರುಗಳ ಶೇಷವಸ್ತ್ರ ಫಲ ಮಂತ್ರಾಕ್ಷತೆ, ಪರಿಮಳ ಪ್ರಸಾದ ಸ್ವೀಕರಿಸಬಹುದು.
“nsrsmutt jayanagar” ಫೇಸ್ಬುಕ್ ಲೈವ್ ಮುಖಾಂತರ ಪ್ರತಿದಿನ ಸಂಜೆ 6ಕ್ಕೆ ವಿದ್ವಾನ್ ರಾಯಚೂರು ಜಗನ್ನಾಥ್ ಆಚಾರ್ಯರಿಂದ ಪ್ರವಚನ, ಸಂಜೆ 7ಕ್ಕೆ ಉತ್ಸವಗಳು, ಸ್ವಸ್ತಿವಾಚನ, ಮಹಾ ಮಂಗಳಾರತಿ ನೆರವೇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಶ್ರೀ ಮಠ ಹಾಗೂ ಹರಿವರ ಎಂಬ ಫೇಸ್ಬುಕ್ ಲೈವ್ ನಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08022443962 -9945429129- 9449133929ಗೆ ಸಂಪರ್ಕಿಸಬಹುದು.
ಪೂರಕ ಮಾಹಿತಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post