ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜದಲ್ಲಿ ಹಿರಿಯ ನಾಗರೀಕರನ್ನು ಗೌರವದಿಂದ ಕಾಣುವುದು ಭಾರತೀಯ ಶ್ರೀಮಂತ ಸಂಸ್ಕೃತಿ – ಪರಂಪರೆಯ ಪ್ರತೀಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರೀಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಾರಣಗಳಿಂದಾಗಿ ಪೋಷಕರು ಮತ್ತು ಮಕ್ಕಳ ಸಂಬಂಧಗಳು ವಿಘಟನೆಗೊಳ್ಳುತ್ತಿವೆ. ಈ ಸಂಬಂಧಗಳ ಮೌಲ್ಯ ವಿದೇಶಿ ಸಂಸ್ಕೃತಿಯಲ್ಲಿ ಕಾಣಸಿಗದು. ಎಂತಹ ಸಂಧಿಗ್ಧ ಸಮಯದಲ್ಲಿಯೂ ಮಕ್ಕಳು ಪೋಷಕರೆದುರೆ ಬೆಳೆಯಬೇಕು ಎಂಬ ಆತ್ಮೀಯಭಾವ ಹಿರಿಯರದ್ದು. ಈ ಎಲ್ಲಾ ಸಂದರ್ಭಗಳಲ್ಲಿಯೂ ಪರಸ್ಪರರಲ್ಲಿ ಇರಬಹುದಾದ ಹೊಂದಾಣಿಕೆ, ಪ್ರೀತಿಯ ಹರವನ್ನು ಕಾಣಬಹುದಾಗಿದೆ ಎಂದರು.
ಹಿರಿಯರ ಜೀವನಾನುಭವನ ಮತ್ತು ಮಾರ್ಗದರ್ಶನ ಇಂದಿನ ಪೀಳಿಗೆಗೆ ಅಗತ್ಯವಾಗಿದೆ. ಹಿರಿತನ ಎಂಬುದು ಅನುಭವಗಳ ಸಾರವಾಗಿದ್ದು, ಅವರನ್ನು ಗೌರವಿಸಬೇಕಾದುದು ಇಂದಿನ ಯುವಪೀಳಿಗೆಯ ಹಾಗೂ ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದ ಅವರು ಕಾರಣಾಂತರಗಳಿಂದ ದೂರದ ಊರುಗಳಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳಲ್ಲಿನ ಮಕ್ಕಳು ಕೋವಿಡ್-19ರಂತಹ ಸಂದರ್ಭದಲ್ಲಿ ತಮ್ಮ ಪೋಷಕರ ಆರೋಗ್ಯ ಮತ್ತು ರಕ್ಷಣೆಗಾಗಿ ಪರಿತಪಿಸಿದ ರೀತಿ ಅನನ್ಯವಾದುದು ಎಂದರು.
ಪ್ರತಿ ವ್ಯಕ್ತಿಯ ಸರ್ವಾಂಗೀಣ ವಿಕಾಸದಲ್ಲಿ ಪೋಷಕರ ಶ್ರಮ ಅವರ್ಣನೀಯ. ಮಕ್ಕಳು ಬೆಳವಣಿಗೆಯ ಪ್ರತಿ ಹಂತವನ್ನು ಮರೆಯುವಂತಹದ್ದಲ್ಲ ಎಂದ ಅವರು ಮಕ್ಕಳು ದಾರಿ ತಪ್ಪಿದಾಗ ಸಕಾಲಿಕವಾಗಿ ಸೂಕ್ತ ಮಾರ್ಗದರ್ಶನ ನೀಡುವಲ್ಲಿ, ಅವರ ಭವಿಷ್ಯ ಉಜ್ವಲವಾಗಿರುವಂತೆ ರೂಪಿಸುವಲ್ಲಿ ತಂದೆ-ತಾಯಿಯರ ಕಳಕಳಿ ಅಪೂರ್ವವಾದುದು. ಆದ್ದರಿಂದ ವೃದ್ಧ ಪೋಷಕರ ನಿರ್ಲಕ್ಷ್ಯ ಸಲ್ಲದು. ಅವರ ಪೋಷಣೆ ಮಕ್ಕಳ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಆಟೋಟಗಳಲ್ಲಿ ವಿಜೇತರಾದ ಹಿರಿಯ ನಾಗರೀಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಯ್ದ ಹಿರಿಯ ನಾಗರೀಕರಿಗೆ ಶ್ರವಣಸಾಧನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಮನಿ, ಗಂಗೀಬಾಯಿ, ಪಂ.ಆರ್.ಬಿ.ಸಂಗಮೇಶ್ವರ ಗವಾಯಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post