ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಪ್ಯೂಟೇಷನಲ್ ಬೈಯಾಲಜಿ ತಂತ್ರಜ್ಞಾನವನ್ನು ಆರೋಗ್ಯ ಕ್ಷೇತ್ರದಲ್ಲಿ ಅನುಷ್ಟಾನಗೊಳಿಸುವುದರ ಮೂಲಕ ನಾವಿನ್ಯಯುತ ಬದಲಾವಣೆಗಳು ಸಾಧ್ಯವಾಗಲಿದೆ ಎಂದು ಪಂಜಾಬ್ ಚಿತ್ಕಾರ್ ವಿಶ್ವವಿದ್ಯಾಲಯ ಪ್ರಾದ್ಯಾಪಕರಾದ ಡಾ.ದೀಪಾಲಿ ಗುಪ್ತಾ ಅಭಿಪ್ರಾಯಪಟ್ಟರು.
ಇಂದು ನಗರದ ಜೆಎನ್ಎನ್ಸಿ ಎಂಜಿನಿಯರಿಂಗ್ ಕಾಲೇಜಿನ ಇನ್ಫಾರ್ಮೇಶನ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ ಹಾಗೂ ಭಾರತ ಸರ್ಕಾರದ ಎಐಸಿಟಿಇ ಟಿಚಿಂಗ್ ಲರ್ನಿಂಗ್ ಅಕಾಡೆಮಿ ವತಿಯಿಂದ ಉಪನ್ಯಾಸಕರಿಗಾಗಿ ಐದು ದಿನಗಳ ಕಾಲ ಏರ್ಪಡಿಸಿದ್ದ ‘ ಕಾಂಪ್ಯೂಟಿಂಗ್ ಕನ್ಟ್ರಕ್ಟ್ ಫಾರ್ ಮಾಡೆಲಿಂಗ್ ಬೈಯೊಲಜಿ’ ಕುರಿತ ಅಂತರಾಷ್ಟ್ರೀಯ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯ ಸ್ಥಿತಿಯ ದತ್ತಾಂಶಗಳ ಅಧ್ಯಯನ ನಡೆಸಿ ವೇಗದ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಕಾಂಪ್ಯೂಟೇಷನಲ್ ಬೈಯಾಲಜಿ ಪೂರಕವಾಗಲಿದೆ. ಗಣಿತ , ಭೌತಶಾಸ್ತ್ರ , ಜೀವಶಾಸ್ತ್ರ , ಗಣಕ ವಿಜ್ಞಾನದ ಸಂಗಮವಾದ ಕಾಂಪ್ಯೂಟೇಷನಲ್ ಬೈಯಾಲಜಿಯಲ್ಲಿನ ಸಂಶೋಧನೆಯ ಮುಂದುವರಿದ ಭಾಗವಾಗಿ ನಾಳಿನ ಪರಿಸರದಲ್ಲಿನ ಹವಾಮಾನದ ಆಧಾರದ ಮೇಲೆ ವ್ಯಕ್ತಿಯ ಆರೋಗ್ಯದಲ್ಲಾಗುವ ಬದಲಾವಣೆಗಳ ಕುರಿತು ವೇಗವಾಗಿ ಊಹಿಸಬಹುದಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆಗಳಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಹಲವು ವಿಷಯಗಳು ಅನುಷ್ಟಾನಗೊಂಡಾಗ ಜಾಗತಿಕವಾಗಿ ಆರೋಗ್ಯ ಕ್ಷೇತ್ರದ ಮೇಲೆ ಎದುರಾಗುವ ಅನೇಕ ಸವಾಲುಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಖಜಾಂಚಿಗಳಾದ ಸಿ.ಆರ್.ನಾಗರಾಜ, ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ. ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಇನ್ಫಾರ್ಮೇಶನ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಸಂಜೀವ್ ಕುಂಟೆ, ಕಾರ್ಯಾಗಾರ ಸಂಯೋಜಕರಾದ ಗಿರೀಶ್ ಮಂತ, ಸುದೀಪ್ ಮನೋಹರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















