ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದಲ್ಲಿ ವಸತಿ ರಹಿತ ನಿರಾಶ್ರಿತರಿಗೆ 60 ಘಟಕ ಸ್ಥಾಪನೆ ಮಾಡಲಾಗುವುದು ಎಂದು ವಿಶೇಷ ಆಯುಕ್ತ ದಯಾನಂದ ಮಾಹಿತಿ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬಿಬಿಎಂಪಿ ವ್ಯಾಪ್ತಿಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಹಾಗೂ ಇಂಪ್ಯಾಕ್ಟ್ ಇಂಡಿಯಾ ಕನ್ಸೋರ್ಟಿಯಂ ಸಹಯೋಗದಲ್ಲಿ ನಗರ ವಸತಿ ರಹಿತರ ಆಶ್ರಯ ಉಪ ಘಟಕದ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಬಿಬಿಎಂಪಿ ಕಲ್ಯಾಣ ಮತ್ತು ಆಡಳಿತ ವಿಶೇಷ ಆಯುಕ್ತ ಕೆ.ಎ.ದಯಾನಂದ, ಸಹಾಯಕ ಆಯುಕ್ತರಾದ ರಾಜೇಶ್ವರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಯಾನಂದ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ 14 ನಿರಾಶ್ರಿತರ ವಸತಿ ತಾಣಗಳನ್ನು ನಿರ್ಮಿಸಲಾಗಿದೆ. ಇನ್ನೂ 60 ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದ್ದು ಸದ್ಯದಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸ್ವತಂತ್ರ ನಿಷ್ಪಕ್ಷಪಾತ ಸಮಿತಿಯ ಸದಸ್ಯ, ವಕೀಲ ಟಿ.ವಿ.ನರಸಿಂಹಪ್ಪ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯ ಆದೇಶಗಳನ್ನು ಉಲಂಘನೆ ಮಾಡಬಾರದು. ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿ ಇಂತಿಷ್ಟು ವಸತಿ ಘಟಕಗಳು ಇರಬೇಕೆಂದು ಹೇಳಲಾಗಿದೆ ಅದನ್ನು ಅಧಿಕಾರಿಗಳು ಪಾಲನೆ ಮಾಡಬೇಕು. ನ್ಯಾಯಾಲಯ ಆದೇಶದಂತೆ 80 ರಷ್ಟು ನಿರಾಶ್ರಿತರ ವಸತಿ ಘಟಕಗಳು ಇರಬೇಕೆಂದು ತಿಳಿಸಲಾಗಿದೆ ಆದರೆ ಕೇವಲ 14 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ನಿರಾಶ್ರಿತರ ಘಟಕಗಳಿಗೆ ಬೇಕಾದ ಮೂಲಸೌಕರ್ಯ ಗಳನ್ನು ಒದಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ತಜ್ಞ ಎನ್. ಮಂಜುನಾಥ್ ಮಾತನಾಡಿ, ಸೂರಿಲ್ಲದ ನಿರಾಶ್ರಿತರಿಗೆ ಆಶ್ರಯ ನೀಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ. ಬೆಂಗಳೂರಿನಲ್ಲಿ 87 ನಿರಾಶ್ರಿತರ ಘಟಕಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಅದರಂತೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇಂಪ್ಯಾಕ್ಟ್ ಇಂಡಿಯಾದ ಯೋಜನಾ ವ್ಯವಸ್ಥಾಪಕ ರಾಮಚಂದ್ರಪ್ಪ ಹೆಚ್.ಟಿ. ಮಾತನಾಡಿ, ನ್ಯಾಯಾಲಯದ ಆದೇಶದಂತೆ ವಸತಿರಹಿತ ನಿರಾಶ್ರಿತರಿಗೆ ಬೆಂಗಳೂರು ಸೇರಿ ರಾಜ್ಯದೆಲ್ಲಡೆ ಆಶ್ರಯ ಘಟಕಗಳನ್ನು ಸ್ಥಾಪಿಸುವುದು ಪ್ರಮುಖ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂಪ್ಯಾಕ್ಟ್ ಸಂಸ್ಥೆ ಕೆಲಸ ನಿರ್ವಹಿಸುತ್ತದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post