ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಹರಿಹರ ತಾಲ್ಲೂಕು ಮಲೆಬೆನ್ನೂರಿನಲ್ಲಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭೇಟಿ ನೀಡಿದರು.

ಕಳೆದ ಐದು ದಿನಗಳ ಹಿಂದೆ ಲಕ್ಕವಳ್ಳಿ ಬಳಿಯ ನಾಲೆಗೆ ಅಪರಿಚಿತ ವ್ಯಕ್ತಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರ ಪರಿಣಾಮ, ವ್ಯಕ್ತಿಯ ದೇಹವನ್ನು ತೆಗೆಯುವ ಸಲುವಾಗಿ ಬಲ ದಂಡೆಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ ಹಿನ್ನಲೆಯಲ್ಲಿ ಹಾಗೂ ಜಲಾಶಯದಲ್ಲಿರುವ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಎದುರಾದ ತಾಂತ್ರಿಕ ಅಡಚಣೆಯ ಪರಿಣಾಮವು ಒಳಗೊಂಡು ಭದ್ರಾ ಅಚ್ಚುಕಟ್ಟಿನ ಕೊನೆಯಂಚಿನ ತಾಲ್ಲೂಕುಗಳ ರೈತರಿಗೆ ಭತ್ತ ನಟ್ಟಿ ಮಾಡುವ ಸಮಯದಲ್ಲಿ ನೀರಿನ ಅಲಭ್ಯತೆ ಉಂಟಾಗಿ ನೀರು ಹಂಚಿಕೆ ಮಾಡಲು ಕೈಗೊಂಡಿರುವ ರೊಟೇಷನ್ ಪದ್ಧತಿಯಲ್ಲಿ ಏರು ಪೇರಾಗುವ ಸಂಭವದಿಂದ ರೈತರು ಅಧಿಕಾರಿಗಳ ವಿರುದ್ಧ ಮೌಖಿಕವಾಗಿ ದೂರು ದಾಖಲಿಸಿ, ಸ್ಥಳಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು.

ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಹಾಗೂ ಸ್ಥಳೀಯ ರೈತರ ಸಮ್ಮುಖದಲ್ಲಿ ಕಚೇರಿಯ ಆವರಣದಲ್ಲಿ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ರೊಟೇಷನ್ ಅವಧಿಯನ್ನು ಎರಡು ದಿನದ ಮಟ್ಟಿಗೆ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿ, ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಕಳೆದ ಬಾರಿಯಂತೆ ಈ ಬಾರಿಯೂ ನೀರು ಕೊಟ್ಟೆ ಕೊಡುತ್ತೇನೆ ಎಂಬ ವಾಗ್ಧನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಸವಾಪಟ್ಟಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧನಂಜಯ್, ಮಲೆಬೆನ್ನೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಷ್, ಭದ್ರಾ ಕಾಡಾ ಹರಿಹರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರ, ಹರಿಹರ ಉಪ ವಿಭಾಗದ ಸಹಾಯಕ ಅಭಿಯಂತರರಾದ ಪ್ರಕಾಶ್ ಮತ್ತು ರಜತ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















