ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಸಮಾಜದೊಳಗೆ ಕೋಮುಸೌಹಾರ್ದ ಮತ್ತು ಧಾರ್ಮಿಕ ವಿಷಯಗಳ ಕುರಿತು ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಸುಳ್ಳುಸುದ್ದಿಗಳು ಹರಡಿದಲ್ಲಿ ಸಂಪೂರ್ಣ ಸಾಮಾಜಿಕ ಸ್ವಾಸ್ಥ್ಯ ಕೆಡಬಲ್ಲದು. ಆದಕಾರಣ ವಿಶ್ವಾಸಾರ್ಹ ಸುದ್ದಿ, ಮಾಹಿತಿ ಮೂಲಗಳು ಸಾಮಾಜಿಕ ಶಾಂತಿ, ಸುಸ್ಥಿರತೆಗಾಗಿ ಅತ್ಯವಶ್ಯ ಎಂದು ಕುವೆಂಪು ವಿವಿಯ #Kuvempu University ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪನವರು ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿರುವ ಸುಳ್ಳುಸುದ್ದಿ ಮತ್ತು ನೈಜತೆ ಪರಿಶೀಲನೆ ವಿಷಯ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Also read: ಶಿವಮೊಗ್ಗದಲ್ಲಿ ಎಎನ್ಎಫ್ ಡ್ರೋನ್ ಕಣ್ಗಾವಲು: ಹೇಗಿರಲಿದೆ ಕಾರ್ಯಾಚರಣೆ ಇಲ್ಲಿದೆ ಮಾಹಿತಿ
ವಿಶ್ವಾಸಾರ್ಹತೆ, ನೈತಿಕತೆ, ವಸ್ತುನಿಷ್ಠತೆಗಳು ಕೇವಲ ಪತ್ರಿಕೋದ್ಯಮದ ಮೂಲತತ್ವಗಳಲ್ಲ. ಸುಳ್ಳುಸುದ್ದಿಗಳು ಯತೇಚ್ಛವಾಗಿ ಹರಡುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ವಿಷಯವನ್ನು ಈ ಭೂತಗನ್ನಡಿಯೊಳಗೆ ಹಿಡಿದು ನೋಡಬೇಕಿದೆ. ಅಪೂರ್ಣ ಮಾಹಿತಿಗಳು, ತಪ್ಪುಮಾಹಿತಿಗಳು, ಸುಳ್ಳುಸುದ್ದಿಗಳು ವ್ಯವಸ್ಥೆಯೊಳಗೆ ವಿಜೃಂಭಿಸಿದಲ್ಲಿ, ನೈಜವಾದ, ಅಗತ್ಯವಾದ ಸುದ್ದಿಗಳು ಸಹ ನಿರ್ಲಕ್ಷ್ಯಕ್ಕೆ ಒಳಪಡುವ ಅಪಾಯವಿದೆ. ವಿಶ್ವಾಸಾರ್ಹ ಸುದ್ದಿಗಳು ಮಾತ್ರವೇ ಜನರ ನಡುವೆ, ಸಮಾಜದೊಳಗೆ ನಂಬುಗೆಯ, ಸೌಹಾರ್ದಯುತ ವಾತಾವರಣ ನಿರ್ಮಿಸಬಲ್ಲವು. ಅದಕ್ಕಾಗಿ ನಮಗಿಂದು ಮಾಹಿತಿಗಳ, ಸುದ್ದಿಗಳ ಸತ್ಯಾಸತ್ಯತೆ, ವಿಶ್ವಾಸಾರ್ಹತೆ ಪರಿಶೀಲಿಸುವ ಅನಿವಾರ್ಯತೆ ಬಂದಿದೆ. ಈ ಕಾರ್ಯಾಗಾರವು ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಬಲ್ಲದು ಎಂದರು.
ಬುಧವಾರ ಆರಂಭಗೊಂಡ ಎರಡು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ತಂತ್ರಾಂಶ ವಿಶ್ಲೇಷಕ ಸತೀಶ್ ಕುಮಾರ್ ಅವರು ಸುಳ್ಳುಸುದ್ದಿಗಳ ಉದ್ದೇಶಗಳು, ವಿಧಗಳು, ಹರಡುವ ಬಗೆಗಿನ ರೀತಿಗಳು ಹಾಗೂ ಪರಿಣಾಮಗಳ ಕುರಿತು ತಿಳಿಸುವ ಜೊತೆಗೆ ಅವುಗಳ ಸತ್ಯಾಸತ್ಯತೆ ತಿಳಿಯಲು ಇರುವ ತಂತ್ರಾಂಶಗಳು, ವೆಬ್ತಾಣಗಳು, ಸಲಕರಣೆಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಿದರು. ಶಿವಮೊಗ್ಗದ ಪತ್ರಕರ್ತ ಹಾಲಸ್ವಾಮಿ ಮಾತನಾಡಿ, ಪತ್ರಕರ್ತರು ಸುಳ್ಳುಸುದ್ದಿಗಳ ಕಾಲದಲ್ಲಿ ಎದುರಿಸುತ್ತಿರುವ ಸವಾಲುಗಳು, ಸತ್ಯವರದಿ ನೀಡುವ ಸವಾಲುಗಳ ಕುರಿತು ಮಾತನಾಡಿದರು.
ಗುರುವಾರ ಟೆಕ್ ಕನ್ನಡ ವಿಜ್ಞಾನ-ತಂತ್ರಜ್ಞಾನ ವೆಬ್ತಾಣದ ಪತ್ರಕರ್ತ ಕುಮಾರ್ ಎಸ್. ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು, ಪ್ರೊ. ಪೂರ್ಣಾನಂದ ಪ್ರಸ್ತಾವಿಕ ನುಡಿಗಳನ್ನು ಆಡಿದರು, ಡಾ. ಸತ್ಯಪ್ರಕಾಶ್ ಎಂ. ಆರ್. ವಂದಿಸಿದರು, ಪ್ರೊ. ವರ್ಗೀಸ್, ಡಾ. ಶ್ರೀಶೈಲ್ ಸೇರಿದಂತೆ ವಿವಿಧ ವಿಭಾಗಗಳ, ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post