ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಏಪ್ರಿಲ್ 01 ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ Central Minister Amith Shah ಅವರು ಭೇಟಿ ನೀಡಲಿದ್ದು ಯಶಸ್ವಿನಿ ಹಾಗೂ ನಂದಿನ ಕ್ಷೀರ ಅಭಿವೃದ್ಧಿ ಬ್ಯಾಂಕಿಗೆ ಚಾಲನೆ ನೀಡುವರು ಎಂದು ಸಿಎಂ ಬಸವರಾಜ ಬೊಮ್ಮಾಯಿ CM Basavaraja Bommai ತಿಳಿಸಿದರು.
ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ವರು ಬೆಂಗಳೂರು, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಗೆ ಪ್ರವಾಸ ಕೈಗೊಳ್ಳಲಿದ್ದು, ಮಾರ್ಚ್ 31 ರಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಪ್ರವಾಸ ಏಪ್ರಿಲ್1 ರಂದು ಬೆಳಿಗ್ಗೆ 10.30 ಕ್ಕೆ ತುಮಕೂರಿನ ಶ್ರೀ ಶಿವಕುಮಾರ ಸ್ವಾಮೀಜಿಗಳ 115 ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭೋಜನದ ನಂತರ ಮಧ್ಯಾಹ್ನ 2.00 ಗಂಟೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೆನಹಳ್ಳಿಯ ವೈದ್ಯಕೀಯ ಕಾಲೇಜಿನ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ 3.30 ಕ್ಕೆ ಬೆಂಗಳೂರಿನ ಅರಮನೆಯ ಸಭಾಂಗಣದಲ್ಲಿ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಿ ನೂತನ ನಂದಿನ ಕ್ಷೀರ ಅಭಿವೃದ್ಧಿ ಬ್ಯಾಂಕಿನ ಲೋಗೋ ಬಿಡುಗಡೆ ಮಾಡಲಿದ್ದಾರೆ. ಪುನರ್ ಪ್ರಾರಂಭಿಸಲಾಗಿರುವ ಯಶಸ್ವಿನಿ ಯೋಜನೆಯ ಲಾಂಛನ ಬಿಡುಗಡೆ ಮಾಡುವರು.ಅಂದು ಸಂಜೆ 7.00 ಗಂಟೆಗೆ ಪಕ್ಷದ ಕೋರ್ ಸಮಿತಿ ಸಭೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.
ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ:
ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸರ್ಕಾರಿ ಆದೇಶವನ್ನು ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಾಲು ಉತ್ಪಾದನೆ ಹಾಗೂ ಇತರೆ ಚಟುವಟಿಕೆಗಳಿಗೆ ಒಂದು ಆರ್ಥಿಕ ಸಂಸ್ಥೆ ಇರಬೇಕು ಎನ್ನುವ ಬೇಡಿಕೆ ಮತ್ತು ಅವಶ್ಯಕತೆಯನ್ನು ಮನಗಂಡು ನಾವು 100 ಕೋಟಿ ರೂ.ಗಳ ಬಂಡವಾಳ ನೀಡಲಿದ್ದು ಒಕ್ಕೂಟ ಗಳು ಸೇರಿ 260 ಕೋಟಿ ರೂ.ಗಳ ಷೇರು ಬಂಡವಾಳ ಹಾಕಿ ಆರ್ಥಿಕ ಸಂಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿ ಪ್ರಾರಂಭ ಮಾಡುತ್ತಿದ್ದೇವೆ ಎಂದರು. ಹಾಲು ಉತ್ಪಾದನೆ ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯ ಈಗಾಗಲೇ ಮುಂಚೂಣಿಯಲ್ಲಿದ್ದು, ಇದಕ್ಕೆ ಇನ್ನಷ್ಟು ಬಲ ನೀಡಿದಂತಾಗುತ್ತದೆ. ಹಾಲು ಉತ್ಪಾದಕ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟು 26 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದಾರೆ. 14900 ಹಾಲು ಉತ್ಪಾದಕ ಸಹಕಾರಿ ಸಂಘಗಳಿವೆ. 15 ಹಾಲು ಒಕ್ಕೂಟಗಳು ಈಗಾಗಲೇ ಕೆಲಸ ಮಾಡುತ್ತಿವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ರೈತರು ಸಮಗ್ರ ಕೃಷಿ ಮತ್ತು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಪ್ರಾರಂಭಿಸಿದೆ. ಅದರ ಉದ್ದೇಶದಂತೆ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಯ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟಿದ್ದೇವೆ. ಬರುವ ದಿನಗಳಲ್ಲಿ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಇದು ದೊಡ್ಡ ಪ್ರಮಾಣದ ಆರ್ಥಿಕ ಸಂಸ್ಥೆಯಾಗಿ ಬೆಳೆಯಲಿದೆ ಎಂದರು.
ಯಶಸ್ವಿನಿ ಯೋಜನೆ:
ಯಶಸ್ವಿನಿ ಯೋಜನೆ ಸಹ ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೆ ತರಲಾಗುತ್ತಿದೆ. ಯಶಸ್ವಿನಿ ಯೋಜನೆ ಯಾವ ರೀತಿ ನಡೆಯಬೇಕು ಎಂದು 2-3 ವಾರಗಳಲ್ಲಿ ತೀರ್ಮಾನಿಸಲಾಗುವುದು. ರೈತರಿಗೆ ಆರೋಗ್ಯದಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಾರೆ. ಅವರಿಗೆ ಸುಲಭವಾಗಿ ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಬಜೆಟ್ ನಲ್ಲಿ 300 ಕೋಟಿ ರೂ.ಗಳನ್ನು ಒಅಡಗಿಸಲಾಗಿದೆ. ಈ ಯೋಜನೆಯ ಕಾರ್ಯಾದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ಇದಕ್ಕೆ ಏಪ್ರಿಲ್ 01 ರಂದು ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ ಅವರು ನೆರವೇರಿಸಲಿದ್ದಾರೆ. ಪ್ರಥಮ ಬಾರಿಗೆ ಕೃಷಿ ಇಲಾಖೆಯಲ್ಲಿದ್ದ ಸಹಕಾರಿ ಇಲಾಖೆಯನ್ನು ಪ್ರಧಾನಮಂತ್ರಿಗಳು ಪ್ರತ್ಯೇಕ ಮಾಡಿದ್ದಾರೆ. ಹಲವಾರು ಆಮೂಲಾಗ್ರ ಬದಲಾವಣೆ ಬರುವ ದಿನಗಳಲ್ಲಿ ಸಹಕಾರಿ ರಂಗದಲ್ಲಿ ಆಗಲಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲು ಅವಕಾಶಗಳು ದೊರೆಯಲಿವೆ ಎಂದರು. ಅಮಿತ್ ಷಾ ಅವರು ಸಹಕಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಹಕಾರಿ ರಂಗಕ್ಕೆ ಉತ್ತಮ ಸಂದೇಶ ದೂರೆಯಲಿದೆ ಎಂಬ ಆಶಯ ನಮ್ಮದು ಎಂದರು.
Also read: ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಮತೋಲನ ಅಗತ್ಯ: ಡಾ. ಸತ್ಯಪ್ರಕಾಶ್
ಒಟ್ಟು ಯೋಜನೆಯನ್ನು ಸಹಕಾರಿ ಸೊಸೈಟಿ ಮುಖಾಂತರ ಅನುಷ್ಠಾನ ಮಾಡಲಾಗುವುದು. ಕೆಲವು ಮಾರ್ಪಾಡು ಮಾಡಬೇಕಾಗುತ್ತದೆ. ಮೊದಲು ಯಶಸ್ವಿನಿ ಯೋಜನೆ ಇದ್ದಾಗ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಇರಲಿಲ್ಲ. ಅವುಗಳು ಬಂದ ಮೇಲೆ ರೈತರಿಗೆ ನಿರ್ದಿಷ್ಟವಾಗಿ ಇರಬೇಕೆಂದು ಮಾರ್ಪಾಡು ಮಾಡಲಾಗುವುದು ಆ ಸಂದರ್ಭದಲ್ಲಿ ನಗರ ಪ್ರದೇಶಗಳ ಸಹಕಾರಿ ಸೊಸೈಟಿಗಳ ಬಗ್ಗೆಯೂ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದರು.
ಕಾರ್ಯಾದೇಶ:
ಬಜೆಟ್ ಮಂಡನೆಯಾದ ಒಂದು ಎರಡು ತಿಂಗಳ ನಂತರ ಆರ್ಥಿಕ ಇಲಾಖೆಗೆ ಕಳುಹಿಸಿ ವಾಪಸ್ಸು ಬರುವಾಗ ತಡವಾಗುತ್ತಿತ್ತು. ಅನುಷ್ಠಾನ ಸೆಪ್ಟೆಂಬರ್ ಆಕ್ಟೊಬರ್ ನಲ್ಲಿ ಆಗುತ್ತಿತ್ತು. ಅದು ಬದಲಾವಣೆ ಆಗಬೇಕೆಂದು ತೀರ್ಮಾನಿಸಿ ಈಗಾಗಲೇ ಈ ತಿಂಗಳ ಕೊನೆಯಲ್ಲಿ ಪ್ರಸ್ತಾವನೆಗಳು ತಯಾರಿವೆ.ಮುಖ್ಯ ಕಾರ್ಯದರ್ಶಿಗಳು 3-4 ಸಭೆಗಳನ್ನು ನಡೆಸಿದ್ದಾರೆ. ಮುಂದುವರೆದ ಯೋಜನೆಗಳ ಆದೇಶಗಳನ್ನು ಇಲಾಖೆಯವರೆ ನೀಡುತ್ತಾರೆ. ಹೊಸ ಯೋಜನೆಗಳಿಗೆ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಒಂದೇ ಸಭೆಯಲ್ಲಿ ಎಲ್ಲಾ ಅನುಮೋದನೆಗಳನ್ನು ನೀಡಿ ಬಹುತೇಕವಾಗಿ ಏಪ್ರಿಲ್ ಮೊದಲ ವಾರದಲ್ಲಿ ಕೆಲವನ್ನು ಎರಡನೇ ವಾರದಲ್ಲಿ ಆರ್ಥಿಕ ಇಲಾಖೆ ಅನುಮೋದನೆಯೊಂದಿಗೆ ಆದೇಶಗಳು ಹೊರಬೀಳಲಿವೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post