ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ಫೂರ್ತಿದಾಯಿನಿ… ಪ್ರಗತಿಗಾಮಿನಿ… ನಾ, ಹೆಣ್ಣೆಂಬುದೇ ಹೆಮ್ಮೆ.. ಎಂಬ ಶಿರೋನಾಮೆಯಡಿ ಏಪ್ರಿಲ್ 5ರಂದು ಬೆಳಿಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಿನಾಚರಣೆಯನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮವನ್ನು ಮತ್ತೂರಿನ ಖ್ಯಾತ ಗಮಕವಾಚಕ ಪದ್ಮಶ್ರೀ ಪುರಸ್ಕೃತ ವಿದ್ವಾನ್ ಹೆಚ್.ಆರ್. ಕೇಶವಮೂರ್ತಿ ಅವರು ಉದ್ಘಾಟಿಸಲಿರುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.

ಈ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ್ತಿ ಹಾಗೂ ಸಾಹಿತಿ ಇಂದುಮತಿ ಸಾಲಿಮಠ ಅವರು ವಿಶೇಷ ಉಪನ್ಯಾಸ ನೀಡುವರು. ನೌಕರರ ಸಂಘದ ಮಹಿಳಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಸಿ.ಎಂ. ಧನಲಕ್ಷ್ಮಿ, ಸುಖಿತಾ, ಆಂತರಿಕ ಲೆಕ್ಕ ಪರಿಶೋಧಕಿ ಎಂ. ಮಾಲತಿ, ಕೇಂದ್ರ ಸಂಘದ ಉಪಾಧ್ಯಕ್ಷ ಆರ್. ಮೋಹನ್ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ.ಟಿ. ಕೃಷ್ಣಮೂರ್ತಿ, ಕೋಶಾಧ್ಯಕ್ಷ ಹೆಚ್.ಎನ್. ರಾಘು ಮತ್ತು ಹಿರಿಯ ಉಪಾಧ್ಯಕ್ಷ ಆರ್.ಪಾಪಣ್ಣ ಸೇರಿದಂತೆ ಜಿಲ್ಲಾ ಸಂಘದ ಪದಾಧಿಕಾರಿಗಳು, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು-ಪದಾಧಿಕಾರಿಗಳು ಉಪಸ್ಥಿತರಿರುವರು.

ಮಧ್ಯಾಹ್ನ ಭೋಜನ ಅವಧಿಯ ನಂತರ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಭಾವಂತ ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಅವಧಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಮನೋರಂಜನಾತ್ಮಕ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
Also read: ಪ್ರತಿಯೊಬ್ಬ ಕೆಡೆಟ್ ತಮ್ಮನ್ನು ಸೇವೆಗಾಗಿ ತೊಡಗಿಸಿಕೊಳ್ಳಬೇಕು: ಲೆ. ಕರ್ನಲ್ ಇಂದ್ರನೀಲ್ ಘೋಷ್
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಹಿಳಾ ನೌಕರರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಭಾಗವಹಿಸುವ ಎಲ್ಲಾ ಮಹಿಳಾ ನೌಕರರಿಗೆ ನೆನಪಿನ ಕಾಣಿಕೆ ನೀಡಲಾಗುವುದು. ಅಂದು ಸಂಜೆ 5.30ರಿಂದ ಸದ್ಭಾವನಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಡಾ. ಶ್ರೀಪತಿ ಹಳಗುಂದ ಅವರು ರಚಿಸಿರುವ, ಗಣೇಶ ಕೆಂಚನಾಲ ಅವರು ನಿರ್ದೇಶಿಸಿರುವ ಮಾತೆ ಮಂಡೋದರಿ ಎಂಬ ಮಹಿಳಾ ಪ್ರಧಾನ ಮಾತೆ ಮಂಡೋದರಿ ಎಂಬ ಕಿರುನಾಟಕವನ್ನು ಮಲೆನಾಡು ಕಲಾತಂಡದ ಕಲಾವಿದರು ಅಭಿನಯಿಸುವರು. ನಂತರ ಝೀ ಕನ್ನಡ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ ಸರಿಗಮಪ ಕಲಾವಿದರಿಂದ ಗಾಯನ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಗಾಯಕರಾದ ಶ್ರೀಹರ್ಷ, ಶರಧಿಪಾಟೀಲ್ ಮತ್ತು ವರ್ಣ ಚವ್ಹಾಣ್ ಮತ್ತಿತರರು ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲಾ ಮಹಿಳಾ ಮತ್ತು ಪುರುಷ ನೌಕರರು, ನೌಕರರ ಕುಟುಂಬದವರು, ಸಾರ್ವಜನಿಕರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















