ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ನ 7ನೇ ವಾರ್ಷಿಕ ಸಮ್ಮೇಳನ ಏ. 8 ಮತ್ತು 9ರಂದು ಶಿವಮೊಗ್ಗದ ಕಲ್ಲಗಂಗೂರಿನ ರಾಮಕೃಷ್ಣ -ವಿವೇಕಾನಂದ ಆಶ್ರಮದ ಆಶ್ರಯದಲ್ಲಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ.
ಇದರೊಂದಿಗೆ ಶಿವಮೊಗ್ಗ ಆಶ್ರಮದ ವತಿಯಿಂದ ನೂತನವಾಗಿ ನಿರ್ಮಿಸಿರುವ ಭಗವಾನ್ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವನ್ನು ಏ.10 ರಂದು ಏರ್ಪಡಿಸಲಾಗಿದೆ ಎಂದು ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರು, ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ನ ಸಂಚಾಲಕ ಶ್ರೀ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಭಾರತದೆಲ್ಲೆಡೆಯಿಂದ ಸುಮಾರು 75 ಯತಿಗಳು, ಮಾತಾಜಿಗಳು, ಖ್ಯಾತಚಿಂತಕರು ಹಾಗೂ ಕರ್ನಾಟಕದ ಹಲವು ಮಠಾಧೀಶರು ಭಾಗವಹಿಸುತ್ತಿದ್ದಾರೆ. ದಿವ್ಯತ್ರಯರ ಸಂದೇಶಗಳನ್ನು ಮತ್ತು ಭಾರತೀಯ ಸನಾತನ ಪರಂಪರೆಯು ಪ್ರತಿಪಾದಿಸಿದ ಮಹಾನ್ ಮೌಲ್ಯಗಳನ್ನು ಸಮಾಜದ ಜನತೆಗೆ ಮಟ್ಟಿಸುವ ಸದುದ್ದೇಶದಿಂದ ರಾಷ್ಟ್ರಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಆಶ್ರಮಗಳ ಮತ್ತು ಭಕ್ತಜನರ ಸತ್ಸಂಗ ಕೇಂದ್ರಗಳಿಗೆ ಅರ್ಥಪೂರ್ಣ ಸ್ವರೂಪ ನೀಡಲು ರಾಮಕೃಷ್ಣ ಮಹಾಸಂಘವು “ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದು ಕಳೆದ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು.
ಕರ್ನಾಟಕದಲ್ಲಿನ “ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್’ 2012ರಲ್ಲಿ ಅಧಿಕೃತವಾಗಿ ಸ್ಥಾಪನೆಗೊಂಡು ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ದಿವ್ಯತ್ರಯರ ಸಂದೇಶಗಳನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸಮಾವೇಶದ ವಿಶೇಷವೆಂದರೆ ದಿವ್ಯತ್ರಯರ ಚಿಂತನೆ ಉಪದೇಶಗಳು ನಮ್ಮ ವೈಯಕ್ತಿಕ, ಕೌಟುಂಬಿಕ ಹಾಗೂ ಸಮಷ್ಟಿಸ್ತರದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೊಳಪಡುವ ನಿಟ್ಟಿನಲ್ಲಿ ಒತ್ತು ನೀಡಿ ಮಾರ್ಗದರ್ಶನ ನೀಡುವುದಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಯಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಪ್ರವೇಶ ಕೂಪನ್ಗಳನ್ನು ಪಡೆಯಬೇಕು. ಭಾಗವಹಿಸುವ ಭಕ್ತ ಪ್ರತಿನಿಧಿಗಳಿಗೆ ಸಮ್ಮೇಳನದ ಅವಧಿಯಲ್ಲಿ ಪ್ರಸಾದದ ವ್ಯವಸ್ಥೆಇರುತ್ತದೆ. ನೋಂದಾಯಿತ ಪರಸ್ಥಳದ ಭಕ್ತ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಕಾಣಿಕೆಗಳನ್ನು ನಗದು, ಚೆಕ್, ಡಿಮಾಂಡ್ಡ್ರಾಫ್ಟ್ ಮೂಲಕ “ರಾಮಕೃಷ್ಣ ವಿವೇಕಾನಂದ ಆಶ್ರಮ ಶಿವಮೊಗ್ಗ” ಹೆಸರಿನಲ್ಲಿ ಸಲ್ಲಿಸಬಹುದು ಎಂದು ವಿವರಿಸಿದರು.
ಶಿವಮೊಗ್ಗ ಕಲ್ಲಗಂಗೂರಿನಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿ ಮಾತನಾಡಿ, ಏ.7 ರಂದು ಸಂಜೆ 5ರಿಂದ 6:30ರವರೆಗೆ ಶುಭಮಂಗಳ ಶ್ರೀ ಗಣಪತಿ ದೇವಸ್ಥಾನದಿಂದ ಆದಿಚುಂಚನಗಿರಿ ಸಮುದಾಯ ಭವನದವರೆಗೆ ಯತಿವೃಂದಕ್ಕೆ ಪೂರ್ಣಕುಂಭ ಸ್ವಾಗತ ಶೋಭಾಯಾತ್ರೆ ನಡೆಯಲಿದೆ. ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿರುವರು. ನಂತರ ಪೂಜ್ಯ ಸ್ವಾಮೀಜಿಯವರುಗಳಿಂದ ಭಜನೆ ಮತ್ತು ಸತ್ಸಂಗ ನಡೆಯಲಿದೆ.
ಏ. 8ರಂದು ಬೆಳಿಗ್ಗೆ 9ರಿಂದ 9:45ರವರೆಗೆ ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಘುವೀರಾನಂದಜಿ ಮಹಾರಾಜ್ ಮತ್ತು ಯತಿ ಸಮೂಹದಿಂದ ಭಜನೆ ಕಾರ್ಯಕ್ರಮ ಇರುತ್ತದೆ.
ಉದ್ಘಾಟನಾ ಸಮಾರಂಭ ಅಂದು ಬೆಳಗ್ಗೆ 10ರಿಂದ 11:30ರವರೆಗೆ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸುವರು.ದಿವ್ಯ ಸಾನಿಧ್ಯ ಮತ್ತುಸ್ಮರಣ ಸಂಚಿಕೆ ಬಿಡುಗಡೆಯನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರು ಹಾಗೂ ರಾ.ವಿ.ಭಾ.ಪ್ರ.ಪ. ಕರ್ನಾಟಕದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನೆರವೇರಿಸುವರು.
Also read: ಏ.5ರಂದು ಮಾತೆ ಮಂಡೋದರಿ ನಾಟಕ, ಸರಿಗಮಪ ಕಲಾವಿದರಿಂದ ಗಾಯನ ವೈವಿಧ್ಯ
ಸ್ವಾಗತ ಮತ್ತು ಪರಿಚಯ ಕಾರ್ಯಕ್ರಮವನ್ನು ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿ ಹಾಗೂ ಪ್ರಾಸ್ತಾವಿಕ ನುಡಿಯನ್ನು ಗದಗ-ವಿಜಯಪುರರಾಮಕೃಷ್ಣ ವಿವೇಕಾನಂದಆಶ್ರಮದಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹಾಗೂ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿ ಆರಗ ಜ್ಞಾನೇಂದ್ರ ಆಗಮಿಸುವರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಹಲಸೂರು ರಾಮಕೃಷ್ಣ ಮಠದಅಧ್ಯಕ್ಷ ಶ್ರೀ ಸ್ವಾಮಿ ತತ್ವರೂಪಾನಂದಜಿ ಮಹಾರಾಜ್, ತಮಿಳುನಾಡು ಘಾಟಶಿಲಾ ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀ ಸ್ವಾಮಿ ನಟರಾಜಾನಂದಜಿ ಮಹಾರಾಜ್, ಕಾಂಚಿಪುರಂ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಸತ್ಯವಿದಾನಂದಜಿ ಮಹಾರಾಜ್, ತುಮಕೂರುರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ, ತುರುವೇಕೆರೆ, ಮಾದಿಹಳ್ಳಿ ರಾಮಕೃಷ್ಣ ಮಠದಅಧ್ಯಕ್ಷ ಶ್ರೀ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್, ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿತ್ಯಾಗೀಶ್ವರಾನಂದಜಿ ಮಹಾರಾಜ್ ಮತ್ತು ಶ್ರೀ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಉಪಸ್ಥಿತರಿರುವರು.
ಅಂದು ಬೆಳಗ್ಗೆ 11:45ರಿಂದ ಮಧ್ಯಾಹ್ನ 1:15ರವರೆಗೆ ಸ್ವಾಮಿ ವಿವೇಕಾನಂದರ ಚಿಂತನಧಾರೆ : ಪ್ರಥಮ ಗೋಷ್ಠಿ ನಡೆಯಲಿದೆ. ಬಾಲಪ್ರತಿಭೆ ಕುಮಾರಿ ಶಾರ್ವರಿ ಹುಬ್ಬಳ್ಳಿ ಇವರಿಂದ ಸ್ವಾಮಿ ವಿವೇಕಾನಂದರ ಚಿಂತನಧಾರೆ: ದ್ವಿತೀಯ ಗೋಷ್ಠಿ ನಡೆಯಲಿದೆ. ಏ. 9 ರಂದು ಶ್ರೀಮಾತಾ ಚಿಂತನಧಾರೆ-ಪ್ರಥಮಗೋಷ್ಠಿ ನಡೆಯಲಿದ್ದು, ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ರಾಮಕೃಷ್ಣ ಮಠ, ರಾಮಕೃಷ್ಣ ವಿದ್ಯಾರ್ಥಿ ಮಂದಿರಂ ಮುಖ್ಯಸ್ಥರು ಶ್ರೀ ಸ್ವಾಮಿ ತದ್ಯುಕ್ತಾನಂದಜಿ ಮಹಾರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಸಂಜೆ 4:15 ರಿಂದ 5:45 ಸಮಾರೋಪ ಸಮಾರಂಭ ನಡೆಯಲಿದೆ.
ಏ. 10ರಂದು ಮುಂಜಾನೆ 6ರಿಂದ 8ರವರೆಗೆ ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಲೋಕಾರ್ಪಣೆ ಮತ್ತು ಭಗವಾನ್ ಶ್ರೀ ರಾಮಕೃಷ್ಣ ಭಾವಚಿತ್ರ ಪ್ರತಿಷ್ಠಾಪನೆ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಯನ್ನು ಬೆಂಗಳೂರು ಬಸವನಗುಡಿಯಲ್ಲಿನ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಹಾಗೂ ಮಂದಿರದ ಲೋಕಾರ್ಪಣೆಯನ್ನು ಕೋಲ್ಕತ್ತಾ ಬೇಲೂರು ಮಠದರಾಮಕೃಷ್ಣ ಮಠ ಮತ್ತು ಮಿಷನ್ ಟ್ರಸ್ಟಿ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ನೆರವೇರಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಆತ್ಮದೀಪಾನಂದಜಿ ಮಹಾರಾಜ್, ಪ್ರಮುಖರಾದ ಪ್ರೇಮರೂಪಾನಂದಜಿ, ಡಾ.ಎ.ಎಂ.ಚಿಕ್ಕಸ್ವಾಮಿ, ಡಿ.ಎಲ್.ಮಂಜುನಾಥ್, ಅಶ್ವಥನಾರಾಯಣ ಶೆಟ್ಟಿ, ಉಮೇಶ್ ಆರಾಧ್ಯ, ಭವೇಂದ್ರಕುಮಾರ್, ಪರಮೇಶ್ವರ್ ಭಟ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post